Thursday, 5 October 2017

ಬರಗಾಲ



ಕೆಂಡ ಕಾರುವ ಭಾನು
ಸುಟ್ಟು ಬಿದ್ದ ಮೇಘ
ಭುವಿಯೀಗ ಒಣಗಿದ ಗರಿಗರಿ ಬಟ್ಟೆ
ಬಡವಿ ಭೂಮಾತೆ
ಬಸವಳಿದು ಕುಳಿತಿಹಳು
ಮೂರು ಮಾಸದಿಂದ ಉಪವಾಸವಂತೆ

ಹೊಳೆದಂಡೆ ಗರಿಕೆಯ ಬದುಕು ಬಡವಾಗಿರಲು
ಚಿಗರೆ ಮರಿಗೆಲ್ಲಿ ಹೊತ್ತು ಊಟ?
ಎದೆ ಕವಚ ಹೊರಗಿಣುಕಿ, ಭುವಿ ಕದವ ಬಡಿದಿರಲು
ರಕ್ತನಾಳಕ್ಕೀಗ ಸಾವಿನಾಟ

ಬತ್ತಿದ ಹೊಲದಲ್ಲಿ ಬಿತ್ತಿದ ಬೀಜವು
ನರಳಾಟದ ಹಾಡು ಹಾಡುತ್ತಿತ್ತು
ಮೊಳಕೆಯ ಮೂಲವೇ ಮೌನವಾಗಿರಲು
ಶ್ವಾಸಕೋಶದ ಒಳಗೆ ಶೋಕಗೀತೆ

ಹತ್ತು ಎಕರೆಯ ಒಡೆಯ ಅತ್ತು ಸುಸ್ತಾಗಿರಲು
ಮೂರು ಗುಂಟೆಯ ರೈತ ಸತ್ತು ಹೋದ
ಹಟ್ಟಿಯಲಿ ಕಟ್ಟಿದ ಬಾಚು ಕೋಡಿನ ಎತ್ತು
ಹಿಡಿ ಹುಲ್ಲಿಗಾಗಿ ಕೊರಗುತಿತ್ತು

ಕೆರೆ ತಳದಿ ಕಪ್ಪೆಮರಿ ಅಂಗಾತ ಬಿದ್ದಿರಲು
ಸರಸರನೆ ಓಡಿತ್ತು ಉರಗರಾಜ
ಸರಿಸೃಪದ ಪರದಾಟ ಕಣ್ಣಿಗೆ ಗೋಚರಿಸೆ
ಒಣಕು ಕೊಕ್ಕರೆಗೀಗ ಹಬ್ಬದೂಟ

- ಅನಾಸ್ಕ

No comments:

Post a Comment

"ಕಂದ" ಪದ್ಯ

ಎಷ್ಟು ಚಂದ ನಮ್ಮ ಕಂದ ಬಾಯಿ ತೆರೆದು ನಕ್ಕರೆ ಪುಟ್ಟ ಹಲ್ಲು, ಹಾಲುಗಲ್ಲ ನಗುವೆ ಸಿಹಿಯ ಸಕ್ಕರೆ ನಮ್ಮ ಕಂದ ಇನ್ನೂ ಚಂದ ಸಿಟ್ಟು ಮಾಡಿಕೊಂಡರೆ ಕೆಂಪು ಮೂಗು,...