ಹಸಿರು ಪಾಠ
ಒಂದು ಕಾಡು, ಒಂದು ಕೊಡಲಿ
ಮರವ ಕಡಿಯಲೊಬ್ಬ ತೊಡಗಿ
ಕಡಿದು, ಕೆಡವಿ, ಮೈಯ ಕೊಡವಿ ಜೋರು ನಕ್ಕನು
ಮರದ ಹೆಣಕೆ ಉಳಿಯ ಹೊಡೆದು ರೂಪ ಕೊಟ್ಟನು.
ಒಂದು ಸೂರ್ಯ, ಒಂದು ದಿನ
ಸುಡುತಲಿತ್ತು ಬೋಳು ವನ
ಉರಿದು, ಹರಿದ ಬಿಸಿಲ ಶಾಖ ವನವ ಸುಟ್ಟಿತು
ಹಸಿರು ಲೋಕ ಬೆಂದು ಹೋಗಿ ಬಯಲು ಹುಟ್ಟಿತು.
ಒಂದು ಮೋಡ, ಒಂದು ಗುಡುಗು
ನಭದ ತುಂಬ ಮಿಂಚ ಸೊಬಗು
ಗುಡುಗು, ಸಿಡಿಲು, ಮೇಘಸ್ಪೋಟ ಮಳೆಯು ಸುರಿಯಿತು
ಗುಡ್ಡ, ಬೆಟ್ಟ, ಬಯಲು ದಾಟಿ ಊರು ಸೇರಿತು.
ಒಂದು ಮಳೆ, ಒಂದು ನದಿ
ಉಕ್ಕಿ ಹರಿವ ರೋಷದಲಿ
ಊರು-ಕೇರಿ ಮಾರುದೂರ ಕೊಚ್ಚಿ ಹೋಯಿತು
ಬದುಕು, ಕೊಡಲಿ, ಮರದ ಕೊರಡು ಕಡಲು ಸೇರಿತು.
ಒಂದು ನೆರೆ, ಒಂದು ನೋಟ
ಮನುಜ ಕುಲಕೆ ನೀತಿಪಾಠ
ಮರೆತು, ಮೆರೆದು, ನಡೆದರಿನ್ನು ಅಂತ್ಯ ಕಾದಿದೆ.
ಅರಿತು, ಕಲಿತು, ನಡೆವ ಸಮಯ ಸನಿಹ ಬಂದಿದೆ.
- ಸ್ಕಂದ ಆಗುಂಬೆ.
(ಈ ಪದ್ಯ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗಿದೆ)
Comments
Post a Comment