ಪುನರ್ವಸು
ಆಷಾಢ ಮಾಸದ ಪುನರ್ವಸು ಮಳೆಯಿದ್ದಿರಬೇಕು, ನನ್ನ ಜೀವನದಲ್ಲಿ ಅಂತಹಾ ಮಳೆಯನ್ನು ಎಂದೂ ನೋಡಿರಲಿಲ್ಲ. ಅದ್ಯಾರ ಮೇಲಿನ ಮುನಿಸಿಗೆ ಮೋಡ ತನ್ನ ಗರ್ಭವನ್ನು ಹಿಸುಕಿಕೊಂಡಿತ್ತೋ ಗೊತ್ತಿಲ್ಲ. "ತುಂಬಾ ಮಳೆ ಅಲ್ವಾ?" ಹಳೆಯ ಮೂಕಾಂಬಿಕಾ ಬಸ್ಸಿನ ಕಿಟಕಿ ಸಂದಿಯಿಂದ ಒಳಹೊಕ್ಕು ಸೀಟನ್ನಾಕ್ರಮಿಸಿಕೊಳ್ಳಲು ಯತ್ನಿಸುತ್ತಿದ್ದ ಮಳೆ ನೀರಿನಾಸೆಗೆ ಕಲ್ಲು ಹಾಕಲು ಹೆಣಗಾಡುತ್ತಿದ್ದ ನನ್ನೆಡೆಗೆ ನಾಟಕೀಯವಾಗಿಯೇ ಪ್ರಶ್ನೆಯೊಂದನ್ನು ತೂರಿದಳು. "ವಿಷ್ಯಕ್ಕೆ ಬಾ" ತುಂಬಾ ಸ್ಪಷ್ಟವಾಗಿ ಹೇಳಿದೆ. ತನ್ನ ಹಳೇ ಸ್ಟೈಲಿನಲ್ಲೇ ಮುಂಗುರುಳು ಸರಿಸುತ್ತಾ, ಇರಿಸುಮುರಿಸಾದವಳಂತೆ ಒಂದಿಂಚು ದೂರ ಸರಿದು ಕೂರುವಷ್ಟರಲ್ಲಿ ಏಜೆಂಟರ್ ದೇವಣ್ಣ ನನ್ನೆಡೆಗೆ ಪರಿಚಿತದ ನಗು ಬೀರಿ, ಎರಡೂ ಟಿಕೆಟ್ ನೀನೇ ಮಾಡಿಸ್ತೀಯಾ? ಅಂತ ಕಣ್ಸನ್ನೆಯಲ್ಲೇ ಕೇಳಲು, ಹುಡುಗಿಯರು ಜೊತೆಗಿದ್ದಾಗ ಅವರ ಖರ್ಚನ್ನು ನಾವೇ ಭರಿಸಬೇಕೆಂಬ ಅಲಿಖಿತ ನಿಯಮವನ್ನು ಪಾಲಿಸುವ ಸಲುವಾಗಿ ಮಳೆಯಲ್ಲಿ ನೆಂದು ಒಂದಕ್ಕೊಂದು ಬೆಸೆದುಕೊಂಡಿದ್ದ ಐವತ್ತು ರೂಪಾಯಿಯ ಎರಡು ನೋಟುಗಳನ್ನು ಅಂಗಿಯ ಜೇಬಿನಿಂದ ಜೋಪಾನವಾಗಿ ಹೊರಗೆಳೆದು ದೇವಣ್ಣನ ಕೈಗಿತ್ತು "ಒಂದ್ ತೀರ್ಥಹಳ್ಳಿ, ಒಂದ್ ಮಂಡಗದ್ದೆ" ಎಂದು ಅದಾಗ ತಾನೇ ಬಂದಿದ್ದ ಡಿಜಿಟಲ್ ಟಿಕೆಟ್ ಮಶೀನಿನಿಂದ ಕಿರ್ರ್ ಕಿರ್ರ್ ಎಂದು ಸದ್ದು ಮಾಡುತ್ತಾ ಹೊರ ಬರುತ್ತಿದ್ದ ಟಿಕೆಟ್ ಚೀಟಿಯನ್ನು ಗಮನಿಸುತ್ತಾ ಕುಳಿತೆ.