Friday, 29 December 2017

ನನ್ನದೆಂತದೋ‌ ಗೋಳು..


ನಿರ್ಭಾವುಕತೆಯಾ? ಕಪಟತನವಾ? ಭಾವನೆಗಳನ್ನು ಅನುಭವಿಸಲಾರದಷ್ಟು ಸಮಯದ ಅಭಾವವಾ? ವಿವಿಧ ಭಾವಗಳನ್ನು ಕ್ಷಣಾರ್ಧದಲ್ಲಿ ಅನುಭವಿಸಿ ಮರೆಯುವ ತಾಕತ್ತಾ?
ಊಹ್ಞೂಂ... ಇದನ್ನೆಲ್ಲಾ ನಾ ಹೇಗೆ ಹೇಳಲಿ? ಹುಟ್ಟಿ ಇಪ್ಪತ್ತು ಚಳಿಗಾಲ ಕಳೆದಿಲ್ಲ, ಇನ್ನೂ ಎಳೆಬಿಸಿಲು ಕಂಡರೆ ಮುದುರಿ ಕುಳಿತುಕೊಳ್ಳುವ ನನಗೆ ಇದನ್ನು ವಿವರಿಸಬಲ್ಲ ಅನುಭವ ದಕ್ಕುವುದೆಂತು? ಅನುಭವದ ಬದಲಾಗಿ ಒಂದಷ್ಟು ಅನುಮಾನಗಳು ಬಲಿತಿವೆ, ಪದೇ ಪದೇ ಕಾಡುತ್ತವೆ, ಕೊರೆಯುತ್ತವೆ.. ನಂಗೇನು ಗೊತ್ತಿಲ್ಲ ಬಿಟ್ಟುಬಿಡು ಎಂದಾಗ ತಲೆ ಮೊಟಕಿ ಹೋಗಿ ಉತ್ತರ ಹುಡುಕೋ ಸೋಂಭೇರಿ ಎಂದು ಗದರುತ್ತವೆ. ಅಯ್ಯೋ!! ಹಾಳು ಚಳಿ.. ಮುರುಟಿ ಕೂತಷ್ಟು ದೇಹದ ಸಂದುಗಳಲ್ಲೆಲ್ಲಾ ಓಡಾಡುತ್ತದೆ, ಬೆಚ್ಚಗೆ ಮಲಗೋಣ ಎಂದರೆ ಇದೊಂದು ಪೀಕಲಾಟ, ಆಗಲ್ಲಪ್ಪಾ!!
ಇದ್ದ ವಿಷಯವನ್ನು ಇದ್ದಷ್ಟೇ ಹೇಳಿದರೆ ಚೋಟುದ್ದ, ಅಷ್ಟರಲ್ಲೇ ಹೇಳಿ ಮುಗಿಸಬಾರದಾ ಮಾರಾಯ ಎಂದು ಒಳಗೊಬ್ಬ ಕೂಗುತ್ತಿದ್ದಾರೆ.. ಕಿವುಡು ಬೆರಳುಗಳೆರೆಡು ದಿಕ್ಕಿಗೊಂದರಂತೆ ಬಿದ್ದಿರುವ ಅಕ್ಷರವನ್ನು ಕುಟ್ಟಿಕುಟ್ಟಿ ಕಥೆ ಕಟ್ಟುತ್ತಿವೆ, ಸಾಕ್ಷಿಗೆ ನಿದ್ದೆಗೆಟ್ಟಿರುವ ಕಣ್ಣಿವೆ!
ಎಲ್ಲಿಂದ ಶುರು ಮಾಡಿದೆ?? ಹ್ಞಾಂ.. ವಿಷಯಕ್ಕೆ ಬರ್ತೇನೆ. ಎಲ್ಲಾ ಸರಿ!! ಒಂದು ದಿನದಲ್ಲಿ ಅದೆಷ್ಟು ಭಾವನೆಗಳನ್ನು ನಿಜವಾಗಿ ಅನುಭವಿಸೋಕೆ ಸಾಧ್ಯ? ಒಂದು, ಎರಡು, ಮೂರು.....ನೂರು?? ನೂರಾ!! ನೂರೆಲ್ಲಾ ಗಂಟೆಯಲ್ಲೇ ಆಗಿಹೋಗ್ಬೋದು ಕಣಾ.. ಅಂತ ರಾಗ ತೆಗೆಯುತ್ತಾನೆ ಒಳಗಿನವನು.. ಹ್ಞೂಂ ಮತ್ತೆ... ಈ ಫೇಸ್ಬುಕ್ಕಲ್ಲಿ ಕ್ಯೂ ನಿಲ್ಲುವ ಸಾಲುಸಾಲು ಪೋಸ್ಟ್ಗಳು ಒಂದಕ್ಕೊಂದು ಸಂಬಂಧವೇ ಇರೋದಿಲ್ಲ.. ಆದರೂ ಅದನ್ನೆಲ್ಲಾ ಅನುಭವಿಸೋದಿಲ್ವಾ? ಊಹ್ಞೂಂ ಅನ್ನೋದಾದ್ರೆ, ಹಾರ್ಟು, ವಾವ್, ಹಹ್ಹಹ್ಹ, ಛೇ, ಗುರ್ರ್ ಅಂತೆಲ್ಲಾ ಹತ್ತಾರು ಭಾವಗಳನ್ನು ಒಂದೇ ನಿಮಿಷದಲ್ಲಿ ರಿಯಾಕ್ಟ್ ಮಾಡೋದ್ ಹೇಗೆ? ಒಂದು ಪೋಸ್ಟ್ ಓದಿ, ಅದರ ಬಗ್ಗೆ ಕಡೇಪಕ್ಷ ಎರಡು.. ಹೋಗಲಿ ಒಂದು ನಿಮಿಷವಾದರೂ ಯೋಚಿಸ್ತೀವಾ?? ಊಹ್ಞೂಂ ಅಷ್ಟೆಲ್ಲಾ ಟೈಮೆಲ್ಲಿದೆ? ಹಾಗಾದ್ರೆ ಬಿಟ್ಟಿ ಒತ್ಬೋದು ಅಂತ ಸುಖಾಸುಮ್ಮನೇ ಒತ್ತಿಬಿಡೋದಾ ಅಂತ ಮರುಪ್ರಶ್ನೆ!! ಕೇಳಿದ್ಯಾರು? ನಾನೇ...
ಇಂಥಾ ದ್ವಂದ್ವವೊಂದು ನನ್ನಲ್ಲಿ ಹುಟ್ಟೇ ಇರಲಿಲ್ವಾ? ಹುಟ್ಟಿತ್ತು... ಬರೆದಿರಲಿಲ್ಲ..!! ಇವತ್ತು, ಈ ರಣ ಚಳಿಯಲ್ಲೇ ತಗಲಾಕ್ಕೊಂಡಿದೀನಿ ಅಷ್ಟೇ.. ಓದುವವರ ತಲೆ ಕೆಡಿಸೋಕೆ... ಸರಿ..ಸರಿ... ಉತ್ತರ ಸಿಕ್ತಾ? ಮಲಗ್ಬೇಕು. ಇಲ್ಲಾ ತಡ್ಯೋ... ಇನ್ನೂ ಬರ್ದಾಗಿಲ್ಲ.. ಕೂಗು ಜೋರಾಯಿತು ಅವನದ್ದು.
ಹೇಳ್ಬೇಕಾಗಿದ್ದನ್ನ ಸ್ಪಷ್ಟವಾಗಿ ಹೇಳಿದ್ದೀನಾ?? ಹೇಗೂ ಇಲ್ಲಿಯ ತನಕ ತಾಳ್ಮೆಯಿಂದ ಓದಿದ್ದೀರಲ್ಲ.. ಈ ಅನುಮಾನಕ್ಕೂ ಹಾಗೇ ಉತ್ತರಿಸಿ ಹೋಗಿ.. ಒಳಗಿನವನ ಆತ್ಮಕ್ಕಾದರೂ ಶಾಂತಿ ದಕ್ಕಲಿ..
ಅಂದಹಾಗೆ ಪ್ರಶ್ನೆ ತುಂಬಾ ಸಿಂಪಲ್ - ನಿರ್ಭಾವುಕತೆಯಾ? ಕಪಟತನವಾ? ಭಾವನೆಗಳನ್ನು ಅನುಭವಿಸಲಾರದಷ್ಟು ಸಮಯದ ಅಭಾವವಾ? ವಿವಿಧ ಭಾವಗಳನ್ನು ಕ್ಷಣಾರ್ಧದಲ್ಲಿ ಅನುಭವಿಸಿ ಮರೆಯುವ ತಾಕತ್ತಾ?

Tuesday, 26 December 2017

ಹಸಿರು ಲಂಗದ ಹುಡುಗಿ



ಹಸಿರು ಲಂಗದ ಹುಡುಗಿ
ಓರೆ ಬೈತಲೆ ತೆಗೆದು
ಮುಂಗುರುಳ ಸುತ್ತಿಟ್ಟು
ನಗೆ ಚೆಲ್ಲುತಾಳೆ..
ಸುರಗಿ ಸಂಪಿಗೆ ಜಾಜಿ
ಮಲ್ಲಿಗೆ ಮಂದಾರ
ಸುರಿದು ಮಾಲೆಯ ಕಟ್ಟಿ
ಘಮ್ಮೆನ್ನುತಾಳೆ..
ಅಗಲ ಹಣೆ ನಡುವೆ
ಚುಕ್ಕಿ ಬೊಟ್ಟನು ಇಟ್ಟು
ಆಗಾಗ ತಿರುಗಿ
ಹುಬ್ಬೆತ್ತುತಾಳೆ..
ಕಪ್ಪು ಕಾಡಿಗೆ ಹಚ್ಚಿ
ಬೆರಗು ನೋಟ ಚೆಲ್ಲಿ
ಕಣ್ಣ ಬಾಣ ನೆಟ್ಟು
ಗುರಿ ಹೂಡುತಾಳೆ..
ಹೊಳೆವ ಬಳೆ ಕಾಲ್ಗೆಜ್ಜೆ
ಚೋಟುದ್ದ ಕಿವಿಯೋಲೆ
ಎಳೆ ಸರವ ತೊಟ್ಟು
ಘಲ್ಲೆನ್ನುತಾಳೆ..
ತುಂಬು ಹರೆಯದ ಬಾಲೆ
ಎಳಿತಾಳೆ ಸೆಳಿತಾಳೆ
ಆಗಾಗ ಬಂದು
ಎದೆ ತುಳಿಯುತಾಳೆ..

ಇಂತಿಷ್ಟು ಕಾರಣವೋ
ಇನ್ನೆಷ್ಟು ಕಾರಣವೋ
ಹಸಿರು ಲಂಗದ ಹುಡುಗಿ
ಮನ ಕದಿಯುತಾಳೆ
ಮಾತೇ ಮರೆಯುತಿದೆ
ಎದೆ ಜೋರು ಬಡಿಯುತಿದೆ
ಹೋಗಿ ಹೇಳಿದರೀಗ
ಏನೆನ್ನುತಾಳೆ..?

- ಅನಾಸ್ಕ

Thursday, 7 December 2017

ಸಂದರ್ಶನ : ಅಂಶಿ ಪ್ರಸನ್ನಕುಮಾರ್


"ಕನ್ನಡಪ್ರಭ" - ನಾನು ಅತ್ಯಂತ ಇಷ್ಟಪಡುವ ದಿನಪತ್ರಿಕೆ. ಪತ್ರಿಕೋದ್ಯಮದೆಡೆಗೆ ಬಾಲ್ಯದಿಂದಲೂ ಆಸಕ್ತಿಯಿದ್ದರೂ ಅದರೆಡೆಗೆ ಕುತೂಹಲ ಮೂಡಿಸಿದ್ದು ಕನ್ನಡಪ್ರಭ. ಪಿಯುಸಿ ಮುಗಿಸಿ ಪತ್ರಿಕೋದ್ಯಮಕ್ಕೆ ಕಾಲಿಟ್ಟ ಸಂದರ್ಭದಲ್ಲಿ ನಮಗೆ ಉಪನ್ಯಾಸಕರಾಗಿದ್ದ ಲೋಹಿತ್ ಸರ್ ನನ್ನನ್ನು ಕರೆದು ಯಾವುದಾದರು ಪತ್ರಿಕೆಯಲ್ಲಿ Internship ಮಾಡ್ತೀಯಾ? ಎಂದಾಗ ಖುಷಿಯಿಂದ ಹ್ಞೂಂ ಎಂದಿದ್ದೆ. ಹಾಗಾದರೆ ಕನ್ನಡಪ್ರಭ ಕಚೇರಿಗೆ ಹೋಗು ನಾನು ಅಂಶಿ ಸರ್ ಹತ್ತಿರ ಮಾತನಾಡಿದ್ದೇನೆ ಎಂದಾಗಲಂತೂ ಹಿರಿಹಿರಿ ಹಿಗ್ಗಿದ್ದೆ.
ಕನ್ನಡಪ್ರಭ ಕಚೇರಿಗೆ ಕಾಲಿಟ್ಟ ಮೊದಲ ದಿನದಿಂದ ಇಂದಿನವರೆಗೂ ಈ ಮೂರು ವರ್ಷಗಳ ಅವಧಿಯಲ್ಲಿ ದಿನದಿನವೂ ಹೊಸ ಪಾಠಗಳನ್ನು ಕಲಿಯುತ್ತಲೇ ಇದ್ದೇನೆ, ಮೈಸೂರಿನ ಕನ್ನಡಪ್ರಭ ಕಚೇರಿ ನನಗೆ ಕಾಲೇಜಿಗಿಂತಲೂ ಹೆಚ್ಚಿನ ಪಾಠವನ್ನು ಕಲಿಸಿದೆ. ಅಲ್ಲಿರುವ ಪ್ರತಿಯೊಬ್ಬರೂ ನನಗೆ ಅಣ್ಣಂದಿರ ಹಾಗೆ ಸಿಡುಕದೆ ಪ್ರೀತಿಯಿಂದ ಮಾರ್ಗದರ್ಶನ ನೀಡುತ್ತಾರೆ. ಅದರಲ್ಲೂ ಮೈಸೂರು ಆವೃತ್ತಿಯ ಸಂಪಾದಕರಾಗಿರುವ ಅಂಶಿ ಪ್ರಸನ್ನಕುಮಾರ್ ಸರ್ ಅವರಂತೂ ಮಾರ್ಗದರ್ಶನದ ಜೊತೆಜೊತೆಗೆ ಸದಾ ಪ್ರೋತ್ಸಾಹಿಸುತ್ತಲೇ ಇರುತ್ತಾರೆ. ಆಗಾಗ ನಾನು ಕಚೇರಿಗೆ ಗೈರಾಗುತ್ತಲೇ ಇರುವುದರಿಂದ "Regularly Irregular fellow" ಎಂಬ ಪಟ್ಟವನ್ನು ಕಟ್ಟಿ ರೇಗಿಸುತ್ತಿರುತ್ತಾರೆ.
ಕನ್ನಡಪ್ರಭದಲ್ಲಿ ನನ್ನ ಬೈಲೈನ್ ಬಂದಾಗಲೆಲ್ಲಾ ಹಲವರು ಅರೆ!! ಕೆಲಸಕ್ಕೆ ಸೇರಿಕೊಂಡಾಯ್ತಾ ಎಂದು ಕೇಳುವುದುಂಟು, ಹೀಗೆ ಬೈಲೈನ್ ಕೊಡುತ್ತಾ, ವರದಿ ಮಾಡುವುದನ್ನು ಕಲಿಸುತ್ತಾ ದಿನೇ ದಿನೇ ಪತ್ರಿಕಾ ಪ್ರಪಂಚದ ಆಳ ಅಗಲಗಳನ್ನು ಪರಿಚಯಿಸುತ್ತಿರುವ ಅಂಶಿ ಸರ್ ಅವರು ಬರೆದಿರುವ "ಮೈಸೂರು ಚಾಮರಾಜನಗರ ರಾಜಕೀಯ ಇತಿಹಾಸ" ಪುಸ್ತಕ ಬಿಡುಗಡೆಗೆ ಸಿದ್ಧವಾಗಿದೆ.
ಈ ಸುಸಂದರ್ಭದಲ್ಲಿ ಅವರಿಗೆ ಶುಭ ಹಾರೈಸುತ್ತಾ - ಕೆಲ ದಿನಗಳ ಹಿಂದೆ ಅವರೊಂದಿಗೆ ನಡೆಸಿದ್ದ ಚಿಕ್ಕ ಸಂದರ್ಶನವನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ…


ಕನ್ನಡ ಪತ್ರಿಕೋದ್ಯಮದಲ್ಲಿ ಹೆಸರು ಮಾಡಿದವರ ಪಟ್ಟಿ ತುಂಬಾ ದೊಡ್ಡದಿದೆ. ಆದರೆ ದಕ್ಕಿದ ಗೌರವಕ್ಕೆ ಯಾವುದೇ ಚ್ಯುತಿ ಬಾರದಂತೆ ಅತ್ಯಂತ ಜವಾಬ್ದಾರಿಯುತವಾಗಿ ಕಾಯ್ದುಕೊಂಡು, ಹಮ್ಮುಬಿಮ್ಮುಗಳಿಲ್ಲದೇ ಸರಳವಾಗಿ ಬದುಕುತ್ತಿರುವವರು ವಿರಳ. ಸುದೀರ್ಘ ಮೂವತ್ತು ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಜೀವಿಸಿ, ಹಲವು ಯುವ ಪತ್ರಕರ್ತರಿಗೆ ಮಾರ್ಗದರ್ಶಕರಾಗಿ, ಬದಲಾಗುತ್ತಿರುವ ಪತ್ರಿಕೋದ್ಯಮ ಲೋಕದಲ್ಲಿ ಅದರ ಮೂಲ ತತ್ವಗಳಿಗೆ ಧಕ್ಕೆ ಬಾರದಂತೆ ಕಾರ್ಯ ನಿರ್ವಹಿಸುತ್ತಿರುವವರು ಶ್ರೀಯುತ ಅಂಶಿ ಪ್ರಸನ್ನಕುಮಾರ್. ಕರ್ನಾಟಕ ರಾಜ್ಯ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ಕರ್ನಾಟಕ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಪ್ರಶಸ್ತಿಗಳಿಗೆ ಭಾಜನರಾಗಿರುವ ಶ್ರೀಯುತರು ಹತ್ತಕ್ಕೂ ಹೆಚ್ಚು ಪುಸ್ತಕಗಳ ಲೇಖಕರೂ ಹೌದು. ಪ್ರಸ್ತುತ ಕನ್ನಡಪ್ರಭ ದೈನಿಕದ ಮೈಸೂರು ಆವೃತ್ತಿ ಸಂಪಾದಕರಾಗಿರುವ ಅಂಶಿ ಪ್ರಸನ್ನಕುಮಾರ್ ಅವರೊಂದಿಗಿನ ಕಿರು ಸಂದರ್ಶನ ಇಲ್ಲಿದೆ.


ಸ್ಕಂದ : ನಮಸ್ತೇ, ಪತ್ರಿಕೋದ್ಯಮದಲ್ಲಿನ ನಿಮ್ಮ ಸುದೀರ್ಘ ಪಯಣ ಹೇಗಿದೆ?

ಅಂಶಿ ಪ್ರಸನ್ನಕುಮಾರ್ : ನಾನು ಪತ್ರಿಕೋದ್ಯಮಕ್ಕೆ ಕಾಲಿಟ್ಟು ಮೂವತ್ತು ವರ್ಷಗಳಾಯಿತು, ಪ್ರಾರಂಭದ ದಿನಗಳಲ್ಲಿ ಆಂದೋಲನ ದಿನಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿ, ನಂತರ ಕನ್ನಡಪ್ರಭ ಸೇರಿದೆ. ಹಿರಿಯರು ಮತ್ತು ಸಹೋದ್ಯೋಗಿಗಳೆಲ್ಲರ ಸಹಕಾರದಿಂದ ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಗಿದೆ.


ಸ್ಕಂದ : ಪತ್ರಿಕೋದ್ಯಮದೆಡೆಗೆ ಸೆಳೆತ ಮೂಡಲು ಕಾರಣವೇನು?

ಅಂಶಿ : ವಿದ್ಯಾರ್ಥಿ ದೆಸೆಯಿಂದಲೂ ಸಾಹಿತ್ಯ ಕ್ಷೇತ್ರದೆಡೆಗೆ ಒಲವಿತ್ತು, ಕಥೆ, ಕವನಗಳನ್ನು ಬರೆಯುವ ಹವ್ಯಾಸವನ್ನು ರೂಢಿಸಿಕೊಂಡಿದ್ದು, ಒಂದೆರೆಡು ಕವನಗಳಿಗೆ ಬಹುಮಾನವೂ ಲಭಿಸಿತ್ತು. ಸಾಹಿತ್ಯಾಸಕ್ತಿಯೇ ನನ್ನನ್ನು ಪತ್ರಿಕಾ ರಂಗದೆಡೆಗೆ ಕರೆದು ತಂದಿತು.


ಸ್ಕಂದ : ಪತ್ರಕರ್ತನಾಗಿ ನಿಮ್ಮ ಆರಂಭದ ದಿನಗಳಿಗೂ, ಇಂದಿಗೂ ಏನು ವ್ಯತ್ಯಾಸ ಕಾಣುತ್ತದೆ?

ಅಂಶಿ : ತುಂಬಾ ಬದಲಾವಣೆ ಆಗಿದೆ, ಪತ್ರಿಕೋದ್ಯಮದ ಸ್ವರೂಪವೇ ಬದಲಾಗಿದೆ. ಅಂದಿನ ದಿನಗಳಲ್ಲಿ ಇದ್ದ ಗುಣಾತ್ಮಕತೆ, ನೈತಿಕತೆ ಈಗಿನ ಪತ್ರಕರ್ತರಲ್ಲಿ ಕಾಣುತ್ತಿಲ್ಲ. ಸ್ಪರ್ಧೆಯ ಜಂಜಾಟದಲ್ಲಿ ಪತ್ರಿಕೋದ್ಯಮದ ಮೂಲ ಆಶಯ ಮರೆಯಾಗುತ್ತಿದೆ.


ಸ್ಕಂದ : ಮುದ್ರಣ ಮಾಧ್ಯಮ ಮತ್ತು ದೃಶ್ಯ ಮಾಧ್ಯಮ ಇವೆರಡರಲ್ಲಿ ಯಾವುದು ಉತ್ತಮ?

ಅಂಶಿ : ಪತ್ರಿಕೋದ್ಯಮದ ಅರ್ಥವೇ ಇಂದು ಬದಲಾಗಿದೆ. ಅಂತಹದ್ದರಲ್ಲಿ ದೃಶ್ಯ ಮಾಧ್ಯಮಕ್ಕೆ ಹೋಲಿಸಿದರೆ ಪತ್ರಿಕಾರಂಗ ಜವಾಬ್ದಾರಿಯುತವಾಗಿದ್ದು, ತನ್ನ ಘನತೆ ಉಳಿಸಿಕೊಂಡಿದೆ. ಪತ್ರಿಕೆಯಲ್ಲಿ ಕೆಲಸದ ಜೊತೆಜೊತೆಗೆ ಜ್ಞಾನಾಭಿವೃದ್ಧಿ ಮಾಡಿಕೊಳ್ಳಲೂ ಅವಕಾಶವಿದೆ. ಓದು, ಬರಹವೇ ಪತ್ರಕರ್ತನನ್ನು ಕ್ರಿಯಾಶೀಲರನ್ನಾಗಿಸುವುದು. ಆದರೆ ದೃಶ್ಯ ಮಾಧ್ಯಮ ಸಮಯದೊಟ್ಟಿಗೆ ಮಾಡುವ ಹೋರಾಟ. ಪ್ರತಿ ಕ್ಷಣವೂ ಒತ್ತಡವಿರುತ್ತದೆ, ಟಿಆರ್‌ಪಿ ಉಳಿಸಿಕೊಳ್ಳುವುದಕ್ಕಾಗಿ ತಮ್ಮ ಮೌಲ್ಯವನ್ನೇ ಬದಿಗಿಡುವ ಪರಿಸ್ಥಿತಿಯನ್ನೂ ಎದುರಿಸಬೇಕಾಗುತ್ತದೆ. ಧಾವಂತದ ಬದುಕಿನಲ್ಲಿ ರಣರಂಗೋತ್ಸಾಹದಿಂದ ಕಾರ್ಯ ನಿರ್ವಹಿಸಬೇಕಾಗುತ್ತದೆ. ಆದ್ದರಿಂದ ದೃಶ್ಯ ಮಾಧ್ಯಮಕ್ಕೆ ಹೋಗುವ ಮೊದಲು ಕೆಲ ವರ್ಷಗಳ ಮಟ್ಟಿಗಾದರೂ ಪತ್ರಿಕೆಯಲ್ಲಿ ದುಡಿದು ಅನುಭವ ಪಡೆದುಕೊಳ್ಳುವುದು ಉತ್ತಮ.


ಸ್ಕಂದ : ಪತ್ರಿಕೋದ್ಯಮ ಓದಿದವರು ಯಾವ ಯಾವ ಕ್ಷೇತ್ರಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳಬಹುದು?

ಅಂಶಿ : ಪತ್ರಿಕೋದ್ಯಮ ಓದಿದವರಿಗೆ ಅವಕಾಶ ತುಂಬಾ ವಿಫುಲವಾಗಿದೆ. ಮುದ್ರಣ ಮತ್ತು ದೃಶ್ಯ ಮಾಧ್ಯಮವನ್ನು ಹೊರತುಪಡಿಸಿ ರೇಡಿಯೋ, ಸರ್ಕಾರಿ ನೌಕರಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕೆಲಸ ಪಡೆಯಬಹುದು. ಉತ್ತಮ ಭಾಷಾ ಜ್ಞಾನ ಮತ್ತು ಬರವಣಿಗೆಯ ಹಿಡಿತ ಉಳ್ಳವರನ್ನು ಪ್ರತಿಷ್ಠಿತ ಕಂಪೆನಿಗಳು ಕೈ ಬೀಸಿ ಕರೆಯುತ್ತವೆ. ಆದ್ದರಿಂದ ಪತ್ರಿಕೋದ್ಯಮವೆಂದರೆ ಕೇವಲ ಪತ್ರಿಕೆ, ಟಿವಿ ಎಂದು ಭಾವಿಸಬೇಕಿಲ್ಲ.


ಸ್ಕಂದ : ಮೈಸೂರಿನ ಎಲ್ಲಾ ಪತ್ರಿಕಾ ಕಚೇರಿಗಳಿಗಿಂತ ಕನ್ನಡಪ್ರಭ ತುಂಬಾ ವಿಭಿನ್ನ. ನೀವು ಹಲವು ವಿದ್ಯಾರ್ಥಿಗಳಿಗೆ ಕೆಲಸ ಕಲಿಯಲು ಅವಕಾಶ ಕಲ್ಪಿಸಿದ್ದೀರಿ, ಯಾವುದೇ ಅಹಂಕಾರವಿಲ್ಲದೇ ಕಚೇರಿಯಲ್ಲಿ ಉತ್ತಮ ವಾತಾವರಣ ಕಟ್ಟಿಕೊಡುವ ಮೂಲಕ ಪತ್ರಿಕೋದ್ಯಮದ ಪರಿಚಯ ಮಾಡಿಕೊಡುವ ನಿಮ್ಮ ಕುರಿತು ಹಲವರು ಉತ್ತಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಅಂಶಿ : ಪತ್ರಿಕೋದ್ಯಮ ನಿಂತ ನೀರಲ್ಲ, ಅದು ನಿರಂತರ ಹೊಸತನವನ್ನು ಬಯಸುತ್ತದೆ. ಇಂತಹ ಕ್ಷೇತ್ರಕ್ಕೆ ಬರಲು ಆಸಕ್ತಿ ಹೊಂದಿದವರಿಗೆ ಸೂಕ್ತ ಮಾರ್ಗದರ್ಶನ ನೀಡುವುದರಿಂದ ಉತ್ತಮ ಪತ್ರಕರ್ತರನ್ನು ರೂಪಿಸಬಹುದು. ಹೆಚ್ಚಿನ ವಿದ್ಯಾರ್ಥಿಗಳು ಪತ್ರಿಕೋದ್ಯಮದ ಕುರಿತು ಇಲ್ಲಸಲ್ಲದ ಕಲ್ಪನೆಗಳನ್ನು ಕಟ್ಟಿಕೊಂಡು, ಭ್ರಮೆಯಲ್ಲಿ ಬದುಕುತ್ತಿರುತ್ತಾರೆ. ಪತ್ರಕರ್ತ ಎಲ್ಲವನ್ನೂ ಮೀರಿದವ, ತನ್ನಿಚ್ಛೆಯಂತೆ ಬದುಕಬಹುದು ಎಂದು ಭಾವಿಸುತ್ತಾರೆ. ಆದರೆ ಪತ್ರಿಕೋದ್ಯಮದ ಮೂಲ ರೂಪವೇ ಬೇರೆ, ಇದರ ನೈಜತೆಯ ಕುರಿತು ಅವರಲ್ಲಿ ಅರಿವು ಮೂಡಿಸಿ, ವಿದ್ಯಾರ್ಥಿಗಳಾಗಿದ್ದಾಗಲೇ ಉತ್ತಮ ಮೌಲ್ಯಗಳನ್ನು ಬಿತ್ತಿದರೆ ಮಾತ್ರ ಮುಂದೆ ಅವರಿಂದ ಉತ್ತಮ ಪತ್ರಕರ್ತನನ್ನು ನಿರೀಕ್ಷಿಸಲು ಸಾಧ್ಯ. ಅದರ ಹೊರತಾಗಿ ಅಹಂಕಾರದಿಂದ ನಡೆದುಕೊಂಡರೆ ಅವರ ಆಸಕ್ತಿಯನ್ನು ನಾವೇ ಚಿವುಟಿದಂತಾಗುತ್ತದೆ.


ಸ್ಕಂದ : ಪತ್ರಿಕೋದ್ಯಮಕ್ಕೆ ಬರಲಿಚ್ಛಿಸುವ ಯುವ ಪತ್ರಕರ್ತರಿಗೆ ನಿಮ್ಮ ಸಂದೇಶವೇನು?

ಅಂಶಿ : ಪತ್ರಕರ್ತನಾಗಲು ಬಯಸುವವನಿಗೆ ಅತಿ ಮುಖ್ಯವಾಗಿ ನೈತಿಕತೆ ಇರಬೇಕು. ನೈತಿಕತೆ ಇಲ್ಲದವರು ಪತ್ರಕರ್ತರಾಗಲು ಯೋಗ್ಯರಲ್ಲ. ಹಣ ಸಂಪಾದನೆ, ಪ್ರಚಾರ ಪ್ರಿಯತೆಯನ್ನೇ ಗುರಿಯಾಗಿಸಿಕೊಂಡು ಈ ಕ್ಷೇತ್ರಕ್ಕೆ ಬಂದರೆ ಹೆಚ್ಚು ದಿನ ಇಲ್ಲಿ ಉಳಿಯುವುದಿಲ್ಲ. ಸಮಾಜಮುಖಿ ಕೆಲಸ ಮಾಡುವ ಮನೋಭಾವ, ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡು ಬಂದರೆ ಮಾತ್ರ ಯಶಸ್ಸು ಸಾಧ್ಯ.

-----------------


- ಸ್ಕಂದ ಆಗುಂಬೆ 

Wednesday, 29 November 2017

ಹರೆಯದ ನದಿ ಸುಗಮವಾಗಿ ಹರಿಯಲಿ..



ಹೊರಗೆಲ್ಲೋ ಸುತ್ತಾಡಿ ಮನೆಗೆ ಬಂದು ಕೂತಿರುತ್ತಾನಷ್ಟೇ. "ಎಲ್ ಹೋಗಿದ್ದಿ? ಹೋಗೋಕ್ ಮುಂಚೆ ಒಂದ್ ಮಾತ್ ಹೇಳಿ ಹೋಗೋಕಾಗಲ್ವಾ? ಸುಸ್ತಾಗಿದೆ ಅನ್ಸುತ್ತೆ.. ಫ್ರೆಶ್ ಆಗು, ತಿನ್ನೋಕ್ ಏನಾರ್ ಕೊಡ್ತೀನಿ.." ಅಂತ ತುಸು ಸಿಡುಕುತ್ತಲೇ ಪ್ರೀತಿ ತೋರುತ್ತಾಳೆ ಅಮ್ಮ. ಆಕೆ ಒಳಗೆ ಹೋಗಿ ಹತ್ತು ನಿಮಿಷವಾದರೂ ಈತ ಕುಳಿತಲ್ಲಿಂದ ಎದ್ದಿರುವುದಿಲ್ಲ, ಮತ್ತೆ ಕರೆಯುತ್ತಾಳೆ. ಉತ್ತರ ಬಾರದಿದ್ದನ್ನು ನೋಡಿ ಬೈಯುತ್ತಲೇ ಧಾವಿಸಿದವಳಿಗೆ, ಅಷ್ಟೊತ್ತು ಮೊಬೈಲ್ ನೋಡುತ್ತಾ ಮುಗುಳ್ನಗುತ್ತಿದ್ದ ಮಗ ತಾನು ಬಂದ ಕೂಡಲೇ ಸ್ಕ್ರೀನ್ ಆಫ್ ಮಾಡಿದ್ದನ್ನು ಕಂಡು ಸಣ್ಣಗೆ ಅನುಮಾನ! ಬಾಯ್ಬಿಟ್ಟು ಕೇಳುವುದಿಲ್ಲ, ಸುಮ್ಮನೇ ಗಮನಿಸುತ್ತಾಳೆ. ಸಾಲದ್ದಕ್ಕೆ ಅನುಮಾನಗಳಿಗೆ ಪುಷ್ಟಿ ಕೊಡುವಂತೆ ಮಗನ ನಡವಳಿಕೆಯಲ್ಲಿ ಸಣ್ಣಪುಟ್ಟ ಬದಲಾವಣೆ ಕಾಣುತ್ತಲೇ ಇರುತ್ತದೆ.

ಮೊನ್ನೆ ಮೊನ್ನೆ ತಾನೇ ಪಿಯುಸಿ ಮುಗಿಸಿ ಡಿಗ್ರಿ ಜೀವನಕ್ಕೆ ಕಾಲಿಟ್ಟ ಮಗ ದೊಡ್ಡವನಂತೆ ವರ್ತಿಸಲು ಆರಂಭಿಸುತ್ತಾನೆ, ಸ್ಕೂಲಿಗೆ ಹೋಗುತ್ತಿದ್ದಾಗ ಟಿವಿ ನೋಡೋಕೂ ಪರ್ಮಿಶನ್ ಕೇಳುತ್ತಿದ್ದವನು ಈಗ ಅದೆಲ್ಲಿಗೆ ಹೋಗುವುದಾದರೂ ಹೇಳುವುದಿಲ್ಲ. ರಾತ್ರಿ ಹನ್ನೆರಡಾದರೂ ಮೊಬೈಲ್‍ನಲ್ಲೇ ಮುಳುಗಿರುತ್ತಾನೆ. ಕಾರಣವೇ ಇಲ್ಲದೆ ಸಿಡುಕುತ್ತಾನೆ, ಕಾರಣ ಕೇಳಿದರೆ ಸ್ವಲ್ಪ ಸುಮ್ನಿರು ಮಾರಾಯ್ತಿ ಅಂತ ಮುಖ ತಿರುಗಿಸುತ್ತಾನೆ. ಅರೆ!! ಇವನಿಗೇನಾಯಿತು, ಲವ್ವು? ಫ್ರೆಂಡ್ಸ್ ಸಹವಾಸ? ಸಿಗರೇಟು? ಡ್ರಗ್ಸ್? ಅಯ್ಯೋ.. ನ್ಯೂಸ್ ಚಾನೆಲ್‍ಗಳಲ್ಲಿ ದಿನಾ ಅಂಥದ್ದೇ ಕಥೆಗಳ ರಿಪೀಟೆಡ್ ಟೆಲಿಕ್ಯಾಸ್ಟ್‍ಗಳನ್ನು ನೋಡಿದ ಅಮ್ಮನಿಗೀಗ ತಲೆಬಿಸಿ!

ತರಕಾರಿ ತರೋಕೆ ಅಂತ ಮಾರ್ಕೆಟ್‍ಗೆ ಹೋದವಳಿಗೆ ಅಚಾನಕ್ ಆಗಿ ತನ್ನ ಕಾಲೇಜು ಗೆಳತಿ ಸಿಗುತ್ತಾಳೆ, ಕ್ಷೇಮ - ಕುಶಲವನ್ನೆಲ್ಲಾ ವಿಚಾರಿಸುವಷ್ಟರಲ್ಲಿ ತನ್ನ ಮಗ ಓದುತ್ತಿರುವ ಕಾಲೇಜಿನಲ್ಲೇ ಗೆಳತಿಯ ಮಗಳೂ ಓದುತ್ತಿರುವ ವಿಷಯ ತಿಳಿಯುತ್ತದೆ, ಸಾಲದ್ದಕ್ಕೆ ಇಬ್ಬರೂ ಒಂದೇ ತರಗತಿ!! ತಾವಿಬ್ಬರೇ ಮತ್ತೆ ಕಾಲೇಜಿಗೆ ಹೋದಷ್ಟು ಖುಷಿಪಡುತ್ತಾರೆ. ಆದರೆ, ತನ್ನ ಮಗಳೂ ರಾತ್ರಿಯೆಲ್ಲಾ ಮೊಬೈಲಲ್ಲಿ ಮುಳುಗಿರುತ್ತಾಳೆ ಎಂಬ ಸ್ನೇಹಿತೆಯ ಮಾತು ಕೇಳಿದವಳಿಗೆ ಒಳಗೊಳಗೇ ಏನೋ ತಳಮಳ, ಅತ್ತ ಸ್ನೇಹಿತೆಗೂ! ಕಾಲೇಜಿನಿಂದ ಬಂದ ಮಗನ ಬಳಿ ಸ್ನೇಹಿತೆಯ ಮಗಳ ಕುರಿತು ಹೇಳಿದಾಗ, "ಓಹ್, ಶೀ ಈಸ್ ಮೈ ಬೆಸ್ಟೀ.. ತುಂಬಾ ಒಳ್ಳೆಯವ್ಳು" ಎಂದು ಕಣ್ಣರಳಿಸುತ್ತಾನೆ. ಅಮ್ಮನ ಎದೆಯಾಳದಲ್ಲಿದ್ದ ಭಯಂಕರ ಅನುಮಾನವೊಂದು ಸ್ಫೋಟಗೊಳ್ಳುತ್ತದೆ. "ಆ ಹುಡುಗಿಗೂ ಇವನಿಗೂ ಲವ್ವೇನಾದರೂ ಇರಬಹುದಾ..?" ಬಾಯ್ಬಿಟ್ಟು ಕೇಳುವುದಿಲ್ಲ, ಸುಮ್ಮನೇ ಗಮನಿಸುತ್ತಾಳೆ.

ಇದು ಕಾಲೇಜಿಗೆ ಹೋಗುವ ಮಕ್ಕಳಿರುವ ಹೆಚ್ಚಿನ ಮನೆಗಳಲ್ಲಿ ಸರ್ವೇಸಾಮಾನ್ಯವಾಗಿ ಕಂಡುಬರುವ ದೃಶ್ಯ. ಸ್ವಲ್ಪ ಅರ್ಥ ಮಾಡಿಕೊಳ್ಳುವ ಅಪ್ಪ - ಅಮ್ಮನಾದರೆ ಓಕೆ. ಆದರೆ ಕಟ್ಟುನಿಟ್ಟಾಗಿದ್ದರೆ ಮಾತ್ರ ಮಕ್ಕಳ ಗೋಳು ಇಷ್ಟಕ್ಕೇ ಮುಗಿಯುವುದಿಲ್ಲ.


    ಇಪ್ಪತ್ತಕ್ಕೆ ಅರಳು-ಮರಳು


ಅಪ್ಪ, ಅಮ್ಮನಿಗೆ ಮಕ್ಕಳು ಹಾದಿ ತಪ್ಪಿದರೆ ಎಂಬ ಭಯ, ಅದು ತಪ್ಪೆಂದು ಹೇಳಲೂ ಆಗುವುದಿಲ್ಲ. ಕೆಲವೊಂದು ವಿಚಾರಗಳಲ್ಲಿ ಮಕ್ಕಳಾದ ನಾವುಗಳು ನಡೆದುಕೊಳ್ಳುವ ರೀತಿ ಅವರಿಗೆ ಮತ್ತಷ್ಟು ಅನುಮಾನಿಸಲು ಕಾರಣವಾಗುತ್ತದೆ, ಮೀಸೆ ಚಿಗುರುವಾಗ ಲೋಕ ಕಾಣುವುದಿಲ್ಲ ಎಂಬಂತೆ, ಹುಡುಗರು ನಾವು ಮಾಡಿದ್ದೇ ಸರಿ ಎಂಬ ಧೋರಣೆ ತಾಳುತ್ತೇವೆ. ಕಾಲೇಜಿಗೆ ಹೋಗೋ ನಮಗೆ ಬುದ್ದಿವಾದ ಹೇಳೋದು ಅಂದ್ರೆ ಏನು? ಅಂತ ತಿರುಗಿ ಮಾತಾಡೋಕೆ ಶುರುಮಾಡ್ತೀವಿ. ಹುಡುಗಿಗೆ ವಾಟ್ಸಪ್ಪಿನಲ್ಲಿ ಕಳುಹಿಸಿದ ಹಾರ್ಟ್ ಸಿಂಬಲ್, ಗುಡ್ ನೈಟ್ ಬೇಬಿ ಮೆಸೇಜುಗಳನ್ನ ಡಿಲೀಟ್ ಮಾಡೋಕೆ ಮನಸ್ಸು ಒಪ್ಪದಿದ್ದಾಗ ಅಪ್ಪ, ಅಮ್ಮನ ಕಣ್ಣಿಗೆ ಬೀಳದಿರಲೆಂದು ಮೊಬೈಲ್‍ಗೆ ಝೆಡ್ ಪ್ಲಸ್ ಸೆಕ್ಯೂರಿಟಿ ಒದಗಿಸುತ್ತೇವೆ. ಅತ್ತ ಹುಡುಗಿಯರು ಹಾಯ್ ಹನಿ ಎಂದು ಸ್ವೀಟಾಗಿ ಮೆಸೇಜು ಕಳುಹಿಸೋ ಹುಡುಗನ ನಂಬರನ್ನು ತನ್ನ ಗೆಳತಿಯ ಹೆಸರಿನಲ್ಲಿ ಸೇವ್ ಮಾಡಿಕೊಳ್ತಾರೆ, ಬೆಳಗ್ಗೆ ತಡವಾಗಿ ಎದ್ದು ಅರ್ಧ ಗಂಟೆಯಲ್ಲಿ ರೆಡಿಯಾಗಿ ಸ್ಕೂಲಿಗೆ ಹೋಗುತ್ತಿದ್ದವರು, ಕಾಲೇಜಿಗೆ ಹೋಗೋಕೆ ಶುರು ಮಾಡಿದ ಮೇಲೆ ದಿನಕ್ಕೊಂದು ಹೇರ್‍ಸ್ಟೈಲ್, ಡ್ರೆಸ್ ಎನ್ನುತ್ತಾ ಗಂಟೆಗಟ್ಟಲೆ ಸಿಂಗರಿಸಿಕೊಳ್ಳುತ್ತಾರೆ, ಮೊದಲೆಲ್ಲಾ ಅಮ್ಮನೊಟ್ಟಿಗೆ ಕುಳಿತು ಧಾರಾವಾಹಿ ನೋಡ್ತಿದ್ದವರು, ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು ಅವರದ್ದೇ ಲೋಕದಲ್ಲಿ ತೇಲಾಡೋಕೆ ಶುರುಮಾಡ್ತಾರೆ. ಒಟ್ನಲ್ಲಿ ಹರೆಯ ನಮ್ಮನ್ನು ಆವರಿಸಿಕೊಂಡ ತಕ್ಷಣ ಬದಲಾಗ್ತಾ ಹೋಗ್ತೀವಿ. ಅದು ನಮ್ಮಲ್ಲಾಗುವ ಸಹಜ ಬದಲಾವಣೆಯಾದರೂ ಕಾಲ ಕೆಟ್ಟೋಗಿದೆ ಎಂಬ ಸಾರ್ವಜನಿಕ ಘೋಷಣೆಯನ್ನು ಗಂಭೀರವಾಗಿ ಪರಿಗಣಿಸುವ ಪೋಷಕರುಗಳಿಗೆ ಮಾತ್ರ ಸಂಥಿಂಗ್ ಈಸ್ ರಾಂಗ್ ಎಂಬ ಅನುಮಾನ ಬಿಟ್ಟೂಬಿಡದೆ ಕಾಡೋಕೆ ಶುರುವಾಗುತ್ತೆ.


     ಅಯ್ಯೋ! ಕಾಲ ಸರಿಯಿಲ್ಲ.


ಕಾಲೇಜಿನಿಂದ ವಾಪಾಸ್ಸು ಮನೆಗೆ ಬರಬೇಕಾಗಿದ್ದ ಹುಡುಗಿ ಹೋಗಿದ್ದಾದರೂ ಎಲ್ಲಿಗೆ? ಪ್ರೀತಿಸಿದವನೇ ಮೋಸ ಮಾಡಿಬಿಟ್ಟನಾ? ಆ ಕೊಲೆಯ ಹಿಂದೆ ಯಾರ ನೆರಳಿದೆ? ಹೆಣ್ಣು ಹೆತ್ತ ಪೋಷಕರು ನೋಡಲೇ ಬೇಕಾದ ಸ್ಟೋರಿ ಇದು! ಪಾತಕಿಗಳ ಲೋಕ.. ಇಂದು ರಾತ್ರಿ ಹತ್ತು ಗಂಟೆಗೆ. ಹೀಗೆ ನ್ಯೂಸ್ ಚಾನೆಲ್‍ಗಳು ದಿನಕ್ಕೊಂದು ಕಥೆಗಳನ್ನು ತೋರಿಸಲು ಶುರುಮಾಡಿದ ಮೇಲಂತೂ.. ಪೋಷಕರ ಕಣ್ಣಲ್ಲಿ ಕಲಿಯುಗ ಕುಲಗೆಟ್ಟು ಹೋಗಿದೆ! ತಮ್ಮ ಮಕ್ಕಳಿಗೆ ಏನಾದೀತೋ ಎಂಬ ಭಯದಿಂದ ಅವಶ್ಯಕತೆಗಿಂತ ಜಾಸ್ತಿ ಕಾಳಜಿ ವಹಿಸೋಕೆ ನೋಡ್ತಾರೆ. ಆದರೆ ಮಕ್ಕಳಿಗೆ ಮಾತ್ರ ಇದು ಅತಿರೇಖ ಅನ್ನಿಸೋಕೆ ಶುರುವಾಗಿ ಪೋಷಕರಿಂದ ಸಾಧ್ಯವಾದಷ್ಟು ದೂರ ಇರೋಕೆ ಪ್ರಯತ್ನಿಸುತ್ತಾರೆ, ನಿರಾಕರಿಸುತ್ತಾರೆಂಬ ಸೂಚನೆ ಸಿಕ್ಕಲ್ಲಿ ಸುಳ್ಳು ಹೇಳಿ ಹೊರಹೋಗೋಕೆ ಶುರುಮಾಡಿಬಿಡ್ತಾರೆ. ತಾವು ಕೂಡ ಆ ವಯಸ್ಸನ್ನು ದಾಟಿ ಬಂದಿದ್ದಾದರೂ, ಕಾಲ ಬದಲಾಗಿದೆ ಎಂಬ ಕಾರಣಕ್ಕೆ ಹರೆಯದ ಮನಸ್ಸಿನ ತುಮುಲ, ಚಂಚಲತೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ತಂದೆ ತಾಯಿಯರು ವಿಫಲರಾಗಿಬಿಡುತ್ತಾರೆ.


     ತಪ್ಪಾದ್ರೆ ತಿದ್ಕೋತಾರೆ..!


ಹುಚ್ಚುಕೋಡಿ ಮನಸ್ಸು ಕೆಲ ಪ್ರಯೋಗಗಳಿಗೆ ತನ್ನನ್ನು ತಾನು ತೊಡಗಿಸಿಕೊಂಡಾಗ ಮಾತ್ರ ಪಕ್ವವಾಗೋಕೆ ಸಾಧ್ಯ. ಮಕ್ಕಳು ಹಾಳಾಗ್ತಾರೆ ಎಂಬ ಭಯದಿಂದ ಬಂದೋಬಸ್ತ್ ಮಾಡಿಬಿಟ್ಟರೆ, ಕಣ್ಣಾಮುಚ್ಚಾಲೆ ಆಟ ಶುರುಮಾಡ್ತಾರೆ. ಆದ್ದರಿಂದ ಹರೆಯದ ಮಕ್ಕಳಿಗೆ ಅವರ ಇತಿ ಮಿತಿಗಳನ್ನ ಸೂಕ್ಷ್ಮವಾಗಿ ಅರ್ಥೈಸಿ ಸ್ವತಂತ್ರವಾಗಿರೋಕೆ ಬಿಟ್ಟುಬಿಡಬೇಕು, ಮಿತಿಮೀರಿದರೆ ಅಂಕುಶದಿಂದ ತಿವಿಯುವುದು ಇದ್ದಿದ್ದೇ. ಕಾಲೇಜಿನಲ್ಲಿ ಕಂಡ ಮುದ್ದು ಹುಡುಗಿಯ ಕುರಿತು ಕವನವೋ, ಪ್ರೇಮಪತ್ರವೋ ಬರಯಬೇಕೆನಿಸಿದರೆ ಬರೆಯುವಷ್ಟು ಸ್ವಾತಂತ್ರ್ಯ ಕೊಡಿ, ಹರೆಯದ ತೊಳಲಾಟಗಳನ್ನ ಹಂಚಿಕೊಂಡರೆ ಅಪರಾಧ ಮಾಡಿದಂತೆ ಗದರಬೇಡಿ, ಹರೆಯದ ಜೀವಗಳು ಅನ್ಯಲಿಂಗದವರೊಡನೆ ಭಾವನೆಗಳನ್ನು ಹಂಚಿಕೊಳ್ಳಲು ಇಷ್ಟಪಡುತ್ತಾರೆ ಅದಕ್ಕೇ ಬೇರೆ ಅರ್ಥ ಕಲ್ಪಿಸಿಕೊಂಡು ಅನುಮಾನಿಸಬೇಡಿ. ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದೆನಿಸಿದರೆ ಮುಕ್ತವಾಗಿ ನಿಮ್ಮ ಅನಿಸಿಕೆಯನ್ನು ಹಂಚಿಕೊಂಡು ಸಮಸ್ಯೆ ಬಗೆಹರಿಸಿಬಿಡಿ. ಇಷ್ಟಕ್ಕೂ ನಡೆಯಲು ಕಲಿಯುವಾಗ ಎಡವಿ ಬೀಳುವುದು ಸಹಜ.  ಎಡವಿದರೆ ಅದನ್ನು ನಿಮ್ಮ ಬಳಿ ಮುಚ್ಚುಮರೆ ಇಲ್ಲದೇ ಹಂಚಿಕೊಳ್ಳುವಷ್ಟು ಸಲುಗೆ ಕೊಡಿ, ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳ ಪಾಲಿಗೆ ನಂಬಿಕಸ್ಥ ಸ್ನೇಹಿತರಾಗಿ. ಅವರ ಮಾತುಗಳನ್ನು ಕೇಳುವ ಕಿವಿಗಳಾಗಿ, ಮರಳಿ ನಿಮ್ಮ ಹರೆಯಕ್ಕಿಳಿಯಿರಿ.




ಬಾಡುವ ಮುನ್ನ ಹರೆಯವನ್ನು ಆಸ್ವಾದಿಸಿ


ಹದಿನೈದು, ಹದಿನಾರು ವರ್ಷಗಳನ್ನು ದಾಟುವಷ್ಟರಲ್ಲಿ ನಮ್ಮಲ್ಲಿ ಸರಿ, ತಪ್ಪುಗಳ ಅರಿವು ಮೂಡಿರುತ್ತದೆ. ಆದ್ದರಿಂದ ನಾವುಗಳೂ ಕೂಡ ಮನಸ್ಸನ್ನು ಸ್ವಯಂ ನಿಯಂತ್ರಣದಲ್ಲಿಟ್ಟುಕೊಳ್ಳುವುದನ್ನು ಕಲಿಯಬೇಕು. ಬದುಕನ್ನು ರೂಪಿಸುವ ವಯಸ್ಸಿನಲ್ಲಿ ಓದು, ಮೋಜು, ಮಸ್ತಿಗಳನ್ನು ಸರಿಯಾಗಿ ನಿಭಾಯಿಸಬೇಕು. ಪ್ರೇಮ ವೈಫಲ್ಯವಾಯಿತೆಂದೋ, ಪರೀಕ್ಷೆಯಲ್ಲಿ ಫೇಲ್ ಆಯಿತೆಂದೋ ದುಡುಕಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಬದಲು, ಎಲ್ಲಾ ನೋವುಗಳನ್ನು ಮೆಟ್ಟಿ ನಿಲ್ಲುವುದನ್ನು ಕಲಿಯಬೇಕು. ಯಾವುದೋ ಚಟಕ್ಕೆ ದಾಸನಾಗಿ ಜೀವನ ಹಾಳುಮಾಡಿಕೊಳ್ಳುವದಕ್ಕಿಂತ ನಮ್ಮ ಕಾಲ ಮೇಲೆ ನಾವು ನಿಂತುಕೊಳ್ಳಲು ಸಹಕರಿಸುವ ದಾರಿಗಳನ್ನ ಹುಡುಕಬೇಕು. ಮೋಜು ಮಸ್ತಿಗೆ ಸಿಗರೇಟ್, ಗಾಂಜಾ, ಎಣ್ಣೆಗಳ ಹೊರತಾಗಿ ಸಾಕಷ್ಟು ಉತ್ತಮ ಮಾರ್ಗಗಳಿದೆಯೆಂಬುದನ್ನು ಅರಿತು ಸಿಕ್ಕ ಸ್ವಾತಂತ್ಯವನ್ನು ಸ್ವೇಚ್ಛೆಯನ್ನಾಗಿಸಿಕೊಳ್ಳದೇ ಬದುಕಬೇಕು. ಅಪ್ಪ, ಅಮ್ಮ, ಅಣ್ಣ, ತಂಗಿಯರ ಬಳಿ ಭಾವನೆಗಳನ್ನು ಹಂಚಿಕೊಳ್ಳಿ. ಗೊತ್ತೋ ಗೊತ್ತಿಲ್ಲದೆಯೋ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆದರೆ ಹರೆಯ ಮತ್ತಷ್ಟು ಸುಗಮವಾಗುತ್ತದೆ. ಹರೆಯದ ಹವ್ಯಾಸ, ಅಭ್ಯಾಸಗಳು ಬದುಕನ್ನು ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ ಎಂಬುದನ್ನು ಮರೆಯದಿರಿ. ಉಳಿದ ತಲೆನೋವುಗಳು ಇದ್ದಿದ್ದೇ, ಹರೆಯದ ಹೂವು ಬಾಡುವ ಮುನ್ನ ಆಸ್ವಾದಿಸಿ.


- ಸ್ಕಂದ ಆಗುಂಬೆ

ಈ ಲೇಖನ ಕನ್ನಡಪ್ರಭ ದಿನಪತ್ರಿಕೆಯ 'ನಾವು' ಪುರವಣಿಯಲ್ಲಿ ಪ್ರಕಟವಾಗಿದೆ.
(ಮೂಲಪ್ರತಿ)

Saturday, 18 November 2017

ಊಹಾರೇಖೆ


ನವಜಾತ ತಂಗಾಳಿ
ಹೊಕ್ಕುಳ ಬಳ್ಳಿ ಸಡಿಲಿಸಿ
ದಿಕ್ಕು ದೆಸೆಯಿಲ್ಲದೆ
ಬೀದಿಗಿಳಿಯುತ್ತದೆ..

ಅಪ್ರಾಪ್ತ ಇರುಳಿಗೆ
ರಾತ್ರಿಯಿಡೀ ಉರಿವ
ಹುಣ್ಣಿಮೆ ಚಂದ್ರಮನ ಮೇಲೆ
ಹುಸಿಗೋಪ..

ಚಡಪಡಿಸುತ್ತೇನೆ..

ಮೆದು ಪಾದದ ಹುಡುಗಿ
ಎದೆ ತುಳಿಯುತ್ತಾಳೆ
ಊಹಾರೇಖೆಗಳ ರಂಗೋಲಿ
ಉದರದಂಗಳದಲ್ಲಿ.‌.

ಬಿಳಿರಾತ್ರಿ ಬಿಳಿಚಿಕೊಳ್ಳಲು
ಹುಡುಗಿ ಹೊರಡುತ್ತಾಳೆ
ಚೆಂಗೆದ್ದು ಕುಣಿದ
ಸ್ವಪ್ನ ಸುಸ್ತುಗೊಳ್ಳುತ್ತದೆ..

ಮತ್ತೆ ಚಡಪಡಿಸುತ್ತೇನೆ.‌‌.

ಸ್ವಯಂಕೃತ ಅಪರಾಧಕ್ಕೆ
ಕ್ಷಮೆಯಾಚಿಸಿಕೊಂಡು
ಆತ್ಮಾವಲೋಕಿಸಿ
ಕ್ಷಮಿಸಿಕೊಳ್ಳುತ್ತೇನೆ

ಅಸ್ವಸ್ಥ ಕನಸಿಗಾಗಿ
ಕೂತು ಕೊರಗುತ್ತೇನೆ
ಸುಡುವ ನೆನಪು ಅಳೆಯಲು
ಯಾವ ಮಾಪಕ?

- ಅನಾಸ್ಕ


Saturday, 4 November 2017

ಮುದ್ದು ಜೀವಗಳಿಗೆ ಹ್ಯಾಪಿ ಬರ್ತ್ ಡೇ 😘


ಸಂಬಂಧಗಳಿಗೆ ತೀರಾ ನಿರ್ಬಂಧ ಹೇರಿ.. ಟೈಂ ಟೇಬಲ್‌ ಹಾಕಿ ಶಿಸ್ತುಬದ್ಧ ಮಾಡೋಕ್ ಹೋಗ್ಬಾರ್ದು, ಅವುಗಳ ಪಾಡಿಗೆ ಸ್ವತಂತ್ರವಾಗಿರೋಕೆ ಬಿಟ್ಟುಬಿಡಬೇಕು, ನಿಜವಾಗಿಯೂ ಸೆಳೆತ ಇದ್ದಿದ್ದೇ ಹೌದಾದರೆ ಅವು ಎಲ್ಲೇ ಹೋದರೂ ದೂರಾಗುವುದಿಲ್ಲ, ಎಂದೋ ಯಾವುದೋ ಬಿಂದುವಿನಲ್ಲಿ ಸಂಧಿಸುವುದು ಖಚಿತ. ಕರುಳಿಗೆ ನೈಜ ಸಂಬಂಧಗಳನ್ನು ಹಿಡಿದಿಟ್ಟುಕೊಳ್ಳೋ ತಾಕತ್ತು ಇದ್ದೇ ಇರುತ್ತೆ..

ಈ ನವೆಂಬರ್ ನಾಲ್ಕು ಅನ್ನೋದೇ ಹುಣ್ಣಿಮೆ ಬೆಳದಿಂಗಳಿದ್ದಂತೆ, ಸಾಲದ್ದಕ್ಕೆ ಇವತ್ತು ಅಸಲಿ ಪೌರ್ಣಿಮೆ, ಅದೇ ಖುಷಿಯಲ್ಲಿ ಒಂದಷ್ಟ್ ಸಾಲುಗಳನ್ನ ಗೀಚ್ತಿದ್ದೀನಿ.. ಸಹಿಸಿಕೊಳ್ಳಿ -

ಒಡಹುಟ್ಟಿದವಳು.. ತೀರಾ ಒದ್ದಾಡಿ ಬದುಕಿದ ಕೂಸು ಅದು. ಏಳು ತಿಂಗಳಿಗೆ ಹುಟ್ಟಿ, ಏಳು ಜನ್ಮಕ್ಕಾಗುವಷ್ಟು ಸಂಕಟಪಟ್ಟಿರಬಹುದು. ಹುಟ್ಟಿ ಹೆಚ್ಚೂ ಕಡಿಮೆ ಹದಿನೈದು ದಿನಗಳಾದ ಮೇಲೆ ತಂಗಿಯ ಮುಖ ನೋಡಿದ್ದು ನಾನು. ಅವ್ಳು ಶಾಲೆಗ್ ಸೇರೋಷ್ಟ್ರಲ್ಲಿ ನಾನು ಹಾಸ್ಟೆಲ್ ಸೇರಿದೆ, ಸರಿಸುಮಾರು ಆರು ವರ್ಷವಾಯ್ತು ಅವಳೊಟ್ಟಿಗೆ ಹೆಚ್ಚು ಕಾಲ ಕಳೆಯದೆ. ಮನೆಗ್ ಹೋದಾಗ ಜಗಳ - ಹೊಡೆದಾಟಕ್ಕೇ ಟೈಂ ಸಾಕಾಗಲ್ಲ, ಇನ್ನು ಕೂತ್ಕೊಂಡ್ ಮಾತಾಡೋದ್ ಎಲ್ಲಿ? 😉 ಮನೆಗ್ ದಿನಾ ಫೋನ್ ಮಾಡಿ ಅರ್ಧರ್ಧ ಗಂಟೆ ಮಾತಾಡಿದ್ರೂ ಅವ್ಳತ್ರ ಮಾತಾಡೋದ್ ಕಮ್ಮಿನೇ. ಅವ್ಳ ಕತೆಗಳಿಗೂ ನಮ್ಮ ಕತೆಗಳಿಗೂ ಅಜಗಜಾಂತರ ವ್ಯತ್ಯಾಸ ಇರೋದ್ರಿಂದ ಪರಸ್ಪರ ಹಂಚಿಕೊಳ್ಳೋಕೂ ಆಗಲ್ಲ 😂😂 ಆದ್ರೂ ಅದೊಂಥರಾ ಮುದ್ಮುದ್ದು ಜೀವ, ನಾ ಕೊಡೋ ಅತೀ ಚಿಕ್ಕ ಸರ್ಪ್ರೈಸ್ಗಳನ್ನೂ ತೀರಾ ದೊಡ್ಡ ಖುಷಿಯಂತೆ ಸಂಭ್ರಮಿಸುತ್ತೆ, ಇದಕ್ಕಿಂತ ಗಾಢ ಪ್ರೀತಿ ಇನ್ನೆಲ್ಲಿರೋಕೆ ಸಾಧ್ಯ? 😘❤

ಮತ್ತೆ ಕೆಲವು ಸಂಬಂಧಗಳು ಜೀವನದ ನಡುದಾರಿಯಲ್ಲೆಲ್ಲೋ ಆಕಸ್ಮಿಕವಾಗಿ ಸಿಕ್ಕು ಆಪ್ತವಾಗುವವು, ಅದ್ರಲ್ಲಿ ಹೆಚ್ಚಿನವು ಸದ್ದೇ ಮಾಡದೆ ಎದ್ದು ಹೊರಟು.. ಹೆಚ್ಚು ಕಾಡದೇ ಮರೆಯಾದ್ರೆ, ಬೆರಳೆಣಿಕೆಯಷ್ಟು ಸಂಬಂಧಗಳು ಮಾತ್ರ ರಕ್ತಸಂಬಂಧಗಳಷ್ಟೇ ಗಟ್ಟಿಯಾಗ್ಬಿಡ್ತಾವೆ. ಅಂತಹ ಅತ್ಯಾಪ್ತ ಜೀವಗಳಲ್ಲೊಬ್ಬಳು Mandara 😘 ಇವ್ಳ್ ನನ್ ಜೊತೆ ಅದ್ಯಾಕ್ ಅಷ್ಟ್ ಕ್ಲೋಸ್ ಆಗಿದ್ದು? ಅದ್ಹೇಗೆ ಸಲುಗೆ ಬೆಳ್ಸ್ಕೊಂಡಿದ್ದು? ಅನ್ನೋ ಯಾವ್ ಪ್ರಶ್ನೆಗಳಿಗೂ ಉತ್ತರ ಇಲ್ಲ.. ಇವ್ಳ್ ನನ್ ಬೆಸ್ಟ್ ಫ್ರೆಂಡ್ ಅಂತ ಹೇಳಿದ್ರೆ ಮೇಲಿರೋ ದೇವ್ರ್ ಕೂಡ ನಗ್ಬಹುದೇನು.. ತಿಂಗ್ಳಿಗೊಂದ್ಸಲ ಫೋನಲ್ಲಿ ಮಾತಾಡಿದ್ರೆ ಅದೇ ಹೆಚ್ಚು, ಹುಚ್ಚೆದ್ದು ಒಂದ್ ವಾರ ಫುಲ್ ಮೆಸೇಜ್ ಮಾಡಿದ್ರೆ, ನೆಕ್ಸ್ಟ್ ಸ್ವಲ್ಪ‌ ದಿನಕ್ಕೆ ಉಳ್ದಿದ್ದೀವೋ? ಇಲ್ವೋ? ಅನ್ನೋದು ಕೂಡ ಇಬ್ರಿಗೂ ಗೊತ್ತಿರಲ್ಲ.. ಅಬ್ಬಬ್ಬಾ ಅಂದ್ರೆ ವರ್ಷದಲ್ ಎರಡ್ಮೂರ್ನಾಲ್ಕ್ ಸಲ ಮುಖಾಮುಖಿ ಆಗೋ ಅಂತ ಬೆಸ್ಟ್ ಫ್ರೆಂಡ್ಸು ನಾವು 😂😂 ನಾ ಕೊಡೋ ಎಲ್ಲಾ ಕಾಟಗಳನ್ನು ಸಹಿಸ್ಕೊಂಡು, ಚಕ್ರಬಡ್ಡಿ ಸಮೇತ ಅದನ್ನ ಹಿಂದಿರುಗಿಸೋ ದೋಸ್ತಿ ಇದು.. ಇವ್ಳನ್ನ ಜಾಸ್ತಿ ಹೊಗ್ಳೋಕ್ ಹೋದ್ರೆ ನಾನು ಆತ್ಮವಂಚನೆ ಮಾಡ್ಕೊಂಡಂಗ್ ಆಗುತ್ತೆ ಸೋ ಇಷ್ಟೇ ಸಾಕು ಬಿಡಿ 😝❤

ಈ ಎರಡು ಮುದ್ದು ಜೀವಗಳು ಹುಟ್ಟಿದ ದಿನ ಇವತ್ತು.. ಹುಣ್ಣಿಮೆ ಚಂದ್ರನಂತೆಯೇ ಇವರ ಬದುಕು ಸದಾ ಕಂಗೊಳಿಸಲಿ, ಇಂಥಾ ಚಂದದ ಸಂಬಂಧಗಳನ್ನ ಅಷ್ಟೇ ಜತನವಾಗಿ ಬೇಲಿ ಹಾಕದೇ ಉಳಿಸಿಕೊಳ್ಳೋ ಶಕ್ತಿ ನನಗೆ ಸಿಗಲಿ 😍😍😍
ನಿಮ್ಮ ಹಾರೈಕೆ ಸದಾ ಇರಲಿ 😘

Thursday, 2 November 2017

ಗುಳಿ ಬೀಳದ ನಿನ್ನ ತುಂಬುಗೆನ್ನೆಗೆ ಮುತ್ತಿಡುವ ಆಸೆ ಚಿರಾಯು...



ಕೂಸುಮರೀ..

                   ಬೆಳದಿಂಗಳಿನಿಂದ ವಂಚಿತವಾದ ರಾತ್ರಿಯೊಂದು ಚಂದ್ರಮನ ತಂಪಿಗೆ ಹಂಬಲಿಸುವಂತೆ, ಅನಾಮಿಕ ಕಡಲಿನ ಭೋರ್ಗರೆತಕ್ಕೆ ಓಗೊಟ್ಟು ಮೈಲಿಗಟ್ಟಲೆ ಸಾಗಿ ಸೇರಲು ಪರಿತಪಿಸುವ ನದಿಯಂತೆ ಮನವೀಗ ನಿನ್ನ ಧ್ಯಾನದಲ್ಲಿದೆ. ಹಳವಂಡದ ಬದುಕಿಗೆ ಸಿಕ್ಕು ಜಡಗಟ್ಟಿರುವ ಭಾವನೆಗಳಿಗೆ ಮೃದು ಸ್ಪರ್ಶ ಬೇಕಿದೆ. ಸುತ್ತಲಿನ ಜಗದ ಕೌತುಕಗಳನ್ನೆಲ್ಲಾ ಮರೆಮಾಚುವಂತಹ ನಿನ್ನ ಕಾಡುವಿಕೆಯ ಗಾಢತೆ ಬದುಕಿನ ಮತ್ತೊಂದು ಮಜಲನ್ನು ಮುಖ್ಯ ವೇದಿಕೆಗೆ ಕರೆತಂದು ಕೂರಿಸಿದೆ. ನಿನ್ನ ಮೌನವನ್ನು ಅಧ್ಯಾಪಿಸುವ ನನ್ನೆಲ್ಲಾ ಯೋಜನೆಗಳು ತಲೆಕೆಳಗಾಗಿರುವ ಹೊತ್ತಿನಲ್ಲಿ ಭಾವನೆಗಳೆಲ್ಲಾ ಹಾಳೆಗೆ ಬೀಳುತ್ತಿವೆ. ಮಾಮೂಲಿ ಪದಗುಚ್ಛಗಳೆಲ್ಲಾ ನಿನ್ನ ವರ್ಣಿಸುವ ಪ್ರಯತ್ನದಲ್ಲಿ ಸೋತು ಬಿದ್ದಮೇಲೆ, ಇದೆಂಥದ್ದೋ ವಿಚಿತ್ರ ಶೈಲಿಯೊಂದು ಹುಟ್ಟಿಕೊಂಡಿದೆ. ಚಂದದ ಪದಗಳನ್ನೆಲ್ಲಾ ಹೆಕ್ಕಿ ತಂದು ಅದರಲ್ಲೇ ನಿನ್ನ ಮುದ್ದಾಡುವಾಸೆ, ಸದ್ಯಕ್ಕೀಗ ಪದಗಳ ಹುಡುಕಾಟದಲ್ಲಿದ್ದೇನೆ.. ಸಹಕರಿಸು, ಸ್ವೀಕರಿಸು.

                    ಹರೆಯದ ದೋಣಿ ಶುರುವಿನಲ್ಲೇ ಮಗುಚಿ ಬೀಳುವಂತಹಾ ಸೆಳೆತ ಸೃಷ್ಟಿಸಿದ್ದ ನಿನ್ನ ತುಂಟುತನದ ಅಲೆಯೀಗ ಶಾಂತವಾಗಿದ್ದೇಕೆ? ಹರೆಯವೀಗ ತನ್ನ ಪರಮಾವಧಿಗೆ ಸಾಮಿಪ್ಯವಾಗುತ್ತಾ, ತಟ ಸೇರುವ ಬದಲು ಮತ್ತೆ ಮಗುಚಿ ಬೀಳಲು ಹಪಹಪಿಸುತ್ತಿದೆ, ಸೂಚನೆಯಿಲ್ಲದೇ! ಅಲೆಯೆಬ್ಬಿಸಿಬಿಡು ಮತ್ತೆ ನಿನ್ನಲ್ಲಿ ಮುಳುಗುವೆ. ಸಾವರಿಸಿಕೊಳ್ಳುವ ಮುನ್ನವೇ ಆವರಿಸಿಬಿಡು ಮಿಸುಕಾಡದೇ ಲೀನವಾಗುವೆ. ಒಡಲಲ್ಲಿ ಹುದುಗಿಸಿಕೊಂಡಿರುವ ಇಂತಹ ಅದೆಷ್ಟೋ ಕನಸುಗಳಲ್ಲಿನ ಮುಖ್ಯ ಪಾತ್ರಧಾರಿ ನೀನು. ನಿನ್ನುಸಿರಿಗೆ ಕಾವು ಕೊಡುವ ಕೆಲಸ ಸಿಕ್ಕರೂ ಸಾಕು ಬದುಕಿಬಿಡುವೆ ಎಂಬ ಹುಂಬನ ಸ್ವಪ್ನ ಪ್ರಪಂಚದ ಮುಖ್ಯಾಂಶಗಳು ಇಂತಿವೆ..  ಮುಂಜಾವಿನಲ್ಲಿ ಮೈಮುರಿಯುವ ಸೂರ್ಯನ ಚೊಚ್ಚಲ ಕಿರಣ ನಿನ್ನ ಮುತ್ತಿನೋಲೆಯ ಕಿವಿಗಳಿಗೆ ಮುತ್ತಿಡುವ ಕ್ಷಣದಲ್ಲಿ ನಾನು ಪ್ರತಿಸ್ಪರ್ಧಿಯಾಗಬೇಕು, ನಡು ಮಧ್ಯಾಹ್ನಕ್ಕೆ ನೆರಳಾಗಬೇಕು, ಬೈಗಿನಲ್ಲಿ ನಿನ್ನಾಸೆ ಈಡೇರಿಸುವ ಬಂಧುವಾಗಬೇಕು, ನಿಶೆಯಲ್ಲಿ ನಶೆಯೇರಿಸುವ ಮಧುವಾಗಬೇಕು... ಇಂತಹ ಹಲವು ಬಯಕೆಗಳ ಕರಡು ಪ್ರತಿ ಕನಸಿನ ಕಚೇರಿಯಲ್ಲಿ ಬಿದ್ದಿದೆ, ಸಾಧ್ಯವಾದರೆ ಪರಿಷ್ಕರಣೆಗೆ ಕೈ ಜೋಡಿಸು.

                    ನಿನ್ನ ಕಾಲುಂಗರದ ಸಂಗೀತಕ್ಕೆ ಪದ ಸಂಯೋಜಿಸಿ ಜೊತೆಗೂಡಿ ಹಾಡುತ್ತಾ, ಸಭ್ಯತೆಯ ಗಡಿ ನೂಕಿ ಬೆಳೆದ ಪೋಲಿತನ ಭರಿತ ರಾತ್ರಿಗೆ ಬಟ್ಟೆ ಹೊಲಿಯೋಣ. ಬದುಕಿನ ಖಾಸಗಿ ಕ್ಷಣಗಳನ್ನು ಕೂಡಿಡಲು ಜಂಟಿಖಾತೆಯೊಂದನ್ನು ತೆರೆದು, ತಂಪುಗತ್ತಲಲ್ಲಿ ನಡುಗುತ್ತಾ ಬಿದ್ದಿರುವ ನಕ್ಷತ್ರ ನಮ್ಮ ಅಪ್ಪುಗೆಯ ಕಂಡೇ ಉದ್ದೀಪಿಸುವಂತೆ ಬದುಕಿಬಿಡೋಣ. ನಿನ್ನ ಕಣ್ರೆಪ್ಪೆ ವಿಶ್ರಮಿಸುವಾಗೆಲ್ಲಾ ನಾ ಕಾವಲುಗಾರನಾಗಬೇಕಿದೆ ಸತಾಯಿಸದೆ ಹ್ಞೂಂಗುಟ್ಟು, ಕಾಡಿಗೆಯ ರೇಖೆಯನ್ನೂ ದಾಟದೆ ಪ್ರಾಮಾಣಿಕನಾಗಿ ದುಡಿಯುವೆ. ದಿನದ ಇಪ್ಪತ್ನಾಲ್ಕು ಗಂಟೆಯಲ್ಲಿ ನನಗಾಗಿ ಕೊಂಚ ಕ್ಷಣಗಳ ಸಾಲ ನೀಡು, ಉಸಿರಿನ ಕೊನೇ ಸಾಲು ದೇಹದಿಂದ ನಿರ್ಗಮಿಸುವವರೆಗೂ ನಿನ್ನ ಜೀತದಾಳಾಗುವೆ. ಭವದ ಅತ್ಯುತ್ಕೃಷ್ಟ ಆಕಾಂಕ್ಷೆಗಳನ್ನೆಲ್ಲಾ ನಿನಗಾಗಿಯೇ ರೂಪಿಸುವೆ, ಬದುಕಿನ ಸಾರಾಂಶವನ್ನು ಹಿಡಿದಿಟ್ಟಿರುವ ಮೂರಕ್ಷರದ ನಿನ್ನ ನಾಮಧೇಯವನ್ನು ಲಗ್ನ ಪತ್ರಿಕೆಯಲ್ಲಿ ನನ್ನ ಹೆಸರೊಟ್ಟಿಗೆ ಉಲ್ಲೇಖಿಸಲು ಅನುಮತಿಸು.. ಇಹದ ಪರಿವೆಯ ಮರೆತು ನವಲೋಕದ ನಾಗರೀಕರಾಗೋಣ.

             ತಕರಾರುಗಳಿದ್ದರೆ ಮೇಲ್ಮನವಿ ಸಲ್ಲಿಸು ವಿಚಾರಣೆಗೆ ಹಾಜರಾಗುವೆ. ಒಪ್ಪಿತವಾದಲ್ಲಿ ಗುಳಿ ಬೀಳದ ನಿನ್ನ ತುಂಬುಗೆನ್ನೆಗೆ ಮುತ್ತಿಡುವ ಚಿರಂಜೀವಿ ಆಸೆಗೆ ಚಾಲನೆ ನೀಡುವೆ.


                                                   ಇಂತಿ ನಿನ್ನ ಧ್ಯಾನಸ್ಥ..

                                                      ಸ್ಕಂದ ಆಗುಂಬೆ

 ಈ ಲೇಖನ ಕನ್ನಡಪ್ರಭ ದಿನಪತ್ರಿಕೆಯ "ಕ್ಯಾಂಪಸ್" ಪುರವಣಿಯಲ್ಲಿ ಪ್ರಕಟವಾಗಿದೆ.
(ಮೂಲಪ್ರತಿ)

   

ಕನ್ನಡ ಟಂಗ್ ಟ್ವಿಸ್ಟರ್




೬೨ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಪ್ರಜಾವಾಣಿ ದಿನಪತ್ರಿಕೆ ಏರ್ಪಡಿಸಿದ್ದ, ಕನ್ನಡ ಟಂಗ್ ಟ್ವಿಸ್ಟರ್ ಚಾಲೆಂಜ್ ವೀಡಿಯೋ ಇದಾಗಿದ್ದು, ಪ್ರಜಾವಾಣಿ ಅಂತರ್ಜಾಲ ಪುಟದಲ್ಲಿ ಪ್ರಕಟಗೊಂಡಿದೆ.
ವೀಡಿಯೋದಲ್ಲಿ ಸ್ಕಂದ ಹಸ್ಸೀಮನೆ ಎಂದು ತಪ್ಪಾಗಿದ್ದು ಅದು ಸ್ಕಂದ ಅಸೀಮನೆ ಆಗಬೇಕಿತ್ತು.

Monday, 9 October 2017

ನವರಸ


ಬದುಕೆಂಬ ನಳಪಾಕ
ಭಾವನೆಯೇ ಒಗ್ಗರಣೆ
ಚಿಟಪಟನೆ ಸಿಡಿಯುವುದು
ಘಮ್ಮೆಂದು ಹರಡುವುದು
ಖಾರ ತುಸು ಮುಂದಾಗೆ
ಕಣ್ಣಾಲಿ ತುಂಬುವುದು
ಸಿಹಿ ಖಾದ್ಯ ಬಾಯ್ಗಿಡಲು
ನಾಲಿಗೆ ನಾಚುವುದು
ಉಪ್ಪು ಹದ ತಪ್ಪಿದರೆ
ಭಯಂಕರ ಕೋಪ
ಜಾಸ್ತಿ ಹುಳಿ ಹಿಂಡಿದರೆ
ಬೀಭತ್ಸ ರೂಪ
ಹೊಟ್ಟೆ ಬಿರಿ ತಿಂದರೆ
ವಾಯು ಭಾರ ಕುಸಿತ
ಬಿಗಿಹಿಡಿದು ತೇಗಿದರೆ
ಮನವು ಶಾಂತ

ಎಂಬಲ್ಲಿಗೆ ಬದುಕು ಸಂತೃಪ್ತವಾಯ್ತು
ನವರಸಗಳ ಮೇಳ ಸಂಪನ್ನವಾಯ್ತು..

- ಅನಾಸ್ಕ

Saturday, 7 October 2017

ಅವನು - ಅವಳು ಮತ್ತು ವಿಕ್ರಾಂತ್



ಬಿಟ್ಟು ಹೋಗಿದ್ದ.. ಸೌಜನ್ಯಕ್ಕೆ ತಿರುಗಿಯೂ ನೋಡದೆ ಬೈಕ್ ಸ್ಟಾರ್ಟ್ ಮಾಡಿದವನು ಭರ್ರನೆ ಹೊಗೆಯೆಬ್ಬಿಸಿ ಹೊರಟುಹೋಗಿದ್ದ. ಹಸಿರು ಹುಲ್ಲು ಹಾಸಿನ ಮೇಲೆ ಕುಳಿತಿದ್ದವಳ ಕನಸು ಸುಡುತ್ತಿತ್ತು.

ಇಷ್ಟಕ್ಕೂ ಅವಳು ಮಾಡಿದ ತಪ್ಪಾದರೂ ಏನು? ಮೊನ್ನೆ ಕಾಲೇಜಿಗೆ ಹೋಗಲು ಬಸ್ ತಪ್ಪಿಸಿಕೊಂಡಾಗ ಅವಳದೇ ತರಗತಿಯ ವಿಕ್ರಾಂತ್ ಬೈಕಿನಲ್ಲಿ ಹೋಗೋಣ ಬಾ ಅಂತ ಕರೆದಿದ್ದ, ತರಗತಿಯ ಹುಡುಗನಾದ್ದರಿಂದ ಇವಳೂ ಕೂಡ ಹೆಚ್ಚು ಯೋಚಿಸದೆ ಬೈಕ್ ಹತ್ತಿದ್ದಳು. ಎಡವಟ್ಟಾಗಿದ್ದೇ ಅಲ್ಲಿ.. ವಿಕ್ರಾಂತ್ ಪಾಪದ ಹುಡುಗನಾದರೂ ಆತನಿಗೂ ಇವಳ ಪ್ರಿಯಕರ ಮನೋಹರನಿಗೂ ಸಣ್ಣ ಮನಸ್ತಾಪವಿತ್ತು. ಮೇಲ್ನೋಟಕ್ಕೆ ತೋರಿಸಿಕೊಳ್ಳುತ್ತಿರಲಿಲ್ಲವಾದರೂ ಒಳಗೊಳಗೇ ದ್ವೇಷಿಸುತ್ತಿದ್ದರು. ಇದಕ್ಕೆಲ್ಲಾ ಮೂಲ ಕಾರಣ ವಿಕ್ರಾಂತ್ ಪ್ರಿಯಾಳಿಗೆ ಸದ್ದಿಲ್ಲದೇ ಕಾಳು ಹಾಕುತ್ತಿದ್ದ. ಮನೋಹರ್ ಮತ್ತು ಪ್ರಿಯಾ ಒಬ್ಬರನ್ನೊಬ್ಬರು ಮೆಚ್ಚಿಕೊಂಡು ಅದಾಗಲೇ ಎರಡು ವರ್ಷ ಕಳೆದಿತ್ತು, ಅವರ ಪ್ರೇಮ ಪುರಾಣ ಇಡೀ ಕಾಲೇಜಿಗೇ ಗೊತ್ತಿದ್ದರಿಂದ ಯಾರೂ ಆ ವಿಷಯಕ್ಕೆ ತಲೆ ಹಾಕುತ್ತಿರಲಿಲ್ಲ. ಹೀಗಿರುವಾಗಲೇ ವಿಕ್ರಾಂತನಿಗೆ ಪ್ರಿಯಾಳ ಮೇಲೆ ಆಕರ್ಷಣೆ ಹುಟ್ಟಿದ್ದು. ಹೇಳಿ ಕೇಳಿ ವಿಕ್ರಾಂತ್ ಶ್ರೀಮಂತರ ಮನೆಯ ಹುಡುಗ, ಇಡೀ ಕಾಲೇಜೇ ಅವನತ್ತ ತಿರುಗಿ ನೋಡುವಂತೆ ದಿನಕ್ಕೊಂದು ಬಗೆಯ ಬೈಕು, ಬಟ್ಟೆ, ಶೂಗಳೊಂದಿಗೆ ಬರುತ್ತಿದ್ದ. ಇವನಿಗೆ ಪ್ರಿಯಾ ಮತ್ತು ಮನೋಹರರ ಕಥೆ ಗೊತ್ತಿತ್ತಾದರೂ ಹಣದ ಮದ ಏರಿದ್ದರಿಂದ ಭಾವನೆಗಳ ವಿರುದ್ಧ ಯುದ್ಧ ಸಾರಿದ್ದ. ಹೇಗಾದರೂ ಮಾಡಿ ಪ್ರಿಯಾಳನ್ನು ತನ್ನ ತೆಕ್ಕೆಗೆ ಬೀಳಿಸಿಕೊಳ್ಳಬೇಕೆಂದು ಪಣ ತೊಟ್ಟು, ಮನೋಹರನಿಗೆ ಸೆಡ್ಡು ಹೊಡೆದಿದ್ದ. ಅವನ ಮಾತು ಕೇಳಿ ಮನೋಹರನಿಗೆ ಕಸಿವಿಸಿಯಾದರೂ ಪ್ರಿಯಾಳಿಗೆ ಈ ವಿಚಾರ ತಿಳಿಸದಿರಲು ನಿರ್ಧರಿಸಿ, ಸ್ನೇಹಿತರೊಡನೆ ಸೇರಿ ವಿಕ್ರಾಂತನನ್ನು ಹಣಿಯಲು ಸಿದ್ಧತೆ ನಡೆಸುತ್ತಿದ್ದ. ಇದ್ಯಾವುದರ ಪರಿವೆಯೇ ಇಲ್ಲದ ಪ್ರಿಯಾ ಎಂದಿನಂತೇ ಮನೋಹರನ ಜೊತೆ ನಗುನಗುತ್ತಾ ಓಡಾಡಿಕೊಂಡಿದ್ದಳು. ಅವಳು ಮನೋಹರನ ಕೈ ಹಿಡಿದಾಗಲೆಲ್ಲಾ ವಿಕ್ರಾಂತ ಉರಿದು ಬೀಳುತ್ತಿದ್ದರೆ, ಮನೋಹರ ಜಗತ್ತನ್ನೇ ಗೆದ್ದವನಂತೆ ಬೀಗುತ್ತಿದ್ದ. ಬರುಬರುತ್ತಾ ಇದು ವಿಕ್ರಾಂತನಿಗೆ ಸೇಡು ತೀರಿಸಿಕೊಳ್ಳಬೇಕೆಂಬ ಮಟ್ಟಕ್ಕೆ ದ್ವೇಷ ಹುಟ್ಟುಹಾಕಿತು.

ಅಸಲಿಗೆ ಸುಮಾರು ವಾರಗಳಿಂದ ವಿಕ್ರಾಂತ ಪ್ರಿಯಾಳನ್ನು ಹಿಂಬಾಲಿಸಲು ಶುರುಮಾಡಿದ್ದ, ಆಗಾಗ ಪ್ರಿಯಾಳ ಜೊತೆ ನಗುತ್ತಾ ಮಾತನಾಡುವುದು ಅದೂ ಇದೂ ಅನ್ನುತ್ತಾ ಸೇಡಿನ ಮೊದಲ ಹೆಜ್ಜೆ ಇಟ್ಟಿದ್ದ. ಇತ್ತ ಮನೋಹರ ಪ್ರಿಯಾಳಿಗೆ ವಿಷಯ ಹೇಳಲೂ ಆಗದೆ, ಸುಮ್ಮನಿರಲೂ ಆಗದೆ ಒದ್ದಾಡತೊಡಗಿದ್ದ. ವಿಕ್ರಾಂತನ ಜೊತೆ ಇವಳು ನಕ್ಕು ಮಾತಾನಾಡಿದಾಗೆಲ್ಲಾ ಮನೋಹರನಿಗೆ ಒಳಗೊಳಗೆ ಅಸೂಯೆ ಹುಟ್ಟಿ, ಪ್ರಿಯಾಳ ಮೇಲೆ ಅನುಮಾನ ಪಡುವಂತೆ ಮಾಡಿತು.
ಇದಕ್ಕೆ ಮತ್ತಷ್ಟು ಇಂಬು ನೀಡುವಂತೆ ಪ್ರಿಯಾ ಅವತ್ತು ವಿಕ್ರಾಂತನ ಗಾಡಿಯಲ್ಲಿ ಬಂದಿದ್ದಳು. ಕಾಲೇಜಿನ ಗೇಟಿನಲ್ಲಿ ನಿಂತು ಪ್ರಿಯಾಳಿಗಾಗಿ ಕಾಯುತ್ತಿದ್ದ ಮನೋಹರ ಆ ದೃಶ್ಯವನ್ನು ನೋಡಿ ದಿಗ್ಭ್ರಾಂತನಾಗಿದ್ದ. ಬೈಕಿಳಿದು ಬಳಿ ಬಂದ ಪ್ರಿಯಾ ಹಾಯ್ ಎಂದರೂ ಇವನು ಮೌನವಾಗಿದ್ದ. ಅವತ್ತು ಸಂಜೆಯ ತನಕವೂ ಯಾವುದಕ್ಕೂ ಸರಿಯಾಗಿ ಉತ್ತರಿಸದ ಮನೋಹರ, ತರಗತಿಗಳೆಲ್ಲಾ ಮುಗಿದ‌ ಮೇಲೆ ಪ್ರಿಯಾಳ ಕೈ ಹಿಡಿದು ಪಾರ್ಕಿಗೆ ಎಳೆದುಕೊಂಡು ಹೋಗಿದ್ದ. ಏನಾಗುತ್ತಿದೆ ಎಂದು ಗೊತ್ತಾಗುವಷ್ಟರಲ್ಲಿ ಪ್ರಿಯಾಳ ಕೆನ್ನೆಯ ಮೇಲೆ ಬರೆ ಬಿದ್ದಿತ್ತು. ನೋವಿನಿಂದ ಕಿರುಚಿ ಕುಸಿದು ಬಿದ್ದ ಪ್ರಿಯಾಳಿಗೆ ಬಾಯಿಗೆ ಬಂದಂತೆ ಬೈದ ಮನೋಹರ ಕೈ ಮುಗಿದು ಹೊರಟೇಬಿಟ್ಟ.

ಮಾತೇ ಬಾರದಂತಾಗಿದ್ದ ಪ್ರಿಯಾ ಕಣ್ಣೀರು ಸುರಿಸುತ್ತಾ‌ ಬಿಕ್ಕಿ ಬಿಕ್ಕಿ ಅಳುತ್ತಿದ್ದರೆ ಇದೆಲ್ಲವನ್ನೂ ದೂರದಿಂದಲೇ ಗಮನಿಸಿದ ವಿಕ್ರಾಂತ್ ಗಹಗಹಿಸಿ ನಗುತ್ತಿದ್ದ. ಅಲ್ಲಿಗೆ ಅನುಮಾನವೆಂಬ ಪಿಶಾಚಿಗೆ ಸಿಕ್ಕು ಶುದ್ಧ ಪ್ರೀತಿಯೊಂದು ಒಡೆದು ಹೋಗಿತ್ತು, ದುಡುಕದೇ ಕುಳಿತು ಮಾತನಾಡಿದ್ದರೂ ಸಾಕಿತ್ತು ವಿಕ್ರಾಂತನ ಕುತಂತ್ರವನ್ನು ಕೊನೆಗಾಣಿಸಬಹುದಿತ್ತು. ಆದರೆ.. ಊಹ್ಞೂಂ ಮನೋಹರ ದುಡುಕಿದ್ದ, ಅಮಾಯಕ ಪ್ರಿಯಾ ಸೋತು ಹೋದಳು.

 ಸ್ಕಂದ ಆಗುಂಬೆ

http://www.thenewindiantimes.com/sad-love-story-kannada/

ಈ ಲೇಖನ "ದಿ ನ್ಯೂ ಇಂಡಿಯನ್ ಟೈಮ್ಸ್"ನಲ್ಲಿ ಪ್ರಕಟವಾಗಿದೆ.
                           (ಮೂಲಪ್ರತಿ)

Thursday, 5 October 2017

ಬರಗಾಲ



ಕೆಂಡ ಕಾರುವ ಭಾನು
ಸುಟ್ಟು ಬಿದ್ದ ಮೇಘ
ಭುವಿಯೀಗ ಒಣಗಿದ ಗರಿಗರಿ ಬಟ್ಟೆ
ಬಡವಿ ಭೂಮಾತೆ
ಬಸವಳಿದು ಕುಳಿತಿಹಳು
ಮೂರು ಮಾಸದಿಂದ ಉಪವಾಸವಂತೆ

ಹೊಳೆದಂಡೆ ಗರಿಕೆಯ ಬದುಕು ಬಡವಾಗಿರಲು
ಚಿಗರೆ ಮರಿಗೆಲ್ಲಿ ಹೊತ್ತು ಊಟ?
ಎದೆ ಕವಚ ಹೊರಗಿಣುಕಿ, ಭುವಿ ಕದವ ಬಡಿದಿರಲು
ರಕ್ತನಾಳಕ್ಕೀಗ ಸಾವಿನಾಟ

ಬತ್ತಿದ ಹೊಲದಲ್ಲಿ ಬಿತ್ತಿದ ಬೀಜವು
ನರಳಾಟದ ಹಾಡು ಹಾಡುತ್ತಿತ್ತು
ಮೊಳಕೆಯ ಮೂಲವೇ ಮೌನವಾಗಿರಲು
ಶ್ವಾಸಕೋಶದ ಒಳಗೆ ಶೋಕಗೀತೆ

ಹತ್ತು ಎಕರೆಯ ಒಡೆಯ ಅತ್ತು ಸುಸ್ತಾಗಿರಲು
ಮೂರು ಗುಂಟೆಯ ರೈತ ಸತ್ತು ಹೋದ
ಹಟ್ಟಿಯಲಿ ಕಟ್ಟಿದ ಬಾಚು ಕೋಡಿನ ಎತ್ತು
ಹಿಡಿ ಹುಲ್ಲಿಗಾಗಿ ಕೊರಗುತಿತ್ತು

ಕೆರೆ ತಳದಿ ಕಪ್ಪೆಮರಿ ಅಂಗಾತ ಬಿದ್ದಿರಲು
ಸರಸರನೆ ಓಡಿತ್ತು ಉರಗರಾಜ
ಸರಿಸೃಪದ ಪರದಾಟ ಕಣ್ಣಿಗೆ ಗೋಚರಿಸೆ
ಒಣಕು ಕೊಕ್ಕರೆಗೀಗ ಹಬ್ಬದೂಟ

- ಅನಾಸ್ಕ

Wednesday, 9 August 2017

ಕೈ ಬರಹ ಸರಿಯಿಲ್ಲ ಗುರೂ..!



ಅವನು ಕ್ಲಾಸಿನ ತಲೆಹರಟೆ ಹುಡುಗರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದವನು, ತರಗತಿಯ ಅಷ್ಟೂ ಹುಡುಗಿಯರನ್ನು ಬಿಟ್ಟೂಬಿಡದೆ ರೇಗಿಸುತ್ತಾ, ಕಾಲೆಳೆಯುತ್ತಿದ್ದ. ಆದರೆ ಅವರಲ್ಲಿ ಒಬ್ಬಳ ಮೇಲೆ ಮಾತ್ರ ವಿಶೇಷ ಪ್ರೀತಿ. ಹೇಗಾದರೂ ಮಾಡಿ ಅವಳನ್ನು ಒಲಿಸಿಕೊಳ್ಳಬೇಕೆಂಬ ಬಯಕೆ. ಎಷ್ಟೋ ಬಾರಿ ತರಗತಿಯಲ್ಲೇ ಪ್ರಪೋಸ್ ಮಾಡಿ ಮಂಗಳಾರತಿ ಮಾಡಿಸಿಕೊಂಡಿದ್ದ. ಆದರೆ ತಲೆಹರಟೆಯ ಉತ್ತುಂಗ ತಲುಪಿದ್ದ ಅವನಿಗೆ ಅದೆಲ್ಲಾ ತಾಗುತ್ತಿರಲಿಲ್ಲ. ಇವನ ಆಟಗಳನ್ನು ನೋಡಿ ನೋಡಿ ಬೇಸತ್ತವಳಿಗೆ ಅವನಿಂದ ಮುಕ್ತಿ ಸಿಕ್ಕರೆ ಸಾಕೆನಿಸಿಹೋಗಿತ್ತು. ಅವಳ ಸಮಸ್ಯೆಯನ್ನರಿತ ತರಗತಿಯ ಹುಡುಗಿಯರೆಲ್ಲಾ ಅವಳ ಬೆಂಬಲಕ್ಕೆ ನಿಂತರು.
ಮೊನ್ನೆ ಸೋಮವಾರ, ಅದಕ್ಕಿಂತಲೂ ಮಿಗಿಲಾಗಿ 'ರಕ್ಷಾ ಬಂಧನ'ದ ದಿನ. ಅವನನ್ನು ಖೆಡ್ಡಾಕ್ಕೆ ಬೀಳಿಸಲು ಹುಡುಗಿಯರ ಗುಂಪು ಸರ್ವಸನ್ನದ್ಧವಾಗಿತ್ತು. ಅವನೆಲ್ಲೇ ಕಂಡರೂ ಸರಿ, ಐಟಿ ಅಧಿಕಾರಿಗಳಂತೆ ದಾಳಿ ಮಾಡಲು ಹುಡುಗಿಯರ ತಂಡ ತಯಾರಾಗಿತ್ತು. ಹಿಂದಿನ ದಿನ ಪೂರ್ತಿ ಫೋನಿನಲ್ಲೇ ಯೋಜನೆ ರೂಪಿಸಿ ಕಾಲೇಜಿಗೆ ಬಂದ ಹುಡುಗಿಯರಿಗೆ ಅವನು ಮಾತ್ರ ದೊಡ್ಡ ಶಾಕ್ ಕೊಟ್ಟಿದ್ದ! ಕ್ಯಾಂಟೀನಿನಿಂದ ಹಿಡಿದು ಕಾರಿಡಾರಿನ ಮೂಲೆಮೂಲೆಗಳಲ್ಲೂ ಅವನಿಗಾಗಿ ಶೋಧಕಾರ್ಯ ಆರಂಭವಾಯ್ತು. ಊಹ್ಞೂಂ.. ಅವನ ಸುಳಿವೇ ಇಲ್ಲ. ಇವರ ಪ್ರಯತ್ನವನ್ನು ವಿಫಲಗೊಳಿಸುವ ಸಲುವಾಗಿ ಅಂದು ಆತ ಕಾಲೇಜಿಗೆ ಬರಲೇ ಇಲ್ಲ! ಫೋನ್ ಮಾಡಿದರೂ ಉತ್ತರವಿಲ್ಲ. ಹುಡುಗಿಯರ ಅಷ್ಟೂ ಯೋಜನೆಗಳು ತಲೆಕೆಳಗಾಗಿತ್ತು.
ಹೌದು! ಇತ್ತೀಚಿನ ಅನಧಿಕೃತ ಸಮೀಕ್ಷೆಗಳಿಂದ ತಿಳಿದು ಬಂದಿರುವುದೇನೆಂದರೆ - ರಕ್ಷಾ ಬಂಧನದ ದಿನ ಹುಡುಗರು ಸ್ವಯಂ ಪ್ರೇರಿತರಾಗಿ ಗೃಹ ಬಂಧನಕ್ಕೊಳಗಾಗುತ್ತಿದ್ದಾರೆ. ಅದರಲ್ಲೂ ಕಾಲೇಜು ಹುಡುಗರಂತೂ ಮೈಯೆಲ್ಲಾ ಕಣ್ಣಾಗಿರುತ್ತಾರೆ.
ಖಾಕಿಗೂ ಹೆದರದ ಹುಡುಗರು ರಾಖಿಗೆ ಹೆದರುತ್ತಾರೆ ಎಂಬ ಆರೋಪಕ್ಕೆ ಹುಡುಗರು ಹೀಗೆ ಹೇಳುತ್ತಾರೆ : ಅಯ್ಯೋ! ರಾಖಿ ಕಟ್ಟಿಸಿಕೊಳ್ಳೋಕೆ ನಮಗೇನು ತೊಂದರೆ ಇಲ್ಲ ಸ್ವಾಮಿ. ಆದ್ರೆ ಎಲ್ಲರೂ ಸಾಮೂಹಿಕವಾಗಿ ಅಣ್ಣನ ಪಟ್ಟ ಕಟ್ಟಿದರೆ ನಮ್ಮ ಕಥೆ ಏನು? ಕಾಲೇಜಿಗೆ ಹೋಗುವಾಗಲೇ ಸನ್ಯಾಸತ್ವ ತೆಗೆದುಕೊಳ್ಳೋಕೆ ಆಗುತ್ತಾ? ಈ ವಯಸ್ಸಲ್ಲಿ ಅಲ್ಲದೆ ಇನ್ಯಾವಾಗ ಲೈನ್ ಹೊಡೆಯೋದು? ಕಡೇಪಕ್ಷ ನಮ್ಮ ಅನುಮತಿ ಪಡೆದು ಕಟ್ಟುವುದಾದರೆ ಹ್ಞೂಂ ಅನ್ನಬಹುದಿತ್ತು. ಆದರೆ ಅನುಮತಿ ಪಡೆಯುವ ಸೌಜನ್ಯವಿರಲಿ, ಕಳ್ಳ ಕಾಕರನ್ನು ಪೊಲೀಸರು ಅಟ್ಟಿಸಿಕೊಂಡು ಹೋಗುವಂತೆ ಮಾಡಿದರೆ ಯಾರಿಗೆ ತಾನೆ ಕಟ್ಟಿಸಿಕೊಳ್ಳುವ ಮನಸ್ಸಾಗುತ್ತೆ?
ರಕ್ಷಾ ಬಂಧನವೆಂದರೆ ಕ್ರಶ್ಗಳ ಲಿಸ್ಟ್ ಪರಿಷ್ಕರಣೆಗೊಳ್ಳುವ ದಿನ. ಯಾವ ರಾಖಿಯಲ್ಲಿ ಯಾರ ಹೆಸರು ಬರೆದಿರುತ್ತೋ ಬಲ್ಲವರಾರು? ನಮ್ಮ 'ಕೈ ಬರಹ' ಸರಿಯಿಲ್ಲ ಗುರೂ! ಎಂದು ಕೈ ನೋಡಿಕೊಳ್ಳುತ್ತಾರೆ ಹುಡುಗರು. ಹಾಗೆಯೇ ರಾಖಿ ಕಟ್ಟುವುದು ಇಂದು ಕೇವಲ ಸಂಪ್ರದಾಯವಾಗಿ‌ ಉಳಿದಿಲ್ಲ ಬದಲಿಗೆ ಹುಡುಗರಿಂದ ಹಣ ಪೀಕುವ ಹಬ್ಬವನ್ನಾಗಿಸಿಕೊಂಡಿದ್ದಾರೆ ಹೆಣ್ಣುಮಕ್ಕಳು! ಎಂಬುದು ಇನ್ನೊಂದಿಷ್ಟು ನೊಂದ ಹುಡುಗರ ಅಭಿಪ್ರಾಯ. ರಾಖಿ ಕಟ್ಟಿ ಗಿಫ್ಟ್ ಬೇಕೆಂದು ಬೇಡಿಕೆ ಇಡುವ ಹುಡುಗಿಯರು ನಾವು ಕೂಡಿಡುವ ಅಲ್ಪಸ್ವಲ್ಪ ಹಣವನ್ನೂ ಕಬಳಿಸಿಬಿಡುತ್ತಾರೆ. ಕೆಲವರಂತೂ ರಾಖಿ ಹಬ್ಬದ ಹೆಸರಲ್ಲಿ ಒಳ್ಳೇ ದುಡಿಮೆ ಮಾಡುತ್ತಾರೆ. ಇಷ್ಟವಿಲ್ಲದಿದ್ದರೂ ಅಣ್ಣನೆನ್ನಿಸಿಕೊಳ್ಳುವ ಜೊತೆಗೆ ಜೇಬು ಖಾಲಿಯಾಗುವ ನೋವನ್ನೂ ಸಹಿಸಿಕೊಳ್ಳಬೇಕು.. ಆದ್ದರಿಂದ ರಾಖಿ ಹಬ್ಬದ ದಿನ ನಾವು ಕಾಣೆಯಾಗುತ್ತೇವೆ ಎನ್ನುವುದು ಹುಡುಗರ ಅಂಬೋಣ.
ಇಷ್ಟಾಗಿಯೂ ಅಣ್ಣನಾಗಿ‌ ರಕ್ಷಣೆ ನೀಡಿದರೆ ಸಾಕು‌ ಬೇರೇನೂ ಬೇಡ ಎಂದು ಒಳ್ಳೇ ಮನಸ್ಸಿನಿಂದ ರಾಖಿ ಕಟ್ಟುವವರಿಗೆ 'ಕೈ ಚಾಚಲು' ಸದಾ ಸಿದ್ಧ ಎನ್ನುವ ಹುಡುಗರೂ ಇದ್ದಾರೆ.

- ಸ್ಕಂದ ಆಗುಂಬೆ
     
             
ಈ ಲೇಖನ ಕನ್ನಡಪ್ರಭ ದಿನಪತ್ರಿಕೆಯ "ನಾವು" ಪುರವಣಿಯಲ್ಲಿ‌ ಪ್ರಕಟವಾಗಿದೆ..

(ಮೂಲಪ್ರತಿ)

Saturday, 15 July 2017

ಹೋಗೇ..‌


ಸ್ಮಶಾನದಲ್ಲಿ ಸತ್ತು ಬಿದ್ದ
ಇದ್ದಿಲ ಚೂರಿನಷ್ಟು ಕಪ್ಪೇನಲ್ಲ
ಚಂದ್ರ ಸಾಯುವ ಮೂರು ದಿನ
ಮುಂಚಿನ ನಡುರಾತ್ರಿ ಹೊತ್ತು..
ಕಾಡಂಚಿನಲ್ಲಿ ಹುಲಿ ಕೂಗಿದ್ದು
ಕಿವಿಗಿನ್ನೂ ನೆನಪಿದೆ
ಮಳೆನೀರಿನ ತುಂಟ ಹನಿಯೊಂದು
ಹೆಂಚುಗಳ ಒಳಹೊಕ್ಕು
ಕದ್ದು ನೋಡಿದ್ದು ಆವಾಗಲೇ..
ತುಟಿ ಕಚ್ಚಿರಲಿಲ್ಲ ಅಲ್ಲವಾ?
ಛೇ.. ಕಚ್ಚಿಬಿಡಬೇಕಿತ್ತು
ನೋಡು‌ ನಿನ್ನ ಉಗುರಿನ ಗಾಯ
ಇನ್ನೂ ಅಂಗಿಗೆ ಬಣ್ಣ ಬಳಿಯುತ್ತಿದೆ
ಕಾಲ್ಗೆಜ್ಜೆಯನ್ನು ಎಲ್ಲಿ ಬಿಚ್ಚಿಟ್ಟಿದ್ದಿ
ಪಪ್ಪಿ ಇಡಬೇಕು ಅದರ ಹೊಳಪಿಗೆ
ಅವತ್ತು ನಿನ್ನ ಸೆರಗಿಗಂಟಿದ್ದ
ಅತ್ತರಿನ ಘಮವಿನ್ನೂ ಕೋಣೆ ದಾಟಿಲ್ಲ
ಆತುರವಿದ್ದಿದ್ದು ನಿನಗೆ ಮಾತ್ರ
ಎಂಥಾ ಹುಡುಗಿ ಮಾರಾಯ್ತಿ.. ಹೋಗೇ
ನನಗೊಂದು ಮಾತು ಹೇಳಲು
ನಿನ್ನ ಗಂಟಲಲ್ಲೇನು ಕಡುಬು ಸಿಕ್ಕಿಕೊಂಡಿತ್ತಾ?
ನೀನವತ್ತು ರಸದೌತಣ ಬಡಿಸಿದಾಗಲೇ
ಕೇಳಿಬಿಡಬೇಕಿತ್ತು ನಾನು..
ಆ ಬಿಸಿಯಲ್ಲಿ ನೀ ತಣಿದಿದ್ದೂ
ಗೊತ್ತಾಗದೇ ಹೋಯಿತಲ್ಲಾ
ಅಳುತ್ತಾ ಕೂತಿದ್ದೀನಿ ಗೊತ್ತಾ?
ನೀ ಹೊರಡುವಾಗ ಎಷ್ಟೊತ್ತಾಗಿತ್ತು
ಹಿತ್ತಲಲ್ಲಿ ದಿನಾ ಕಿರುಚಾಡುವ
ಜೀರುಂಡೆಯಾದರೂ ಎದ್ದಿತ್ತಾ?
ಹಣೆ ಮೇಲೆ ಕುಂಕುಮವಿದ್ದಾಗಲೇ ಸಾಯಬೇಕು
ಎಂದು ಮದುವೆಯ ದಿನವೇ ಹೇಳಿದ್ದೆಯಲ್ಲಾ?
ಆ ಆಸೆಯೂ ಬೆವರಿನಲ್ಲಿ ಕರಗಿದೆ ನೋಡು
ಏಯ್ ಪುಟ್ಟಾ ಒಂಚೂರು ಎದ್ದೇಳೇ
ಅಂಗಳದಂಚಿನಲ್ಲಿ ಗುಲಾಬಿ ಅರಳಿದೆ
ಮೊನ್ನೆ ತಾನೇ ನೀ ಮುತ್ತಿಟ್ಟಿದ್ದೆಯಲ್ಲಾ
ಅದೇ ಮೊಗ್ಗು ಮೈನೆರೆದಿರುವುದು
ಎದ್ದೇಳೋದಿಲ್ವಾ? ಬೇಜಾರಾ?
ಮೊನ್ನೆ ಬೆಂಕಿ ಹಚ್ಚಿದ್ದಕ್ಕೆ ಸಿಟ್ಟಾ?
ಇನ್ಯಾವತ್ತೂ ಆ ಥರ ಮಾಡೋದಿಲ್ಲ
ಇದೊಂದು ಸಲ ಕ್ಷಮಿಸಿಬಿಡೇ
ಹೋಗೇ ಎಷ್ಟು ಕರೆದರೂ
ಮಾತಾಡೋದಿಲ್ಲ ಸೊಕ್ಕು ನಿಂಗೆ
ಗೂಬೆ, ಕತ್ತೆ, ಹಂದಿ, ಮಂಗ
ಅಯ್ಯೋ ಈಗ ನೆನಪಾಯ್ತು ನೋಡು
ಕೊಟ್ಟಿಗೆಯಲ್ಲಿ ಪುಟ್ಟ ಕರು ಕೂಗ್ತಾ ಇದೆ
ನನಗೆ ನಿನ್ನಷ್ಟು ಚುರುಕು
ಹಾಲು ಕರೆಯೋದಿಕ್ಕೆ ಬರೋದೂ ಇಲ್ಲ
ಇನ್ನೊಂದೈದು ದಿನ
ಅಭ್ಯಾಸವಾಗುತ್ತೆ ಬಿಡು
ಇನ್ನೂ ಒಂದು ವಾರ ದೇವರಿಗೆ ಉಪವಾಸ
ಅನುಭವಿಸಲಿ ಅವನು
ನನ್ನ ಹೊಟ್ಟೆಗೆ ಕಲ್ಲು ಹಾಕಿದ್ದಾನಲ್ಲ
ಥೋ.. ಇದ್ಯಾಕೋ ನಿಲ್ಲೋದಿಲ್ಲ
ಕರು ಬೊಬ್ಬೆ ಹೊಡೀತಿದೆ
ದೀಪ‌ ಹಚ್ಚಿ ಹೋಗ್ತೀನಿ
ಬತ್ತಿ ಸರಿ ಮಾಡೋಕೋಗಿ ಕೈ ಸುಟ್ಕೋಬೇಡ
ಹೀಗೆ ಹೋಗಿ ಹಾಗೆ ಬರ್ತೀನಿ
ಚೇಷ್ಟೆ ಮಾಡದೆ ಸುಮ್ನೆ ಕೂತ್ಕೊ.. ಜಾಣಮರಿ!!

- ಅನಾಸ್ಕ

Monday, 29 May 2017

ಮೂರಿಂಚು ಜಾಗದಲ್ಲಿ ನನ್ನ ಹೆಜ್ಜೆ ಗುರುತಿವೆ..



ಮತ್ತದೇ ಹಳೇ ಹುಡುಗಿಗೆ...
                                        ಡಿಯರ್ ಕೂಸೇ, ನಿನ್ ಮುಖ ನೋಡಿ ನೋಡಿ ಬೇಜಾರಾಗಿದೆ, ಅದೇ ನಗು! ಅದೇ ಸಿಟ್ಟು! ಅದೇ ತಲೆಹರಟೆ! ಏನೂ ಚೇಂಜ್ ಇಲ್ಲ ಸೋ ಇದೆಲ್ಲದರ ಸಹವಾಸ ಬಿಟ್ಟುಬಿಡಬೇಕು ಅನ್ನಿಸ್ತಿತ್ತು.. ಆದ್ರೇನ್ಮಾಡೋದು? ನಿನಗಿಂತ ಹಳತಾಗಿರೋ ನನ್ ಮುಖಕ್ಕೆ ಬೇರೆ ಯಾರೂ ಸಿಗದೇ ಇದ್ರೆ? ಎಂಬ ಭಯ.. ಆದ್ದರಿಂದ ಹೆಂಗೂ ನಿಂಗೆ ತಗ್ಲಾಕ್ಕೊಂಡಾಗಿದೆ, ಕಷ್ಟನೋ? ಸುಖನೋ? ಕಣ್ಮುಚ್ಕಂಡ್ ನಿನ್ ಜೊತೆ ಬದುಕಬೇಕು ಅನ್ನೋ ದುಸ್ಸಾಹಸದ ನಿರ್ಧಾರಕ್ಕೆ ಕೈ ಹಾಕಿದೀನಿ.. ಜಾಸ್ತಿ ಕಾಟ ಕೊಡದೆ ಕಾಪಾಡು!!
ಸಿಟ್ ಬಂತಾ? ಕ್ವಾಪನಾ? ಮುಖ ಕೆಂಪಾಯ್ತಾ? ಅಯ್ಯೋ ಆಗ್ಲಿ ಬಿಡೇ, ನಿನ್ ಜೊತೆ ಬದುಕೋ ನಿರ್ಧಾರ ತಗೊಂಡಿದೀನಲ್ಲ ಅದಕ್ಕಿಂತ ದೊಡ್ಡದೇನಲ್ಲ ಇದು. ನಿನ್ನನ್ನು ಮೊದಲ ಬಾರಿಗೆ ನೋಡಿದ ದಿನ ನನ್ನ ಬದುಕಿನ ಅತಿ ದೊಡ್ಡ ದುರಂತಕ್ಕೆ ಮುನ್ನುಡಿ ಹಾಡಿದ ದಿನ, ಆ ನಿನ್ ಮನೆಹಾಳ್ ಮುಂಗುರುಳಿನಿಂದ ನನ್ನ ಬ್ರಹ್ಮಚರ್ಯವನ್ನ ಗಲ್ಲಿಗೇರಿಸಿದ ದಿನ, ಪಂಚಾಂಗದಲ್ಲಿ ಅದೇನೋ ಗಂಡಕಾಲ ಅಂತಾರಲ್ಲ ಮೋಸ್ಟ್ಲಿ ಅದೇ ಘಳಿಗೆಯಲ್ಲಿ ನೀ ನನ್ ಕಣ್ಣಿಗೆ ಬಿದ್ದಿದ್ದಿರಬೇಕು. ಆ ಕ್ಷಣದಲ್ಲಿ ನಮ್ಮನೆ ದೇವ್ರು ನಿದ್ದೆ ಮಾಡ್ತಿದ್ದ ಅನ್ಸುತ್ತೆ ಇಲ್ಲಾಂದ್ರೆ ಖಂಡಿತ ಈ ಘನಘೋರ ಅಪಘಾತದಿಂದ ನನ್ನ ಬಚಾವ್ ಮಾಡ್ತಿದ್ದ ಅಥವಾ ಇನ್ಯಾವುದೋ ಹರಕೆ ತೀರಿಸದೇ ಬಾಕಿ ಉಳಿದಿದ್ದು ಅದೇ ಸಿಟ್ಟಲ್ಲಿ ನನ್ನ ಹರಕೆ ಕುರಿ ಮಾಡಿದ್ನೋ? ಏನೋ? ನಾ ಕಾಣೆ. ಹೋಗ್ಲಿಬಿಡು ನನ್ನ ಹಣೆಬರಹಕ್ಕೆ ನಿನ್ನನ್ಯಾಕೆ ದೂಷಣೆ ಮಾಡ್ಲಿ? ನ್ಯಾಯವಾಗಿ ನೋಡೋದಾದ್ರೆ ಇದ್ರಿಂದ ನಿನಗೆ ಲಾಭವೇ ಆಗಿರೋದು ಯಾಕಂದ್ರೆ ನನ್ನಂತ ಹುಡುಗನನ್ನ ಪಡೆಯೋಕೆ ವಸಿ ಪುಣ್ಯ ಮಾಡಿರ್ಬೇಕಾ? ಎಂಥೆಂಥಾ ಒಳ್ಳೇ ಹುಡುಗಿಯರಿಗೆ ಸಿಗದ ಸುವರ್ಣಾವಕಾಶ ನಿನಗೆ ಸಿಕ್ಕಿದೆ ನೋಡು. ಹಾಗಂತ ನೀ ಕೆಟ್ಟವ್ಳು ಅಂತ ಹೇಳ್ತಿಲ್ಲ ಬಟ್ ನೀ ನನ್ ಹಾಗೆ ತುಂಬಾ ಒಳ್ಳೆಯವಳೇನಲ್ಲ ಆಯ್ತಾ?
            ಥೋ.. ಪ್ರೇಮಪತ್ರ ಬರೆಯೋಣ ಅಂತ ಕೂತ್ರೆ ಏನೇನೋ ಪುರಾಣಗಳೆಲ್ಲಾ ಹೊರಗೆ ಬರ್ತಿದ್ದಾವೆ.. ಇದಕ್ಕೇ ಅನ್ಸುತ್ತೆ ನನ್ ಹಳೇ ಕ್ರಷ್ಷು "ನಿಂಗ್ ಲವ್ ಲೆಟ್ರು ಬರ್ಯೋಕೆ ಬರೋದಿಲ್ಲ ಕಣೋ ಗೂಬೆ" ಅಂತ ಬೈತಾ ಇದ್ದಿದ್ದು, ಅಷ್ಟೆಲ್ಲಾ ಪೋಸ್ ಕೊಡೋದು ನೋಡಿ ಅವ್ಳು ಪ್ರೇಮಪತ್ರ ಬರ್ಯೋದ್ರಲ್ಲಿ ಎಕ್ಸ್ಪರ್ಟ್ ಅಂದ್ಕೊಂಡಿದ್ದೆ ಬಟ್ ಆಮೇಲ್ ಗೊತ್ತಾಯ್ತು, ಅವ್ಳು ವಾರಕ್ಕೆ‌ ಏನಿಲ್ಲಾ ಅಂದ್ರೂ ಒಂದೈವತ್ತು ಲವ್ ಲೆಟರ್ಸ್ ವ್ಯಾಲ್ಯೂಯೇಷನ್ ಮಾಡ್ತಿದ್ಳು ಅಂತ.. ಅಯ್ಯೋ ಬೇಜಾರ್ ಮಾಡ್ಕೋಬೇಡ ಅವ್ಳು ಜಸ್ಟ್ ಕ್ರಷ್ ಮಾರಾಯ್ತಿ, ನೀನೇ ನನ್ ಫಸ್ಟ್ ಅಂಡ್ ಲಾಸ್ಟ್ ಲವ್ವು ಆಯ್ತಾ? ಬೇರೆ ಹುಡ್ಗಿ ವಿಷ್ಯ ಎಲ್ಲಾ ಈಗ್ಯಾಕೆ? ನಮ್ದೇ ಬೇಜಾನ್ ಕಥೆ ಇದೆ ಅದ್ರ ಬಗ್ಗೆನೂ ಒಂಚೂರ್ ತಲೆ ಕೆಡ್ಸ್ಕಳಣ ಬಾ..
                ಇತ್ತೀಚೆಗೆ ನಿನ್ ಮೇಲೆ ಲವ್ ಜಾಸ್ತಿ ಆಗ್ತಿದೆ, ಓಲ್ಡ್ ಈಸ್ ಗೋಲ್ಡ್ ಅಂತಾರಲ್ಲ ಹಾಗೇ ಇರ್ಬೇಕು. ದಿನಾಲು ನಿನ್ ಮುಖ ನೋಡ್ಬೇಕು, ನಿನ್ ಜೊತೆ ಮಾತಾಡ್ಬೇಕು ಅಂತೆಲ್ಲಾ ಅನ್ಸುತ್ತೆ, ಆದ್ರೇನ್ಮಾಡ್ಲಿ ಈ ಬಿಟ್ಟಿ ಜಿಯೋ ನೆಟ್ವರ್ಕ್ ನೆಟ್ಟಗಿರೋದೇ ಇಲ್ಲ.. ಹೋಗ್ಲಿ ವಾಟ್ಸಪ್ಪಲ್ಲಿ ಚಾಟ್ ಮಾಡೋಣ ಅಂದ್ರೆ ನೀನೊಳ್ಳೇ ಪುರುಸೊತ್ತಿಲ್ಲದ ಪದ್ಮಾವತಿ ಥರ ಆಡ್ತೀಯ.. ಎಲ್ಲೋ ಅಪ್ರೂಪಕ್ಕೊಂದ್ಸಾರಿ ಹಾಯ್ ಅನ್ನೋದ್ರೊಳಗೆ ಬೈ ಅಂದು ತಾಚಿ ಮಾಡ್ಬೇಕು‌ ಅನ್ನೋ ನೆಪ ಕೊಟ್ಟು ಮತ್ತೊಂದ್ ಘಂಟೆ ಆನ್ಲೈನಲ್ಲೇ ಜಪ ಮಾಡ್ತಾ ಇರ್ತೀಯ.. ನಂಗಂತೂ ನಿನ್ ಧ್ವನೀನೇ ಮರ್ತೋದಂಗಾಗಿದೆ. ಅವತ್ತು ಕಿರಿಕ್ ಪಾರ್ಟಿ ಸಿನಿಮಾಕ್ಕೆ ಹೋದಾಗ "ನೀನಿರೆ ಸನಿಹ ನೀನಿರೆ...." ಹಾಡು ಬಂದಾಗ್ಲಂತೂ ಅದೆಷ್ಟರ ಮಟ್ಟಿಗೆ ನಿನ್ನ ನೆನಪಾಯ್ತು ಗೊತ್ತಾ? ನಿನ್ ಜೊತೆ ಥಿಯೇಟ್ರಲ್ಲಿ ಕೂತ್ಕೊಂಡು ಆ ಹಾಡು ನೋಡ್ಬೇಕು ಅಂತ ಅನ್ನಿಸಿ ಬಿಡ್ತು.
ಕೆಲವೊಮ್ಮೆ ನೀ ನನ್ನಿಂದ ದೂರ ಆಗ್ತಿದ್ಯೇನೋ? ನನ್ನ ಕಡೆಗಾಣಿಸ್ತಿಯೇನೋ? ಅಂತೆಲ್ಲಾ ಭಯ ಆಗುತ್ತೆ. ಎಷ್ಟೋ ಸಲ ಈ ಪ್ರೀತಿ ಪ್ರೇಮ ಎಲ್ಲಾ ಭ್ರಮೆ.. ನೀ ನಂಗ್ ಸಿಗೋದೇ ಇಲ್ಲ ಅನ್ಸೋಕೆ ಶುರುವಾಗಿ ಮಂಕಾಗಿ ಬಿಡ್ತೀನಿ. ಇವೆಲ್ಲಾ ಅನುಮಾನಗಳನ್ನ ಒಂದೇ ಉಸಿರಿಗೆ ನಿನ್ನ ಬಳಿ ಹೇಳಿಕೊಂಡು ಮನಸ್ಸಿನ ಭಾರವನ್ನೆಲ್ಲಾ ಕರಗಿಸಿಕೊಳ್ಬೇಕು ಅನ್ನಿಸಿದಾಗಲೆಲ್ಲಾ ನಿನಗೆಲ್ಲಿ ನೋವಾಗ್ತದೋ ಅಂತ ಸುಮ್ಮನಾಗಿಬಿಡ್ತೀನಿ. ನಿಜ ಹೇಳ್ತೀನಿ ಕೇಳು.. ಹುಡುಗರು ಪ್ರೀತಿಯ ವಿಷ್ಯದಲ್ಲಿ ನಿಮಗಿಂತ ತುಸು ಹೆಚ್ಚೇ ಸ್ವಾರ್ಥಿಗಳು, ನಾವಿಷ್ಟಪಡೋ ಹುಡುಗಿಗೆ ನಮ್ ಮೇಲೂ ಒಂದ್ ಕಣ್ಣಿದೆ ಅಂತ ಗೊತ್ತಾದ್ರೆ ಮುಗಿದೇ ಹೋಯ್ತು, ಅಂಗೈಯಲ್ಲೇ ಪ್ರಪಂಚ ಸೃಷ್ಟಿಸಿಕೊಂಡು ಬಿಡ್ತೀವಿ, ಆದ್ರೆ ಯಾರೋ ಒಂದ್ನಾಲ್ಕ್ ಜನ ಪ್ರೀತಿ ಹೆಸ್ರಲ್ಲಿ ಮಾಡಬಾರದ ಅನಾಚಾರ ಮಾಡಿ ಎಲ್ರೂ ಹುಡುಗ್ರನ್ನ ಅನುಮಾನದಿಂದ ನೋಡೋ ಹಾಗಾಗಿದೆ ಆದ್ರಿಂದ ಕೆಲವೊಮ್ಮೆ ಮನಸು ಬಿಚ್ಚಿ ಮಾತಾಡೋಕೂ ಯೋಚ್ನೆ ಮಾಡ್ಬೇಕಾದ ಸ್ಥಿತಿ ನಿರ್ಮಾಣ ಆಗಿದೆ.
                     ನನ್ನನ್ನ ಸ್ಟೇಜ್ ಮೇಲೆ ನಿಲ್ಸಿ ಗಂಟೆಗಟ್ಲೆ ಮಾತಾಡು ಅಂದ್ರೂ ಮಾತಾಡ್ತಿನೇನು ಬಟ್ ನಿನ್ ಜೊತೆ ಮಾತಾಡ್ಬೇಕಾದ್ರೆ ಒಳ್ಳೇ ಮದ್ವೆ ದಿನ ಹೆಣ್ಣು ನಾಚ್ಕೊಳ್ಳೋ ಲೆವೆಲ್ಲಿಗೆ ನಾಚ್ಕೊತೀನಿ.. ಅದ್ರಲ್ಲೂ ನೀ ಮುಂದೆ ಇದ್ರಂತೂ ಮುಗಿದೇ ಹೋಯ್ತು..‌ ಬಟ್ ಮೊದಲೆಲ್ಲಾ ನಾವ್ ಎಷ್ಟೊಂದ್ ಮಾತಾಡ್ತಿದ್ವಿ ಅಲ್ವಾ? ಮಿನಿಮಮ್ ಇಪತ್ - ಮೂವತ್ ನಿಮ್ಷ ಫೋನಲ್ಲಿ ಅಂಟ್ಕೊತ್ತಿದ್ವಿ, ದಿನಾ ಫೋನು..!! ಆವಾಗಿದ್ದ ಎಕ್ಸೈಟ್ಮೆಂಟ್ ಎಲ್ಲೋಯ್ತು, ಟೈಂ ಪಾಸ್ ಮಾಡೋಕೋಸ್ಕರ ಮಾತಾಡ್ತಿದ್ವಾ? ಅಥ್ವಾ ಒಬ್ರಿಗೊಬ್ರು ಟೈಂ ಕೊಡೋಕಾಗ್ದಿರೋ ಅಷ್ಟು ದೊಡ್ಡೋರಾಗ್ಬಿಟ್ವಾ? ನಾವ್ ಅಷ್ಟೊಂದ್ ಬ್ಯುಸಿನಾ?  ಅಬ್ಬಾ.. ಒಟ್ನಲ್ಲಿ ನಿನ್ ಹತ್ರ ಮಾತಾಡೋದೆ ಕಮ್ಮಿ ಆಗೋಗಿದೆ. ಆ್ಯಕ್ಚುಲಿ ನಿನ್ ಜೊತೆ ಮಾತಾಡಿದ್ರೆ ನಂಗೇನೋ ಒಂಥರಾ ತಲೇಲಿ ರಿಫ್ರೆಶ್ ಬಟನ್ ಒತ್ತಿದಂಗಾಗುತ್ತೆ  ಗೊತ್ತಾ?
         ಅದಿರ್ಲಿ ಆವಾಗೆಲ್ಲ ಡಿಯರ್ರು, ಕಂದ, ಮಣ್ಣು ಮಸಿ ಅಂತೆಲ್ಲಾ ಕರೀತಿದ್ಯಲ್ಲಾ ಅದೆಲ್ಲಾ ಈಗೆಲ್ಲೋಯ್ತು? ನೀ ಹಂಗ್ ಕರೆದ್ರೆ ನಂಗ್ ಬೇಜಾನ್ ಖುಷಿ.. ಯಾಕೋ ಗೊತ್ತಿಲ್ಲ ನಿನ್ ಹತ್ರ ಬೈಸ್ಕೊಳ್ಳೋದ್ರಲ್ಲೂ ಮಜಾ ಇದೆ. ನೀ ಹ್ಞೂಂ, ಓಕೆ,ಅಂತೆಲ್ಲಾ ಕಳಿಸಿದ್ರೆ ಮಾತ್ರ ಅಷ್ಟೇ ಬೇಜಾರ್ ಆಗ್ತದೆ.
          ಇಷ್ಟೆಲ್ಲಾ ಆಗಿ... ನೀ ನಿನ್ ಹೃದಯದಲ್ಲಿ ನನಗೊಂದ್ ಮೂರಿಂಚ್ ಜಾಗ ಆದ್ರೂ ಕೊಟ್ಟಿರ್ತೀಯ ಅನ್ನೋ ನಂಬಿಕೆ ಇದೆ ಸೋ ಪ್ರಾಮಾಣಿಕವಾಗಿ ಹೇಳ್ತೀನಿ ಕೇಳು.. ನಿನ್ನ ಮನಸಲ್ಲಿರೋದನ್ನ ಮುಚ್ಚಿಟ್ಕೊಂಡು ಇನ್ನೊಬ್ರ ಖುಷಿಗಾಗಿ ಮುಖವಾಡ ಹಾಕೋ ನಿರ್ಧಾರನ್ನ ದಯವಿಟ್ಟು ತಗೋಬೇಡ, ನೀ ಎಷ್ಟೇ ಮರೆತಂತೆ ನಟಿಸಿದ್ರೂ ಆ ಮೂರಿಂಚು ಜಾಗದಲ್ಲಿ ನಾ ಓಡಾಡಿ ಸವೆಸಿರೋ ಹಾದಿಯನ್ನ ಮತ್ತೆ ಹೊಸತರಂತೆ ಮಾಡೋಕೆ ಆಗಲ್ಲ, ಯಾರೆಷ್ಟೇ ತೇಪೆ ಹಚ್ಚಿದ್ರೂ ಅದು ತಾತ್ಕಾಲಿಕ‌ ಸೋ ನಿನ್ ಭಾವನೆಗಳನ್ನ ನೀನೇ ನಿರ್ಲಕ್ಷ್ಯ ಮಾಡಿ ಬೇರ್ಯಾವ್ದೋ ಬಣ್ಣ ಹಚ್ಬೇಡ ಆಯ್ತಾ?
           ಬರೋಬ್ಬರಿ ಎರಡು ಮಳೆಗಾಲಗಳ ನಂತರ ಮತ್ತೆ ಲವ್ ಲೆಟರ್ ಬರ್ದಿದೀನಿ. ಬರವಣಿಗೆಯ ಶೈಲಿ ಕೊಂಚ ಬದಲಾಗಿರಬಹುದು, ಪದಗಳು ಬದಲಾಗಿರಬಹುದು ಆದ್ರೆ ಭಾವನೆಗಳು ಮಾತ್ರ ಅವತ್ತಿನಂತೇ ಇವೆ ಮತ್ತು ಅಷ್ಟೇ ಪರಿಶುದ್ಧವಾಗಿವೆ, ಮುಂದೆಯೂ ಹೀಗೆ ಇರುತ್ತವೆ ಅವು ಎಂದಿಗೂ ಅಮರ..  ಪತ್ರದ ಸ್ಟಾರ್ಟಿಂಗಲ್ಲಿ ಏನೇನೋ ತಲೆಹರಟೆ ಮಾಡಿದೀನಿ ಅದ್ರಿಂದ ಬೇಜಾರಾಗಿದ್ರೆ ದಯವಿಟ್ಟು ಹೊಟ್ಟೆಗಾಕ್ಕೋ.. ಹೇಗೂ ಇಷ್ಟುದ್ದ ಲೆಟರ್ ಓದ್ಬೇಕಾದ್ರೆ ನಿನಗೆ ಹಸಿವಾಗಿರುತ್ತೆ ಅಂತ ನಂಗೊತ್ತು..
ಹ್ಞೂಂ.. ಹಂಗೇ ಇನ್ನೊಂದ್ ಮಾತು - ಮನುಷ್ಯ ಎಷ್ಟೇ ತಪ್ ಮಾಡಿದ್ರೂ ಅದನ್ನ ಒಪ್ಕೊಂಡು ತಿದ್ಕೋಬೇಕು ಆದ್ರೆ ಯಾವ್ ಕಾರಣಕ್ಕೂ ಮೋಸ‌ ಮಾಡಕ್ ಹೋಗ್ಬಾರ್ದು ಅವು ನಮ್ ಖುಷೀನೆಲ್ಲಾ ನುಂಗಿಹಾಕ್ ಬಿಡ್ತಾವೆ.. ಈ ಮಾತ್ ಯಾಕ್ ಹೇಳ್ದೆ ಅಂತ ಗೊತ್ತಿಲ್ಲ.. ಬಟ್ ಇದು ನಿಂಗಿಂತ ಜಾಸ್ತಿ ನಂಗೇ ಅಪ್ಲೈ ಆಗ್ತದೆ ಬಿಡು.
ಸಾಕ್ ಬಿಡು.. ತಲೆಗ್ ಬಂದಿದ್ದನ್ನೆಲ್ಲಾ ಹೇಳಿದೀನಿ.. ಇನ್ನೂ ಏನಾರ್ ಉಳ್ದಿದ್ರೆ ಮುಂದಿನ್ ಲೆಟರ್ ಅಲ್ಲಿ ಬರೀತಿನಿ... ಕಾಯ್ತಾ ಇರು... ಆದಷ್ಟ್ ಬೇಗ ಯಾವತ್ತಾದ್ರೂ ಸಿಗಣ.. ನಾನೂ ಕಾಯ್ತಾ ಇರ್ತೀನಿ.. ಬೇಜಾನ್ ಮಾತಾಡ್ಬೇಕು, ಈ ಸರಿ ಪಕ್ಕಾ ನಡಗೋದಿಲ್ಲ... ಯಾವತ್ತು ಅಂತ ಹೇಳು.. ಲವ್ ಯೂ..


ಇಂತಿ.
ಮೂರಿಂಚು ಜಾಗವ ಸವೆಸಿದವ...
ಸ್ಕಂದ ಆಗುಂಬೆ


ಈ ಲೇಖನ ವಿಶ್ವವಾಣಿ ದಿನಪತ್ರಿಕೆಯ ವಿ+ ಪುರವಣಿಯಲ್ಲಿ ಪ್ರಕಟವಾಗಿದೆ..

                         (ಮೂಲಪ್ರತಿ)

Wednesday, 17 May 2017

ಮೌನ ಮಾತಾದಾಗ...


        ಕರುಳಬಳ್ಳಿಯ ಕಡಿದುಕೊಂಡು ಹೊರಬಂದ ಕಂದನೊಂದು ಮೌನವ ಮುರಿದಂತೆ, ಮುಂಗಾರಿನ ಆರಂಭದಲ್ಲಿ ಸದ್ದು ಮಾಡಿದ ಗುಡುಗಿನಂತೆ, ಹುಣ್ಣಿಮೆಯ ದಿನ ಶರಧಿಯು ಮೌನ ಪರದೆಯ ಸರಿಸಿ ಅಲೆಗಳೊಂದಿಗೆ ಅಬ್ಬರಿಸಿದಂತೆ, ಮಡುಗಟ್ಟಿದ ದುಃಖವು ಮೌನದ ಕಟ್ಟೆ ಒಡೆದು ಅಳುವಾಗಿ ಹೊರಹೊಮ್ಮಿದಂತೆ.. ನನ್ನವಳು ಬಹುದಿನಗಳ ನಂತರ ಮೌನದ ಪರಿಧಿಯ ಭೇದಿಸಿ ಭಾವ ತರಂಗಗಳ ಸೃಷ್ಟಿಸಿ ಎನ್ನ ಮನ ಹೊಕ್ಕಳು.. ಅವಳಿಗಾಗಿ ಕಾಡಿದ್ದೆಷ್ಟೋ? ಬೇಡಿದ್ದೆಷ್ಟೋ? ನಾನರಿಯೆ. ಆದರೆ ಒಂದಂತೂ ಅರಿವಾಗಿತ್ತು - ಅವಳೆಂದರೆ ಅಪ್ಪಟ ಮೌನ, ನಾನೆಂದರೆ ಮೌನವನ್ನರಿಯದ ಮಾತು ಎಂದು. ಮಾತಿಗೂ ಮೌನಕ್ಕೂ ಎತ್ತಣಿಂದೆತ್ತಣ ಸಂಬಂಧ? ನನ್ನ ಪ್ರತಿ ಮಾತಿಗೂ ಅವಳ ಮೌನ ಉತ್ತರಿಸುತ್ತಿತ್ತು ಅಂತೆಯೇ ಅವಳ ಮೌನಕ್ಕೆ ನನ್ನ ಮಾತು ಕೂಡಾ.. ಹೀಗಿರುವಾಗಲೇ ಮೌನಕ್ಕೂ ಮಾತಿಗೂ ಪ್ರೀತಿ ಹುಟ್ಟಿದ್ದು.
        ಎನ್ನ ಹೃದಯದ ಭಾವನೆಗಳನ್ನೆಲ್ಲಾ ಒಟ್ಟುಹಾಕಿ ಮಾತಿನ ಮೂಲಕ ಅವಳಿಗೆ ತಲುಪಿಸಿದೆ, ಇನ್ನಾದರೂ ಮೌನವ ಮುರಿಯಲೆಂದು. ಊಹ್ಞೂಂ.. ಎಲ್ಲವೂ ವ್ಯರ್ಥ. ನನ್ನಷ್ಟೂ ಮಾತುಗಳನ್ನೂ ಅವಳ ಒಂದೇ ಒಂದು ಮೌನ ನುಂಗಿಹಾಕಿತ್ತು. ಅವಳ ಮೌನ ತಪಸ್ಸಿನ ಮುಂದೆ ನಾನು ಸೋತಿದ್ದೆ, ಎನ್ನ ಮಾತುಗಳಿಗೆ ಕಿಂಚಿತ್ತೂ ಕದಡದ ಅವಳ ಮೌನದ ಅಗಾಧತೆಯ ಬಗ್ಗೆ ನನ್ನೊಳಗೆ ಕುತೂಹಲವೆದ್ದಿತ್ತು. ಎಂತಾದರೂ ಸರಿಯೇ ಅವಳ ಮೌನವನ್ನು ಮುರಿಯಲೇ ಬೇಕೆಂಬ ಶಪಥ ತೊಟ್ಟು ಪದೇ ಪದೇ ಎನ್ನ ಮಾತಿನ ಬಾಣಗಳ ಅವಳತ್ತ ಎಸೆದೆ, ಕರೆದೆ, ಕೂಗಿದೆ, ಗೋಗರೆದೆ, ಬಿಕ್ಕಿ ಬಿಕ್ಕಿ ಅತ್ತೆ.. ಊಹ್ಞೂಂ.. ಅವಳ ಮೌನ ಎಳ್ಳಷ್ಟೂ ಕರಗಲಿಲ್ಲ ಬದಲಾಗಿ ಇನ್ನೂ ಗಾಢವಾಗುತ್ತಾ ಹೋಯಿತು.. ಕಾರ್ಮೋಡ ಕವಿದ ಕಗ್ಗತ್ತಲ ಅಮಾವಾಸ್ಯೆಯ ರಾತ್ರಿಯಂತೆ ದಟ್ಟವಾಯಿತು.
        ನಾನೋ ಛಲ ಬಿಡದ ಹಠವಾದಿ, ಅವಳೋ ಬರೀ ಮೌನಿ.
        ಮತ್ತೆ ಶುರುವಾಯಿತು ಯುದ್ಧ ಮಾತಿಗೂ, ಮೌನಕ್ಕೂ. ಈ ಬಾರಿ ನನ್ನದು ಕವಿತೆಗಳ ಬಾಣ.. ಅವಳಂದವನು ವರ್ಣಿಸಿದೆ, ಅವಳ ಮೌನವನ್ನು ಚಿತ್ರಿಸಿದೆ, ಕೊರೆದೆ, ಕೆತ್ತಿದೆ, ಪುಟಗಟ್ಟಲೆ ಬರೆದೆ. ಬರೆದದ್ದನ್ನೆಲ್ಲಾ ಅವಳಿಗೊಪ್ಪಿಸಿದೆ, ಅವಳ ಕಂಗಳು ಕವಿತೆಯ ಮೇಲೆ ಓಡಾಡಲು ನನಗೆ ಒಳಗೊಳಗೇ ಖುಷಿ.. ಪ್ರಾಸಗಳ ಹುಡುಕಿ ನನಗೆ ತ್ರಾಸವಾಯಿತೇ ಹೊರತು ಅವಳ ಮೌನ ಕರಗಲಿಲ್ಲ, ಸಾಸಿವೆಯಷ್ಟೂ ಕಿರಿದಾಗಲಿಲ್ಲ. ಈಗ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಈ ಬಾರಿ ಕಲಾವಿದನಾದೆ, ಬಣ್ಣಗಳೊಂದಿಗೆ ಯುದ್ಧಕ್ಕೆ ಹೊರಟೆ, ಅವಳಂದವನು ಚಿತ್ರಿಸಿದೆ, ಅವಳ ರೂಪವನ್ನು ಯಥಾವತ್ತು ಪುಟಕ್ಕಿಳಿಸಿದೆ, ಅವಳ ಮೌನಕ್ಕೊಂದು ಆಕಾರ ಕೊಟ್ಟೆ, ಗೀಚಿದೆ, ಬಣ್ಣಗಳನ್ನೆಲ್ಲಾ ಒಟ್ಟು ಸೇರಿಸಿ ಬಿಳಿ ಹಾಳೆಯ ಮೇಲೆ ಸುರಿದೆ, ವರ್ಣ ಚಿತ್ತಾರವ ಮೂಡಿಸಿದೆ, ಬಣ್ಣಗಳೊಂದಿಗೆ ಗುದ್ದಾಡಿದೆ, ಕೈಗೆಲ್ಲಾ ಬಣ್ಣಗಳ ಮೆತ್ತಿಕೊಂಡೆ, ಕೊನೆಯಲ್ಲಿ ಎಲ್ಲವನ್ನೂ ಒಟ್ಟು ಮಾಡಿ ಅವಳ ಪಾದಕ್ಕೆ ಅರ್ಪಿಸಿದೆ. ನಿಶ್ಚಲವಾಗಿ ಕುಳಿತವಳು ಈಗಲಾದರೂ ಅಲುಗಾಡಲೆಂದು.. ಊಹ್ಞೂಂ ಮತ್ತೆ ಸೋತಿದ್ದೆ, ಅವಳ ಕಂಗಳು ಚಲಿಸಿದವೇ ಹೊರತು ಮೌನವಲ್ಲ.. ಇನ್ನು ಹೋರಾಡಲು ಶಕ್ತಿ ಉಳಿದಿರಲಿಲ್ಲ, ನಿಂತಲ್ಲೇ ಕುಸಿದು ಕುಳಿತೆ, ಕೊನೆಗೂ ಅವಳ ಮೌನಕ್ಕೆ ಶರಣಾಗಿ ಮಾತಿಗೆ ಪೂರ್ಣವಿರಾಮವನ್ನಿಟ್ಟೆ. ಅವಳ ಕಂಗಳನ್ನೇ ದಿಟ್ಟಿಸಿದೆ, ಆಗಿದ್ದಾಗಲಿ ಎಂದು ಅವಳ ತೊಡೆಯ ಮೇಲೆ ತಲೆಯೂರಿ ಮಲಗಿಬಿಟ್ಟೆ. ಅವಳು ಪ್ರತಿಕ್ರಿಯಿಸಲಿಲ್ಲ.
        ಎಷ್ಟು ಹೊತ್ತು ಕಳೆದಿತ್ತೋ ಗೊತ್ತಿಲ್ಲ, ನಿದ್ರೆಗೆ ಜಾರಿದ್ದೆ. ಹಣೆಯ ಮೇಲೆ ಬೆಚ್ಚಗಿನ ಭಾವವೊಂದು ಹರಿದಂತಾಗಲು ಮಗ್ಗಲು ಬದಲಿಸಿದೆ. ಹನಿಯೊಂದು ಕೆನ್ನೆ ಸವರಿತು, ಕಣ್ಬಿಟ್ಟೆ.. ಮತ್ತೊಂದು ಹನಿ ಬೀಳಲು ಫಕ್ಕನೆ ಎದ್ದು ಕುಳಿತೆ, ಅವಳ ಕಣ್ಣಂಚಿನಲಿ ಹನಿಯೊಂದು ಹೊರಬರಲು ತವಕಿಸುತ್ತಿತ್ತು, ಒರೆಸಲು ಕೈ ಚಾಚಿದೆ ಜಾರಿ ಬಿತ್ತು.  ಧಾರಾಕಾರವಾಗಿ ಅತ್ತಳು, ಏನೂ ತೋಚದೆ ಮೂಕನಾದೆ. ಅಲ್ಲೇ ಬಿದ್ದಿದ್ದ ಬಿಳಿ ಹಾಳೆಯೊಂದನ್ನು ಎತ್ತಿಕೊಂಡು ಏನನ್ನೋ ಗೀಚಿ ಕೈಗಿತ್ತಳು, ಹಾಳೆಯನ್ನೇ ದಿಟ್ಟಿಸಿದೆ.. ಅದರಲ್ಲಿ ಬರೆದಿತ್ತು - "ನಾನೊಬ್ಬಳು ಮಾತು ಬಾರದ ಮೂಗಿ, ನೀ ಎಷ್ಟೇ ಕೂಗಿದರೂ ನಾ ಬರಿಯ ಮೌನಿ.." ತಲೆಯೆತ್ತಿದೆ, ಅವಳ ಕಣ್ಣಂಚು ಮಾತನಾಡುತ್ತಿತ್ತು, ಅವಳ ಅಸಹಾಯಕತೆ ಎಲ್ಲವನ್ನೂ ವಿವರಿಸಿತ್ತು. ನನ್ನ ಮಾತುಗಳು ನಾಲಗೆಯಲ್ಲೇ ಕರಗಿ ಹೋದವು,
        ಈಗ ನಾನು ಮೂಗನಾಗಿದ್ದೆ, ಮಾತು ಬರುವ ಮೂಗನಾಗಿದ್ದೆ..
ಅವಳು ಮಾತಾದಳು.. ನಾನು ಮೌನಿಯಾದೆ. ಮಾತು ಮೌನವಾಯಿತು, ಮೌನ ಮಾತಾಯಿತು.. ಕ್ಷಣಾರ್ಧದಲ್ಲಿ ಎಲ್ಲವೂ ಬದಲಾಗಿತ್ತು, ಭಾವನೆಯ ಹೊರತು..
                                             
- ಸ್ಕಂದ ಆಗುಂಬೆ

ಈ ಲೇಖನ ಕನ್ನಡಪ್ರಭ ದಿನಪತ್ರಿಕೆಯ "ನಾವು" ಪುರವಣಿಯಲ್ಲಿ ಪ್ರಕಟವಾಗಿದೆ..

                        (ಮೂಲಪ್ರತಿ)

Sunday, 14 May 2017

ಅಪ್ಪ, ಅಮ್ಮ ಮತ್ತು ನಾನು



ನೀವ್ ಯಾವ್ದಾರ್ ಹುಡುಗಿಯನ್ನ ಪ್ರೀತ್ಸಿದ್ರೆ ಅದನ್ನ ಅವ್ಳಿಗ್ ತಿಳ್ಸೋಕ್ಕೋಸ್ಕರ ಪ್ರಪೋಸ್ ಮಾಡ್ಬೇಕು.. ಅವ್ಳ್ ಬರ್ತ್ ಡೇಗೆ ಹನ್ನೆರಡ್ ಗಂಟೆಗೆ ಸರಿಯಾಗ್ ವಿಶ್ ಮಾಡಿ ಪ್ರೀತಿಯ ಅಗಾಧತೆಯನ್ನ ತೋರ್ಪಡಿಸಬೇಕು, ವ್ಯಾಲೆಂಟೆನ್ಸ್ ಡೇಗೆ ಲವ್ ಯೂ ಬೇಬಿ.. ನೀನೇ ನನ್ ಸರ್ವಸ್ವ ಅಂತ ಬಾಯ್ಬಿಟ್ಟು ಹೇಳಿ ಅವ್ಳನ್ ಇಂಪ್ರೆಸ್ ಮಾಡ್ಬೇಕು, ಗಿಫ್ಟ್ ಕೊಟ್ಟು ನಂದು ಟ್ರೂ ಲವ್ ಕಣೇ ಅಂತ ತೋರಿಸ್ಕೋಬೇಕು!

ಬಟ್.‌.
ಅಪ್ಪ - ಅಮ್ಮಂದಿರ ವಿಷ್ಯದಲ್ಲಿ?
ನಾನಂತೂ ಇದೂವರೆಗೂ ಅಪ್ಪ - ಅಮ್ಮನಿಗೆ ಬರ್ತ್ ಡೇ ವಿಶ್ ಮಾಡಿಲ್ಲ, ಹ್ಯಾಪಿ ಮದರ್ಸ್ ಡೇ, ಹ್ಯಾಪಿ ಫಾದರ್ಸ್ ಡೇ.. ಲವ್ ಯೂ ಮಾ.. ಲವ್ ಯೂ ಪಾ.. ಅಂತ ಹೋಗಿ ನನ್ನೊಳಗಿರೋ ಪ್ರೀತಿಯನ್ನ ಹೇಳ್ಕೊಂಡಿಲ್ಲ, ಅವ್ರು ಏನಾದ್ರೂ ಸಾಧಿಸಿದಾಗ ಕಂಗ್ರಾಟ್ಸ್ ಅಂತ ಕೈ ಕುಲುಕಿಯೂ ಇಲ್ಲ.. ಆದ್ರೂ ಅವರ್ಯಾವತ್ತೂ ಬೇಜಾರ್ ಮಾಡ್ಕೊಂಡಿಲ್ಲ.. ಬಾಯ್ಬಿಟ್ಟು ಹೇಳದಿದ್ದರೂ ಇರುತ್ತದಲ್ಲ ಆ ಲವ್ವೇ ಟ್ರೂ ಲವ್ವು! 😘

ನಾನ್ ಅಪ್ಪ - ಅಮ್ಮನ ಜೊತೆ ನಡೆದುಕೊಳ್ಳೋ ರೀತಿ ತುಂಬಾ ಜನರಿಗೆ ವಿಚಿತ್ರ ಅನ್ನಿಸ್ಬೋದು..
ಊರಿಗ್ ಹೋದಾಗ ನಾನ್ ಫ್ರೆಂಡ್ಸು, ದೋಸ್ತ್ರು ಅಂತ ಗ್ಯಾಂಗ್ ಕಟ್ಕೊಂಡ್ ತಿರ್ಗೋಕ್ಕಿಂತ ಅಪ್ಪನ ಜೊತೆ ಸುತ್ತಾಡೋದೇ ಜಾಸ್ತಿ.. ಏಯ್.. ಹೋಗಾ.. ಬಾರಾ ಅಂತಾನೇ ಅಪ್ಪ - ನಾನು ಮಾತಾಡದು.. ಇವತ್ತಿಗೂ ನನ್ನಪ್ಪ ನಾ ಮಾಡೋ ಖರ್ಚಿನ ಡಿಟೇಲ್ಸ್ ಕೇಳಿಲ್ಲ.. ಹಾಗಂತ ನಮ್ಮನೆಯಲ್ಲಿ ಕೂತು ತಿಂದರೂ ಕರಗದಷ್ಟು ಸಂಪತ್ತೇನು ಇಲ್ಲ.. ಮೊನ್ನೆ ಮೊನ್ನೆಯಷ್ಟೇ ಮಾಲಿನಿ ಅತ್ತೆ ನನ್ ಜೊತೆ ಮಾತಾಡ್ಬೇಕಾದ್ರೆ "ನಿಮ್ಮಪ್ಪ ನಿನ್ನನ್ನ ಸ್ವತಂತ್ರವಾಗಿ ಬೆಳೆಸಿದ ರೀತಿ ತುಂಬಾ ಡಿಫರೆಂಟ್.. ಅದು ಸಾಮಾನ್ಯ ಅಪ್ಪಂದಿರಿಗೆ ಸಾಧ್ಯ ಆಗೋದಿಲ್ಲ" ಅಂದಾಗ ನನ್ನಪ್ಪನ ಬಗ್ಗೆ ಹೆಮ್ಮೆಯಾಗಿದ್ದು ಸುಳ್ಳಲ್ಲ..

ಇನ್ನು ನನ್ನಮ್ಮ.. ಅವಳೊಂದಿಗೆ ನನ್ನ ತಲೆಹರಟೆ, ಮುನಿಸು, ಅನುಮಾನ, ಫಿಲಾಸಫಿ ಎಲ್ಲವನ್ನೂ ಹಂಚಿಕೊಳ್ತೇನೆ.. ನಾ ಜಾಸ್ತಿ ಲವ್ ಲೆಟರ್ಸ್ ಬರೆದಾಗ ಎಲ್ರೂ "ನಿಮ್ಮನೆಯಲ್ಲಿ ಏನೂ ಹೇಳಲ್ವಾ" ಅಂತ ಆಶ್ಚರ್ಯಪಟ್ಟಿದ್ರು.. ಆದ್ರೆ ನಾ ಬರ್ದಿರೋ ಲವ್ ಲೆಟರ್ಸ್ಗಳನ್ನ ಎಲ್ಲರಿಗಿಂತ ಮೊದಲು ತೋರಿಸೋದೇ ಅಮ್ಮನಿಗೆ.. ಫೋನಲ್ಲೇ ಓದಿ ಹೇಳಿ, ಹೇಗಾಗಿದ್ಯೇ ಅಂದಾಗ.. ಅಮ್ಮ ಅವಳಿಗೆ ತೋಚಿದಷ್ಟು ಸಲಹೆಗಳನ್ನ ಕೊಟ್ಟು.. ಕೊನೆಯಲ್ಲಿ ಲವ್ ಲೆಟರ್ಸ್ ಬಿಟ್ಟು ಬೇರೆ ಏನಾರ್ ಬರ್ಯೋ.. ಚೆನ್ನಾಗಿರುತ್ತೆ ಅಂತ ಸಪೋರ್ಟ್ ಮಾಡಿದ್ದಾಳೆ ಹೊರತು.. ಯಾವತ್ತೂ ಕೂಡ "ಹೇಳು, ಯಾಕ್ ಬರ್ದಿದ್ದು? ಯಾರಿಗ್ ಬರ್ದಿದ್ದು?" ಅಂತ ಜಾಸ್ತಿ ಕೆದುಕೋಕೆ ಹೋಗಿಲ್ಲ.. ನನ್ನ ವಯಸ್ಸಿನ ತುಮುಲಗಳನ್ನ ನಾ ನಿರಾತಂಕವಾಗಿ ವ್ಯಕ್ತಪಡಿಸೋಕೆ ಇಂತಹ ವಾತಾವರಣವೇ ಪ್ರಮುಖ ಕಾರಣ..
ಅಪ್ಪ‌ - ಅಮ್ಮನಿಗೆ ನಾ ದಾರಿ ತಪ್ಪೋದಿಲ್ಲ ಅನ್ನೋ ಓವರ್ ಕಾನ್ಫಿಡೆನ್ಸೋ? ಅಥವಾ ದಾರಿ ತಪ್ಪಿದ್ರೆ ವಾಪಾಸ್ ಬರ್ತಾನೆ ಅನ್ನೋ ನಂಬಿಕೆಯೋ? ಗೊತ್ತಿಲ್ಲ.. ಒಟ್ನಲ್ಲಿ ನನ್ನ ಮಾರ್ಕ್ಸ್ ಕಾರ್ಡಿನಿಂದ ಹಿಡಿದು.. ನನ್ನ ತಲೆಹರಟೆ ಕೆಲಸಗಳನ್ನೆಲ್ಲಾ ಸಹಿಸಿಕೊಂಡಿದ್ದಾರೆ.. ಬಹುಶಃ ಅವರ ಇಂತಹ ಸ್ವಭಾವವೇ ನನಗೆ ನನ್ನ ಇತಿಮಿತಿಗಳನ್ನ ಸ್ವತಃ ಅರಿತುಕೊಳ್ಳಲು ಸಹಕರಿಸಿದ್ದು.. ಸಂಪೂರ್ಣ ಸ್ವಾತಂತ್ರ್ಯ ಇದ್ದಾಗ್ಯೂ ಅದನ್ನು ಸ್ವೇಚ್ಛಾಚಾರವನ್ನಾಗಿಸಿಕೊಳ್ಳದಂತೆ ತಡೆದಿರುವುದು..

ಸೋ ನನ್ನ ಅಪ್ಪ - ಅಮ್ಮ ನನ್ನ ಬೆಸ್ಟ್ ಫ್ರೆಂಡ್ಸು.. ಈ ಥರ ಭಾವನೆ ಮೂಡಿಸಿದ್ದಕ್ಕೆ ಥ್ಯಾಂಕ್ಸ್ ಅನ್ಬೇಕಾ? ಅದಕ್ಕೂ ಮಿಗಿಲಾಗಿದ್ ಯಾವ್ದಾರ್ ಇದ್ಯಾ? ಗೊತ್ತಿಲ್ಲ..
ಬಟ್ ಅವರಿಬ್ಬರ ಮೇಲೆ ಸದಾ ಇಷ್ಟೇ ಪ್ರೀತಿ - ಅಭಿಮಾನ ಉಳಿಸಿಕೊಳ್ಳೋ ಶಕ್ತಿ ನನಗೆ ದಕ್ಕಲಿ ❤

ಏನೋ ಬರ್ಯೋಕ್ ಹೊರ್ಟಿದ್ದು, ಏನೋ ಆಯ್ತು.. ಎಡಿಟ್ ಮಾಡೋ ಮನಸಿಲ್ಲ ಸೋ ಸಹಿಸಿಕೊಳ್ಳಿ 😊

Thursday, 27 April 2017

ನಿನ್ನ ಮುಂಗುರುಳ ತಿರುವು ಅಪಘಾತ ವಲಯ..!!

ಕಣ್ಸೆಳೆತದಲ್ಲೆನ್ನೆದೆಗಡಲಲೆಗಳೇರಿಳಿತಗಳನೇರುಪೇರುಗೊಳಿಸಿದವಳೇ..

     ಲಯ ತಪ್ಪಿದ ಹೃದಯ ಬಡಿತದ ಸಮ್ಮುಖದಲ್ಲೇ ನಿನಗಾಗಿ (ಕೊನೆಯದಾಗಿ?) ಈ ಪತ್ರ ಬರೆಯುತ್ತಿದ್ದೇನೆ.. ಒಪ್ಪಿಸಿಕೋ..

ಸಂವತ್ಸರವೊಂದು ಕಳಚಿ ಬಿದ್ದು ಹೊಸದಕ್ಕೆ ದಾರಿ ಮಾಡಿಕೊಟ್ಟಿದೆ ಅಂತೆಯೇ ಸಂಬಂಧವೂ ಕೂಡ.. ಆದರಿಲ್ಲಿ ಹೊಸದರ ನೆರಳು ಇಣುಕುವ ಸಾಧ್ಯತೆ ಕಡಿಮೆ ಇದೆ ಅದಕ್ಕಾಗಿ ಸದ್ಯದ ಪರಿಸ್ಥಿಯ ಮಟ್ಟಿಗೆ ಇದು ಯುಗಾಂತ್ಯ.
ಇಷ್ಟು ವರ್ಷಗಳವರೆಗೆ ಕಣ್ಣಲ್ಲಿ ಕಾಪಿಟ್ಟುಕೊಂಡು ಬಂದಿದ್ದ ನಿನ್ನ ಬಿಂಬ ಕದಡಿ ಹೋಗಿದೆ, ಎದ್ದಿರುವ ಅಲೆಗಳು ಮೌನವಾಗುವ ಸಂಭವವಂತೂ ಕಾಣುತ್ತಿಲ್ಲ, ಬೊಗಸೆಯಲ್ಲಿ‌ ನಿನ್ನ ಬಿಂಬವ ಬಂಧಿಸಿ ಉಳಿಸಿಕೊಳ್ಳೋಣವೆಂದರೆ ನಡುಗುವ ಕೈಗಳು ಅದಕ್ಕೆ ಸಹಕರಿಸುತ್ತಿಲ್ಲ, ಅಸಹಾಯಕ ಅಮಾಯಕ ನಿರ್ದೋಷಿ ನಿರಪರಾಧಿಗೆ ನೀ ಕೊಟ್ಟ ಜೀವಾವಧಿ ಶಿಕ್ಷೆಯನ್ನು ವಜಾಗೊಳಿಸುವ ಮುನ್ಸೂಚನೆಯಂತೂ ಯಾವ ದಿಕ್ಕಿನಲ್ಲೂ ತೋರುತ್ತಿಲ್ಲ, ಕನಸುಗಳನ್ನೆಲ್ಲ ಕಳೆದುಕೊಂಡು ಬದುಕಿನ ನಡುಬೀದಿಯಲಿ ದಿವಾಳಿಯಾಗಿ ಕುಳಿತಿರುವೆ.‌. ಮುಂದೇನು?

ಅದ್ಯಾಕೆ ಅಷ್ಟೊಂದು ಕಟುವಾಗಿ ಹೋದೆ? ಚಿಕ್ಕ ಪುಟ್ಟ ವಿಷಯಗಳಿಗೂ ತಲೆ ಕೆಡಿಸಿಕೊಳ್ಳುತ್ತಿದ್ದವಳು, ನಾ ಪರಿಪರಿಯಾಗಿ ಬೇಡಿಕೊಂಡರೂ ನಿರ್ಲಕ್ಷಿಸಿ ಬಿಟ್ಟೆಯಲ್ಲಾ? ಹೊರಟು ಹೋಗು ಅಂತ ಒಲ್ಲದ ಮನಸ್ಸಿನಿಂದಲೇ ಹೇಳಿ ಕಳಿಸಿಬಿಟ್ಟೆಯಲ್ಲಾ? ನಿನ್ನಿಷ್ಟವನ್ನೆಲ್ಲಾ ಒತ್ತೆಯಿಟ್ಟು ಏನನ್ನ ಸಾಧಿಸೋಕೆ ಹೊರಟಿದ್ದಿ? ನನ್ನ ನಿಷ್ಕಲ್ಮಶ ಭಾವವೀಗ ಜೀವವಿಲ್ಲದೆ ತಣ್ಣಗೆ ಬಿದ್ದಿದೆ.

ನೀ ಹೋಗಿದ್ದೋ? ನಾನೇ ಕಳಿಸಿದ್ದೋ? ಗೊಂದಲವಿನ್ನೂ ಸತ್ತಿಲ್ಲ. ನೀ ಉಳಿಯುತ್ತೇನೆಂದರೂ ಉಳಿಸಿಕೊಳ್ಳುವ ಶಕ್ತಿ ನನಗಿರಲಿಲ್ಲವಾ? ಅಥವಾ ನೀ ಬಯಸಿದಂತೆ ನನಗಿರಲು ಸಾಧ್ಯವಾಗುವುದಿಲ್ಲವೆಂಬುದೇ ಎಲ್ಲದಕ್ಕೂ ಮೂಲವಾ? ಸಂಬಂಧಕ್ಕೆ ನಾಂದಿ ಹಾಡುವ ಮುನ್ನ ಮೂಡುತ್ತಿದ್ದ ಹತ್ತಾರು ಕಾರಣಗಳು, ನಿಷ್ಕಾರಣವಾಗಿ ಚೂರಾಗಿವೆ. ನನ್ನ ಜೀವನದಲ್ಲಿ ರಕ್ತಸಂಬಂಧಗಳಾಚೆಗೆ ಬಹುವಾಗಿ ಪ್ರೀತಿಸಿದ್ದು ನಿನ್ನನ್ನು ಮಾತ್ರ.. ಅಂತಹ ನೀನೇ ಕಾರಣ ನೀಡದೆ ಹೊರಟುಬಿಟ್ಟರೆ ಏನೆಂದುಕೊಳ್ಳಲಿ? ಸಂಪೂರ್ಣ ಕಾರಣ ತಿಳಿದುಕೊಳ್ಳಲೂ ಯೋಗ್ಯತೆ ಇಲ್ಲದವನಾಗಿ ಹೋದೆನಾ?

ಜೊತೆಗಿದ್ದ ಜೀವವೊಂದು ಕನಸಾಗಿ ಪರಿವರ್ತನೆ ಹೊಂದುವ ವೇಳೆಯಲ್ಲಿ ಅಸಹಾಯಕನಾಗಿ ನಿಂತು ನೋಡುವಾಗ ಎದೆಯಲ್ಲಾಗೋ ಸಂಕಟವಿದೆಯಲ್ಲಾ ಅದಕ್ಕೆ ಸಾಟಿಯಿಲ್ಲ.
ತುಟಿಯಂಚಲ್ಲಿ ಮೂಡುವ ಕಿರುನಗೆಗೆ ಇನ್ನೆಂದೂ ನೀ ಕಾರಣವಾಗುವುದಿಲ್ಲ ಎಂದು ನೆನೆದರೇ ಮನಸ್ಸು ಬಿಕ್ಕಳಿಸುತ್ತದೆ.

ನಿನ್ನ ಮುಂಗುರುಳ ತಿರುವಲ್ಲಿ "ಅಪಘಾತ ವಲಯ.. ಎಚ್ಚರಿಕೆ!!" ಎಂಬ ಸೂಚನಾ ಫಲಕ ಹಾಕಿಸಿಬಿಡು, ಇನ್ಯಾವುದೋ ಬಡಪಾಯಿಯ ಕನಸು ನುಚ್ಚುನೂರಾಗುವ ಮುನ್ನ.
ನನಗಾದಂಥ ಅನುಭವ ನಿನಗಾಗದಿರಲಿ, ನಿನ್ನಿಷ್ಟಗಳೆಲ್ಲಾ ನಿನಗೆ ದಕ್ಕಲಿ, ನಿನ್ನ ಕನಸುಗಳೆಲ್ಲಾ ಈಡೇರಲಿ, ನಿನ್ನ ಜೀವನ ತುಂಬಾ ಎತ್ತರಕ್ಕೇರಿ ಉಜ್ವಲವಾಗಿ ಬೆಳಗಲಿ ಆದರೆ ಆ ಬೆಳಕು ಅಪ್ಪಿಪತಪ್ಪಿಯೂ ನನ್ನ ಕಣ್ಣಿಗೆ ಬೀಳದಿರಲಿ..
ಗುಂಡಗಿರೋ ಭೂಮಿಯಲ್ಲಿ ಎಷ್ಟೇ ನಡೆದರೂ ನಾವಿಬ್ಬರೂ ಮತ್ತೆ ಸಂಧಿಸದಿರಲಿ.. ಮುಖ ನೋಡಿಯೂ ನೋಡದಂತೆ ನಟಿಸಿ ನೋವುಣ್ಣುವ ದೌರ್ಭಾಗ್ಯ ನನಗೆ ಬರದಿರಲಿ, ನಿನ್ನ ದುಪ್ಪಟ್ಟಾದಿಂದ ಹೊರಬೀಳುವ ಘಮ ನನ್ನ ಮೂಗಿಗೆ ಬಡಿಯದಿರಲಿ.. ಹೊರಟುಹೋಗುತ್ತಿರುವ ಶುಭ ಸಂದರ್ಭದಲ್ಲಿ ನಿನ್ನ ಹೆಜ್ಜೆ ಗುರುತುಗಳನ್ನೂ ಅಳಿಸಿ ಹೊರಟು ಬಿಡು, ಇಲ್ಲವಾದಲ್ಲಿ ಅದರೊಳಗೆ ಕಾಲಿಟ್ಟು ನಾ ಎಡವುವ ಸಾಧ್ಯತೆ ಇದೆ.

ಕೊನೆಯದಾಗಿ.. ನಿನ್ನ ಕಾಲಿಗೆ ಗೆಜ್ಜೆ ಕಟ್ಟುವ ಆಸೆಯೊಂದು ಹಾಗೇ ಉಳಿದುಹೋಗಿದೆ ಮರೆಯೋಕಂತೂ ಆಗೋದಿಲ್ಲ ಕಡೇಪಕ್ಷ ಮುಂದೆ ಯಾವುದಾದರೂ ಗೆಜ್ಜೆ ಸದ್ದು ಕೇಳಿದಾಗ ಬಂದು ಕಾಡದಿರು..

ವಿಶ್ ಮಿ ಗುಡ್ ಲಕ್

ಇಂತಿ..
ಕನಸಿನ ಗೋರಿಯ ಕಾವಲುಗಾರ
ಸ್ಕಂದ ಆಗುಂಬೆ

ಈ ಲೇಖನ ಕನ್ನಡಪ್ರಭ ದಿನಪತ್ರಿಕೆಯ ಕ್ಯಾಂಪಸ್ ಪುಟದಲ್ಲಿ ಪ್ರಕಟವಾಗಿದೆ...

                       (ಮೂಲಪ್ರತಿ)

"ಕಂದ" ಪದ್ಯ

ಎಷ್ಟು ಚಂದ ನಮ್ಮ ಕಂದ ಬಾಯಿ ತೆರೆದು ನಕ್ಕರೆ ಪುಟ್ಟ ಹಲ್ಲು, ಹಾಲುಗಲ್ಲ ನಗುವೆ ಸಿಹಿಯ ಸಕ್ಕರೆ ನಮ್ಮ ಕಂದ ಇನ್ನೂ ಚಂದ ಸಿಟ್ಟು ಮಾಡಿಕೊಂಡರೆ ಕೆಂಪು ಮೂಗು,...