ಬಾಪೂ ತತ್ವಗಳನ್ನು ಮುನ್ನೆಲೆಗೆ ತರುವ ವಿನೂತನ ಪ್ರಯತ್ನ : ಎಸ್.ಡಿ.ಎಂ ಪತ್ರಿಕೋದ್ಯಮ ವಿಭಾಗದಿಂದ ‘ಬಾಪೂ’ ವೆಬ್‌ಸಿರೀಸ್



ಮಹಾತ್ಮಗಾಂಧಿ ಪ್ರತಿಯೊಬ್ಬ ಭಾರತೀಯನ ಪಾಲಿಗೂ ಆದರ್ಶ ಪುರುಷ. ಅವರ ತತ್ವ, ಸಿದ್ಧಾಂತಗಳು ಸಾರ್ವಕಾಲಿಕ ಹಾಗೂ ಅನುಕರಣೀಯ. ಆದರೆ, ಬದಲಾಗುತ್ತಿರುವ ಕಾಲಘಟ್ಟದಲ್ಲಿ ಅದನ್ನು ಅಳವಡಿಸಿಕೊಳ್ಳುವುದು ಹೇಗೆ ಎಂಬುದು ಮಾತ್ರ ಬಹುತೇಕರ ಮುಂದಿರುವ ಅತಿ ದೊಡ್ಡ ಪ್ರಶ್ನೆ. ಇಂತಹ ಅನುಮಾನಗಳಿಗೆ ಉತ್ತರವೆಂಬಂತೆ ಗಾಂಧೀಜಿಯನ್ನು ವರ್ತಮಾನಕ್ಕೆ ಅನ್ವಯಿಸಿ ಅವರ ತತ್ವಗಳು ಇಂದಿಗೂ ಪ್ರಸ್ತುತ ಎಂಬುದನ್ನು ತೋರಿಸಲು ಉಜಿರೆಯ ಎಸ್‌ಡಿಎಂ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ವಿಭಿನ್ನ ಪ್ರಯತ್ನವೊಂದಕ್ಕೆ ಕೈ ಹಾಕಿದೆ.
ಗಾಂಧೀಜಿ ಹಾಗೂ ಅವರ ತತ್ವಗಳನ್ನು ಇಂದಿನ ತಲೆಮಾರಿಗೆ ಸಲೀಸಾಗಿ ತಲುಪಿಸುವ ಉದ್ದೇಶದೊಂದಿಗೆ “ಬಾಪೂ” ಹೆಸರಿನ ವೆಬ್‌ಸೀರಿಸ್ ಆರಂಭಿಸಲಾಗಿದೆ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಎಸ್‌ಡಿಎಂ ಮಲ್ಟಿಮೀಡಿಯಾ ಸ್ಟುಡಿಯೋ ನಿರ್ಮಾಣದಲ್ಲಿ ಮೂಡಿಬರುತ್ತಿರುವ “ಬಾಪೂ” ವರ್ತಮಾನದಲ್ಲಿ ಗಾಂಧೀಜಿಯವರ ಚಿಂತನೆ ಹೇಗೆ ಪ್ರಸ್ತುತ ಹಾಗೂ ಅವುಗಳನ್ನು ಹೇಗೆ ಅಳವಡಿಸಿಕೊಳ್ಳಬಹುದು ಎಂಬುದನ್ನು ಸರಳವಾಗಿ ಮನವರಿಕೆ ಮಾಡಿಕೊಡುವ ಪ್ರಯತ್ನವಾಗಿದೆ. ಕಾಲ್ಪನಿಕ ಸನ್ನಿವೇಶವೊಂದರಲ್ಲಿ ಶಾಲಾಮಕ್ಕಳನ್ನು ಹಾಗೂ ಗಾಂಧಿ ಪಾತ್ರವನ್ನು ಬಳಸಿಕೊಂಡು ಹೆಣೆಯಲಾಗುತ್ತಿರುವ ಕತೆಯಲ್ಲಿ ಗಾಂಧೀಜಿಯ ಚಿಂತನೆಗಳನ್ನು ಇಂದಿನ ತಲ್ಲಣಗಳ ನಡುವೆ ವ್ಯಕ್ತಪಡಿಸಲಾಗುತ್ತಿದೆ.
ಹೆಚ್ಚಾಗಿ ಸಿನಿಮಾ, ಕತೆ, ಉಪದೇಶಗಳಿಗಷ್ಟೇ ಸೀಮಿತವಾಗಿದ್ದ ಗಾಂಧೀಜಿಯನ್ನು ವೆಬ್‌ಸೀರೀಸ್ ಮೂಲಕ ತೋರಿಸಲು ಹಲವು ಪೂರ್ವತಯಾರಿಗಳನ್ನು ಮಾಡಿಕೊಂಡ ತಂಡ, ಗಾಂಧಿ ತತ್ವಗಳನ್ನು ಪಾಠದಂತೆ ಒಪ್ಪಿಸುವುದಕ್ಕಿಂತ ವರ್ತಮಾನಕ್ಕೆ ಅನ್ವಯಿಸಿ ಹೇಳಿದರೆ ಹೆಚ್ಚು ಪರಿಣಾಮಕಾರಿ ಎಂದು ಚಿಂತಿಸಿದ ಫಲವಾಗಿ “ಬಾಪೂ” ಶುರುವಾಗಿದೆ. ಈಗಾಗಲೇ ಆರಂಭಿಕ ನಾಲ್ಕು ಸಂಚಿಕೆಗಳಲ್ಲಿ ಸತ್ಯ ಮತ್ತು ಅಹಿಂಸೆ, ಸತ್ಯಾಗ್ರಹ, ಸ್ವರಾಜ್ಯ ಹಾಗೂ ಧರ್ಮ ಎಂಬ ನಾಲ್ಕು ವಿಚಾರಧಾರೆಗಳನ್ನೊಳಗೊಂಡ ಕತೆ ಮೂಡಿಬಂದಿದ್ದು ಪ್ರತಿಯೊಂದು ತತ್ವಗಳ ಮೂಲ ಉದ್ದೇಶ ಹಾಗೂ ಅವುಗಳ ಸಾರ್ವಕಾಲಿಕತೆಯನ್ನು ಸೊಗಸಾಗಿ ವಿವರಿಸಲಾಗಿದೆ.
ಎಸ್‌ಡಿಎಂ ಸಂಸ್ಥೆಯ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ಅವರ ಪರಿಕಲ್ಪನೆಯಲ್ಲಿ “ಬಾಪೂ” ಮೂಡಿಬರುತ್ತಿದ್ದು ವಿಭಾಗದ ಮುಖ್ಯಸ್ಥ ಪ್ರೊ.ಭಾಸ್ಕರ್ ಹೆಗಡೆ ಅವರ ಪ್ರೋತ್ಸಾಹದೊಂದಿಗೆ ಅಧ್ಯಾಪಕರಾದ ಸುನಿಲ್ ಹೆಗ್ಡೆ, ಮಾಧವ್ ಹೊಳ್ಳ, ಕೃಷ್ಣಪ್ರಶಾಂತ್ ಮಾರ್ಗದರ್ಶಕರಾಗಿದ್ದಾರೆ. ಹವ್ಯಾಸಿ ಕಲಾವಿದ ಉಜಿರೆ ನಾಗೇಶ್ ರಾವ್ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಎಸ್‌ಡಿಎಂ ಸಂಸ್ಥೆಯ ವಿದ್ಯಾರ್ಥಿಗಳೇ ಅಭಿನಯಿಸುತ್ತಿದ್ದಾರೆ.
ಪ್ರತಿದಿನ ಕನ್ನಡಿಯಲ್ಲಿ ನಮ್ಮ ಮುಖವನ್ನು ನಾವು ನೋಡಿಕೊಳ್ಳುವುದನ್ನು ತಪ್ಪಿಸಿಕೊಂಡರೂ, ನೋಟಿನ ಮೇಲಿರುವ ಗಾಂಧೀಜಿಯನ್ನು ನೋಡದೆಯೇ ದಿನದೂಡಲು ಆಗುವುದಿಲ್ಲ ಅಷ್ಟರ ಮಟ್ಟಿಗೆ ನಮ್ಮ ಜೊತೆಯಲ್ಲಿದ್ದಾರೆ ಗಾಂಧಿ ಆದರೆ, ಈ ಮಹಾತ್ಮನನ್ನು ನಮ್ಮ ಜೇಬಿಗೆ ಮಾತ್ರ ಸೀಮಿತಗೊಳಿಸಿಕೊಂಡಿದ್ದೇವಾ ಅಥವಾ ಹೃದಯದೊಳಕ್ಕೂ ಇಟ್ಟುಕೊಂಡಿದ್ದೇವಾ ಎಂದು ಯೋಚಿಸುತ್ತಾ ಈ ವೆಬ್‌ಸೀರೀಸ್ ವೀಕ್ಷಿಸಿದರೆ “ಬಾಪೂ” ಹೃದಯಕ್ಕೆ ಲಗ್ಗೆ ಇಡುವುದರಲ್ಲಿ ಸಂಶಯವಿಲ್ಲ.
ಮಹಾತ್ಮಾ ಗಾಂಧೀಜಿಯವರ ೧೫೦ ಜನ್ಮದಿನಾಚರಣೆಯ ಹಿನ್ನೆಲೆಯಲ್ಲಿ ಕಳೆದ ವರ್ಷ ಬಾಪೂ ವೆಬ್ ಸೀರೀಸ್ ಆರಂಭಿಸಲಾಗಿದ್ದು ಸುಮಾರು ೧೫ರಿಂದ ೨೫ ನಿಮಿಷಗಳ ಕಾಲಮಿತಿಯಲ್ಲಿಯುವ ಈ ಸಂಚಿಕೆಗಳು ಯೂಟ್ಯೂಬ್ ಎಸ್‌ಡಿಎಂ ಮಲ್ಟಿಮೀಡಿಯಾ ಪುಟದಲ್ಲಿ ಲಭ್ಯ. ಈಗಾಗಲೇ ಆರಂಭಿಕ ನಾಲ್ಕು ಸಂಚಿಕೆಗಳಲ್ಲಿ ಸತ್ಯ ಮತ್ತು ಅಹಿಂಸೆ, ಸತ್ಯಾಗ್ರಹ, ಸ್ವರಾಜ್ಯ ಹಾಗೂ ಧರ್ಮ ಎಂಬ ನಾಲ್ಕು ವಿಚಾರಧಾರೆಗಳನ್ನೊಳಗೊಂಡ ಕತೆ ಮೂಡಿಬಂದಿದೆ. ಪ್ರತಿಯೊಂದು ತತ್ವಗಳ ಮೂಲ ಉದ್ದೇಶ ಹಾಗೂ ಅವುಗಳ ಸಾರ್ವಕಾಲಿಕತೆಯನ್ನು ಸೊಗಸಾಗಿ ವಿವರಿಸಲಾಗಿದೆ.

ಗಾಂಧೀಜಿ ತತ್ವಾದರ್ಶವನ್ನು ಪರಿಚಯಿಸುವ ವಿಶಿಷ್ಟ ಪ್ರಯತ್ನ
ಎಸ್‌ಡಿಎಂ ವಿದ್ಯಾ ಸಂಸ್ಥೆ ಕಳೆದ ಒಂದು ವರ್ಷದಿಂದ ಗಾಂಧೀಜಿಯ ವಿಚಾರಧಾರೆಗಳನ್ನು  ಸಂಸ್ಥೆಯ ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳಲ್ಲಿ ಮನನ ಮಾಡಲು ಪ್ರಯತ್ನಿಸುತ್ತಿದೆ. ಪ್ರತೀ ತಿಂಗಳ ಒಂದನೇ ಹಾಗೂ ೧೫ನೇ ತಾರೀಖಿನಂದು ಸಂಸ್ಥೆಯ ಉದ್ಯೋಗಿಗಳು ಬಿಳೀ ಬಣ್ಣದ ಖಾದಿ ಬಟ್ಟೆಯನ್ನು ಧರಿಸುತ್ತಿದ್ದಾರೆ. ಪ್ರತಿ ಸೋಮವಾರ ಗಾಂಧೀಜಿಯ ವಿಚಾರಧಾರೆಗಳನ್ನೊಳಗೊಂಡ ಉದ್ಧರಣೆಗಳನ್ನು ಸಿಬ್ಬಂದಿಗಳ ಇ-ಮೇಲ್ ಗಳಿಗೆ ಕಳುಹಿಸುವ ವಿಶಿಷ್ಟ ಪ್ರಯತ್ನವನ್ನೂ ಮಾಡಲಾಗುತ್ತಿದೆ.



-------------------------------------------------------------------------

“ನಾನು ಹಲವು ನಾಟಕಗಳನ್ನು ಮಾಡಿದ್ದೇನೆ. ಆದರೆ ಗಾಂಧಿ ಪಾತ್ರದಿಂದ ಸಿಕ್ಕ ಅನುಭವ ಸಂಪೂರ್ಣ ವಿಭಿನ್ನ. ಎಲ್ಲರ ಮನಸ್ಸಿನಲ್ಲಿ ಗಾಂಧಿ ನೆಲೆಸಿರುವುದರಿಂದ ಅಂತಹ ಮಹಾತ್ಮರ ಪಾತ್ರವನ್ನು ನಿಭಾಯಿಸುವುದು ದೊಡ್ಡ ಜವಾಬ್ದಾರಿ. ಬಣ್ಣ ಹಚ್ಚುವ ಮುನ್ನ ಗಾಂಧಿಯ ಕುರಿತು ಓದಿಕೊಂಡು, ಅವರ ಫೋಟೋಗಳನ್ನು, ಅವರ ನಡೆನುಡಿಯನ್ನು ನನ್ನದಾಗಿಸಿಕೊಳ್ಳುವ ಅವಶ್ಯಕತೆ ಇತ್ತು. ಈ ನಿಟ್ಟಿನಲ್ಲಿ ನಿರ್ದೇಶನ ತಂಡದ ಸುನಿಲ್ ಹೆಗ್ಡೆ, ಮಾಧವ್ ಹೊಳ್ಳ, ಕೃಷ್ಣ ಪ್ರಶಾಂತ್ ಅವರು ಸಾಕಷ್ಟು ಸಹಾಯ ಕೂಡ ಮಾಡಿದ್ದಾರೆ”.
- ನಾಗೇಶ್ ರಾವ್, ಉಜಿರೆ. ಗಾಂಧಿ ಪಾತ್ರಧಾರಿ.

“ಗಾಂಧೀಜಿಯವರ ವಿಶಾಲ ವ್ಯಕ್ತಿತ್ವವನ್ನು ಅತ್ಯಂತ ಕಡಿಮೆ ಅವಧಿಯಲ್ಲಿ, ಸರಳೀಕರಿಸಿ ಚಿಕ್ಕ ಮಕ್ಕಳಿಗೂ ಅರ್ಥವಾಗುವಂತೆ ಹೇಳಬೇಕೆನ್ನುವುದು “ಬಾಪೂ” ಉದ್ದೇಶ. ಆದ್ದರಿಂದ ಕತೆ, ಚಿತ್ರಕತೆ, ಸಂಭಾಷಣೆ ಎಲ್ಲವಕ್ಕೂ ಮಹತ್ವ ನೀಡಬೇಕು. ವೆಬ್‌ಸೀರೀಸ್ ಆರಂಭಿಸುವ ಮುನ್ನ ಇದ್ದ ತಳಮಳವಿತ್ತು ಆದರೆ, ನಂತರ ಕಡಿಮೆಯಾಗುತ್ತಾ ಬಂತು. ಬಾಪೂ ಹೆಚ್ಚೆಚ್ಚು ಜನರನ್ನು ತಲುಪಿದ್ದಾರೆ ಎಂದು ಹೇಳಿಕೊಳ್ಳುವುದಕ್ಕೆ ಖುಷಿ ಆಗುತ್ತದೆ”.
- ಮಾಧವ್ ಹೊಳ್ಳ, ಎಸ್.ಡಿ.ಎಂ ಮಲ್ಟಿಮೀಡಿಯಾ ಸ್ಟುಡಿಯೋ

- ಸ್ಕಂದ ಆಗುಂಬೆ

ಈ ಲೇಖನ ಕನ್ನಡಪ್ರಭ ಪತ್ರಿಕೆಯ ಇಂದಿನಸ್ಪೆಷಲ್ ಪುರವಣಿಯಲ್ಲಿ ಪ್ರಕಟವಾಗಿದೆ.

(ಮೂಲಪ್ರತಿ)


Comments

Popular posts from this blog

"ಕಂದ" ಪದ್ಯ

ಆಗುಂಬೆ ಎಂಬ ಹಸಿರುಲೋಕ!

ಬರಗಾಲ