Sunday, 8 April 2018

ಹುಲಿಮಾರ


             "ದ್ಯಾವನಾಯ್ಕನ್ನ ಹುಲೀ ಹಿಡೀತಂತೆ, ನಿನ್ನೆ ರಾತ್ರಿ ಶಿಕಾರಿಗ್ ಹೋದೋನು ಬೆಳ್ಗಾದ್ರೂ ಬರ್ದೇ ಇರೋದನ್ ನೋಡಿ ಅವ್ನ್ ಮಗ ಮಾರ ಹುಡ್ಕಂಡ್ ಹೋದಾಗ ಆ ಹುಲಿಯಮ್ಮನ್ ದೇವಸ್ಥಾನದ್ ಎದ್ರಿರೋ ಹೆಬ್ಬಲಸಿನ ಮರದ್ ಕೆಳ್ಗೆ ಬಿದ್ದಿದ್ನಂತೆ, ಮಗ ಹುಟ್ಟಿದಾಗ ಹರಕೆ ತೀರ್ಸೋಕ್ ಹೋದೋನು, ಆಮೇಲ್ ಒಂದ್ ಕೋಳಿ ಬಲಿ ಕೂಡ ಕೊಟ್ಟಿಲ್ಲ, ದೇವ್ರ್ ಸುಮ್ನೆ ಬಿಡ್ತದಾ? ಅವ್ನನ್ನೇ ಬಲಿ ತಗಂಡಿದೆ ನೋಡಿ" ಏದುಸಿರು ಬಿಡುತ್ತಾ ಯಜಮಾನ ಸೀನಯ್ಯಂಗೆ ವರದಿ ಒಪ್ಪಿಸುತ್ತಿದ್ದ ಶಂಕ್ರ. ದ್ಯಾವನಾಯ್ಕ ಸೀನಯ್ಯನ ಮನೆಮಗನಂತೆ ಇದ್ದವನು, ಸುಮಾರು ಐವತ್ತರ ಆಸುಪಾಸಿನವನು. ಸಣ್ಣ ಹುಡುಗನಿರಬೇಕಾದರೆ ಮಂಗನ ಕಾಯಿಲೆ ಬಂದು ಅವನ ಅಪ್ಪ, ಅಮ್ಮ ಸತ್ತ ಲಾಗಾಯ್ತು ಇವನನ್ನು ಸಾಕಿ, ಬೆಳೆಸಿ, ಮದುವೆ ಮಾಡಿಸುವ ತನಕವೂ ಮನೆಯಲ್ಲೇ ಇಟ್ಟುಕೊಂಡಿದ್ದರು ಸೀನಯ್ಯ. ಅವನದ್ದೂ ಒಂದು ಸಂಸಾರವೆಂದು ಶುರುವಾದ ಮೇಲೆ ತಮ್ಮ ಮನೆ ಬಳಿಯೇ ಒಂದು ಜಾಗ ಗೊತ್ತು ಮಾಡಿ ಚಿಕ್ಕ ಸೂರನ್ನೂ ಕಟ್ಟಿಕೊಟ್ಟಿದ್ದರು. ಹೀಗೆ ಮನೆ ಮಗನಂತೆ ಬೆಳೆದ ದ್ಯಾವನಾಯ್ಕ ಸತ್ತನೆಂದಾಗ ಸೀನಯ್ಯನಿಗೆ ಕಣ್ಣು ಕತ್ತಲೆಗಟ್ಟಿದಂತಾಗಿತ್ತು. ಅಮ್ಮೋರೇ.. ಸೀನಯ್ಯಂಗ್ ತಲೆ ಸುತ್ ಬಂದಿದೆ ನೀರ್ ತಗಂಬನ್ನಿ ಬೇಗ ಎಂದು ಶಂಕ್ರ ಕೂಗಿದ ತಕ್ಷಣ ಒಳಗಿನಿಂದ ಓಡಿಬಂದ ಮೂಕಮ್ಮ ಗಂಡನಿಗೆ ನೀರು ಕುಡಿಸಿ, ಎದೆಯುಜ್ಜುತ್ತಾ ಶಿವ್ನೇ ಏನಾಯ್ತಪ್ಪಾ ಎಂದು ಗಲಿಬಿಲಿಗೊಳ್ಳಲು, ಶಂಕ್ರ ಸಾವಧಾನವಾಗಿ ನಡೆದಿದ್ದನ್ನೆಲ್ಲಾ ವಿವರಿಸಿದ್ದ. ವಿಷಯ ಕೇಳಿ ದಿಗ್ಭ್ರಾಂತಳಾದ ಮೂಕಮ್ಮ "ದ್ಯಾವ ಹೋದ್ನಾ.." ಎಂಬ ಉದ್ಘಾರ ತೆಗೆದು, ನಿಧಾನಕ್ಕೆ ಕಣ್ಬಿಡುತ್ತಿದ್ದ ಸೀನಯ್ಯನೆಡೆಗೆ ದೈನ್ಯತೆಯಿಂದ ನೋಡುತ್ತಿದ್ದರು.

      "ನಮ್ ವಂಶದ ಹುಲಿ ಇವ್ನು, ದೇವ್ರ್ ಕೊಟ್ಟ ಹುಲಿ, ಇವ್ನಿಗ್ ಹುಲಿಮಾರ ಅಂತಾನೇ ಹೆಸ್ರಿಡ್ತೀನಿ.. ಹುಲಿಮಾರ.. ಹುಲಿಮಾರ.. ಹುಲಿಮಾರ.." ಮಗುವಿನ ಕಿವಿಯಲ್ಲಿ ಮೂರುಬಾರಿ ಹೆಸರು ಕೂಗಿದ ದ್ಯಾವನಾಯ್ಕನ ಮುಖ ಹೊಳೆಯುತ್ತಿತ್ತು, ಹೆಂಡತಿ ನಾಗಿ ಮಾತ್ರ "ಹುಲಿಮಾರ ಅಂತೆ ಹುಲಿಮಾರ ಅದೇನ್ ಹೆಸ್ರೋ? ಮಗೂಗೆ ಒಂದ್ ಒಳ್ಳೇ ಹೆಸ್ರಿಡ್ಬಾರ್ದಾ" ಎಂದು ಸಿಡುಕುತ್ತಿದ್ದರೆ, ಅದ್ಯಾವುದರ ಪರಿವೆಯೇ ಇಲ್ಲದ ದ್ಯಾವನಾಯ್ಕ "ಅಲೆಲೆಲೆ.. ಹುಲಿಮಾರ.. ಬಂಗಾರ.. ನನ್ನೂರ ಸರದಾರ.." ಅಂತ ಮಗುವನ್ನು ಎತ್ತಿಕೊಂಡು ಹಾಡುತ್ತಿದ್ದ. ಅವನ ಖುಷಿಯನ್ನು ನೋಡಿದ ಸೀನಯ್ಯ ಮತ್ತು ಮೂಕಮ್ಮ ಬಳಿ ಬಂದು ಮಗುವಿನ ಕೈಯಲ್ಲಿ ನೂರು ರುಪಾಯಿ ಇಟ್ಟು "ಊರಿಗ್ ಒಳ್ಳೇ ಹೆಸ್ರು ತಗೊಂಡ್ ಬಾ, ಹುಲಿಯಂತೆ ಧೈರ್ಯಶಾಲಿಯಾಗು" ಎಂದು ಮಗುವಿನ ತಲೆ ನೇವರಿಸಿ.. ನಾಗಿಯನ್ನು ಕರೆದು "ಹೆಸರು ಯಾವ್ದಾದ್ರೇನಂತೆ ಮಗುವಿಗೆ ಸಂಸ್ಕಾರ ಮುಖ್ಯ, ಒಳ್ಳೇ ರೀತಿಲಿ ಬೆಳ್ಸು ಮಗನ್ನ" ಅಂತ ಹೇಳಿ ಹಾರೈಸಿ ಹೋಗಿದ್ದರು.
   
         ಮದುವೆಯಾಗಿ ಹನ್ನೆರಡು ವರ್ಷಗಳಾದರೂ ದ್ಯಾವನಾಯ್ಕನ ಮನೆಯಲ್ಲಿ ಕೂಸು ಅಳುವ ಸದ್ದು ಕೇಳಿರದ ಕಾರಣ ಬುಡುಬುಡುಕೆಯವರಿಂದ ಹಿಡಿದು ಮಣಿಪಾಲ ಆಸ್ಪತ್ರೆಯ ಮೆಟ್ಟಿಲನ್ನು ಹತ್ತಿಳಿಯುವ ತನಕ ಎಷ್ಟೇ ದುಡ್ಡು ಸುರಿದರೂ ಪರಿಹಾರ ಸಿಗದೆ, ಊರವರೆಲ್ಲಾ ನಾಗಿ ಬಂಜೆಯಂತೆ ಎಂದು ಮಾತನಾಡಿಕೊಳ್ಳಲು ಶುರುಮಾಡಿದಾಗ ದ್ಯಾವನಾಯ್ಕ ಮಾನಸಿಕವಾಗಿ ಕುಗ್ಗಿ ಹೋಗಿದ್ದ. ಇವನ ಅವಸ್ಥೆಯನ್ನು ನೋಡಲಾಗದ ಸೀನಯ್ಯ ಅವನನ್ನು ತಾವು ನಂಬಿದ ಘಟ್ಟದ ಕೆಳಗಿನ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಎಲ್ಲಾ ಕೇಳಿ ಮಾಡಿಸುವಷ್ಟರಲ್ಲಿ ದ್ಯಾವನಾಯ್ಕನ ತಂದೆ ತೀರಿದ ನಂತರ ಅವರ ಕುಲದೇವರಿಗೆ ಈತ ಸರಿಯಾಗಿ ನಡೆದುಕೊಳ್ಳುತ್ತಿಲ್ಲವೆಂದೂ, ಅದರ ಸಿಟ್ಟು ಕಳೆಯುವ ತನಕ ಸಂತಾನ ಭಾಗ್ಯ ಇಲ್ಲವೆಂದೂ ಹೇಳಿ ಕಳುಹಿಸಿದ್ದರು. ಊರಿಗೆ ಬಂದವನೇ ನಡೆದದ್ದನ್ನೆಲ್ಲಾ ನಾಗಿಗೆ ತಿಳಿಸಿ "ಇನ್ಯಾರೂ ನಿನ್ನ ಬಂಜೆ ಅಂತ ಕರ್ಯಂಗಿಲ್ಲ ನೋಡು" ಎಂದು ಹಣೆಗೆ ಮುತ್ತಿಟ್ಟು, ಶಾಸ್ತ್ರಿಗಳ ಅಣತಿಯಂತೆ ಹರಕೆ ತೀರಿಸಲು, ಕಾಕತಾಳೀಯವೆಂಬಂತೆ ಅದಾಗಿ ಎಂಟನೇ ಹುಣ್ಣಿಮೆಗೆ ಮುದ್ದಾದ ಗಂಡು ಮಗು ಜನಿಸಿತ್ತು. ಕುಲದೇವತೆ ಹುಲಿಯಮ್ಮನಿಗೆ ಅಡ್ಡಡ್ಡ ಬಿದ್ದು ನಮಸ್ಕರಿಸಿದ ಮಾರ, ದೇವರ ಸನ್ನಿಧಿಯಲ್ಲೇ ನಾಮಕಾರಣ ಶಾಸ್ತ್ರ ನಡೆಸಲು ನಿರ್ಧರಿಸಿ ಮಗುವಿಗೆ ಹುಲಿಮಾರ ಎಂದು ಹೆಸರಿಟ್ಟಿದ್ದ.
     
        ಅಂಬೆಗಾಲಿಡಲು ಶುರುಮಾಡಿದ ಮಗು ಹುಲಿಮಾರ ಎಂದು ರಾಗವಾಗಿ ಕರೆದೊಡನೆ ಕಿಲಕಿಲನೆ ನಗುತ್ತಿದ್ದರೆ ದ್ಯಾವನಿಗೆ ಪ್ರಪಂಚವನ್ನೇ ಗೆದ್ದಷ್ಟು ಖುಷಿ, ನಾಗಿಗೆ ಮಾತ್ರ ಸಂಕಟ. ಹುಲಿಯಮ್ಮನ ಆಶೀರ್ವಾದಿಂದ ಮಗು ಹುಟ್ಟಿತೆಂದು ದ್ಯಾವ ನಂಬಿದ್ದರೂ, ಆ ಜೀವವನ್ನು ಹೆತ್ತ ನಾಗಿಯ ನಂಬಿಕೆ ಬೇರೆಯೇ ಆಗಿತ್ತು. ಸೀನಯ್ಯ ಮತ್ತು ದ್ಯಾವ ಘಟ್ಟದ ಕೆಳಗೆ ಹೋದ ರಾತ್ರಿಯಂದು ದ್ಯಾವನನ್ನು ಹುಡುಕಿಕೊಂಡು ಬಂದಿದ್ದ ಶಂಕ್ರನ ಬಳಿ ನಾಗಿ ತನ್ನ ಸಂಕಟವನ್ನೆಲ್ಲಾ ಹೇಳಿಕೊಂಡು ಅತ್ತಿದ್ದಳು. ಅಕ್ಕಪಕ್ಕದಲ್ಲಿ ಯಾರೂ ಇಲ್ಲದ್ದನ್ನು ಖಾತ್ರಿ ಪಡಿಸಿಕೊಂಡ ಶಂಕ್ರ ನಾಗಿಯ ಸಮ್ಮತಿಯೊಂದಿಗೆ ಒಂದು ಹೆಜ್ಜೆ ಮುಂದೆ ಇಟ್ಟಿದ್ದ. "ಬಂಜೆ ನೀನಲ್ಲ ಕಣೇ ನಾಗಿ, ನಿನ್ನ ಗಂಡ.. ಗಂಡು ಮಗು ಹುಟ್ಟಿದ್ರೆ ನನ್ ಹೆಸ್ರನ್ನೇ ಇಡು ಆಯ್ತಾ" ಎಂಬ ಶಂಕ್ರನ ಮಾತು ಕಿವಿಯಲ್ಲಿ ಪ್ರತಿಧ್ವನಿಸುತ್ತಿರುವಾಗ, ಮಗು ದೇವರು ಕೊಟ್ಟ ಫಲವೆಂದು ನಂಬುವುದಾದರೂ ಹೇಗೆ? ಅದೇ ಕಾರಣಕ್ಕೆ ಮಗನಿಗೆ ಹುಲಿಮಾರ ಎಂದು ಹೆಸರಿಟ್ಟಾಗಲೂ ಅಸಮಾಧಾನ ವ್ಯಕ್ತಪಡಿಸಿದ್ದಳು.
ಮತ್ತೆ ಮತ್ತೆ ದ್ಯಾವ ಹುಲಿಮಾರ ಎಂದು ರಾಗ ಎಳೆಯುತ್ತಿರಲು, "ಅಪ್ಪಿಮರೀ.. ಬಾರಪ್ಪಿ, ಹುಲಿಮಾರ ಇಶ್ಶೀ.." ಎಂದು ಮಗುವನ್ನೆತ್ತಿಕೊಂಡು ಒಳ ನಡೆಯುತ್ತಿದ್ದರೆ, ಇವನು "ಅದ್ಯಾಕ್ ಹಂಗಾಡ್ತೀಯಾ? ಹುಲಿಯಮ್ಮ ಕಣ್ ಬಿಡ್ದೇ ಇದ್ರೆ ಊರವ್ರ್ ಬಾಯಲ್ಲಿ ಬಂಜೆ ಅಂತ ಕರ್ಸ್ಕೊಂಡೇ ಸಾಯ್ಬೇಕಿತ್ತು, ಹುಲಿಮಾರ ಇಶ್ಶೀ ಅಂತೆ, ತಲೆ ಕೆಟ್ಟವ್ಳೇ" ಎಂದು ನೆಲಕ್ಕುಗಿದು ಹೊರ ನಡೆಯುತ್ತಿದ್ದ. ದ್ಯಾವ ಆಚೆ ಹೋದೊಡನೆ "ಹುಲಿಯಮ್ಮ ಕಣ್ ಬಿಟ್ಟಿದ್ದಂತೆ..." ಎಂದು ನಕ್ಕು  ಶಂಕ್ರಾ.. ನನ್ ಕಂದಾ ಎಂದು ಕಿವಿಯಲ್ಲಿ ಉಸುರಿ ಮಗುವನ್ನು ಎದೆಗವುಚಿಕೊಂಡುಬಿಡುತ್ತಿದ್ದಳು.


     
         ದ್ಯಾವನಿಗೆ ಶಿಕಾರಿ ಚಟ, ಸಂಜೆಯಾಗುತ್ತಿದ್ದಂತೆ ತಲೆಗೆ ಬ್ಯಾಟರಿ ಸಿಕ್ಕಿಸಿಕೊಂಡು ಅಪ್ಪನಿಂದ ಬಳುವಳಿಯಾಗಿ ಬಂದಿದ್ದ ಕಳ್ಳಕೋವಿ ಹಿಡಿದು ಕಾಡಿಗೆ ನುಗ್ಗುತ್ತಿದ್ದ. ಮಲೆನಾಡಿನ ದಟ್ಟಡವಿಯಾದ್ದರಿಂದ ಪ್ರಾಣಿಗಳಿಗೇನು ಕೊರತೆ ಇರಲಿಲ್ಲ, ಬ್ಯಾಟರಿ ಬೆಳಕಿಗೆ ಕಣ್ಣುಕೊಟ್ಟು ನಿಲ್ಲುತ್ತಿದ್ದ ಕಾನುಕುರಿ, ಹಂದಿಗಳನ್ನು ಲೆಕ್ಕವಿಲ್ಲದಷ್ಟು ಹೊಡೆದುರುಳಿಸಿದ್ದ. ಕೆಂಜಳಿಲು, ಬರ್ಕ, ಮೊಲ ಹೀಗೆ ಚಿಕ್ಕಪುಟ್ಟ ಪ್ರಾಣಿಗಳನ್ನೂ ಬಿಡುತ್ತಿರಲಿಲ್ಲ. ಅದೊಂದು ದಿನ ಕಾಡಿಗೆ ನುಗ್ಗಿದಾಗ ಅನಿರೀಕ್ಷಿತವಾಗಿ ಕಾಡುಕೋಣದ ಗುಂಪೊಂದು ಇವನಿಗೆ ಎದುರಾಗಿತ್ತು, ಬೇಕಾದಷ್ಟು ಸಲ ಕಾಡುಕೋಣಗಳನ್ನು ನೋಡಿದ್ದನಾದರೂ ಅಷ್ಟು ಸಮೀಪದಿಂದ ಯಾವತ್ತೂ ಮುಖಾಮುಖಿಯಾಗಿರಲಿಲ್ಲ. ದ್ಯಾವ ನಿಧಾನವಾಗಿ ಒಂದೆರೆಡು ಹೆಜ್ಜೆ ಹಿಂದಿಟ್ಟಿದ್ದನಷ್ಟೇ ಬ್ಯಾಟರಿಯ ಬೆಳಕು ಪುಟ್ಟ ಕರುವೊಂದರ ಮೇಲೆ ಬಿದ್ದು ಈತನ ಜಂಘಾಬಲವೇ ನಡುಗಿಹೋಯ್ತು. ಕರುವಿದ್ದಾಗ ರಕ್ಷಣೆಗೋಸ್ಕರ ಎಂತಹ ರಾಕ್ಷಸರೂಪವನ್ನೂ ತಾಳುವ ಪ್ರಾಣಿಗಳವು. ಈತ ಹಿಂದೆ ಮುಂದೆ ನೋಡುವಷ್ಟರಲ್ಲಿ ಕೋಣವೊಂದು ನುಗ್ಗಲು, ಆತ್ಮರಕ್ಷಣೆಗಾಗಿ ಬಂದೂಕಿನ ಟ್ರಿಗರ್ ಎಳೆದ. ಸಿಡಿದ ಗುಂಡು ಭಯಂಕರ ಶಬ್ಧದೊಂದಿಗೆ ಕೋಣದ ಬಲ ತೊಡೆಯ ಸೀಳಿ, ಗುಂಪು ದಿಕ್ಕಾಪಾಲಾಗಿತ್ತು. ಇತ್ತ ಗುಂಡು ಹೊಕ್ಕಿದ್ದರಿಂದ ಕೋಣವೂ ಅಡ್ಡಾದಿಡ್ಡಿ ಓಡಿ, ದ್ಯಾವ ಹಿಂತಿರುಗಿ ನೋಡದೆ ಮನೆ ತಲುಪಿದ್ದ. ಒಮ್ಮೆ ಪೆಟ್ಟಾದರೆ ಅಂತಹ ಕೋಣಗಳು ವ್ಯಾಘ್ರವಾಗುತ್ತವೆ, ಸುಖಾಸುಮ್ಮನೆ ಅಟ್ಟಾಡಿಸುತ್ತವೆ ಇಲ್ಲೂ ಹಾಗೇ ಆಯಿತು. ಅವತ್ತೊಂದು ದಿನ ಕಾಡು ಸುತ್ತಲು ಬಂದ ಫಾರೆಸ್ಟ್ ಡಿಪಾರ್ಟ್ಮೆಂಟಿನ ವಾಚರ್ ತಿಮ್ಮ ಅದೇ ಕಾಡುಕೋಣದ ಕಣ್ಣಿಗೆ ಬಿದ್ದಿದ್ದ, ಕಾಡಿನ ಮರ ಮಟ್ಟುಗಳ ಸಂದಿಯಲ್ಲೆಲ್ಲಾ ಓಡಿ ಮೈ ತರಚಿಸಿಕೊಂಡು ಕೊನೆಗೆ ಯಾವುದೋ ಮರ ಹತ್ತಿದರೂ ಅರ್ಧ ಮುಕ್ಕಾಲು ಗಂಟೆ ಕಾಲು ಕೆದರುತ್ತಾ ಅಲ್ಲೇ ನಿಂತಿದ್ದ ಕಾಡುಕೋಣ ಅವನ ಬೆವರಿಳಿಸಿತ್ತು. ಅದರ ತೊಡೆಯಲ್ಲಾದ ವ್ರಣ ತಿಮ್ಮನ ಕಣ್ಣಿಗೆ ಬಿದ್ದು ಇದು ದ್ಯಾವನ ಕೆಲಸವೇ ಸೈ ಎಂದರಿತು ಸೀದಾ ದ್ಯಾವನಾಯ್ಕನ ಮನೆಗೆ ಬಂದು ಬಾಯಿಗೆ ಬಂದಂತೆ ಬೈದು, ಡಿಪಾರ್ಟ್‍ಮೆಂಟಿಗೆ ಹೇಳಿ ಜೈಲಿಗೆ ಕಳುಹಿಸುತ್ತೇನೆಂದು ಬೆದರಿಸಿ ಐನೂರು ರುಪಾಯಿ ಕಿತ್ತಿದ್ದ. ಇದಾಗಿ ಸುಮಾರು ದಿನಗಳ ತನಕ ದ್ಯಾವ ಕಾಡಿಗೆ ನುಗ್ಗಿರಲಿಲ್ಲ.
       
       ಕೋಗಳ್ಳಿಯ ಕಾಡಿನಲ್ಲಿ ಆಗಾಗ ಹುಲಿ ಕೂಗುವ ಸದ್ದು ಕೇಳುವುದು ಮಾಮೂಲಿಯಾಗಿತ್ತು, ರಾತ್ರಿ ಹೊತ್ತು ಊರ ಗಡಿಯಲ್ಲೇ ಕೂಗು ಕೇಳುತ್ತಿದ್ದರೂ ಯಾರಿಗೂ ಉಪಟಳ ಮಾಡುತ್ತಿರಲಿಲ್ಲವಾದ್ದರಿಂದ ಅದು ಹುಲಿಯಮ್ಮನ ಅವತಾರದಲ್ಲಿದ್ದ ದೇವರ ಹುಲಿಯೆಂದು ಯಾರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಹೀಗಿರಬೇಕಾದರೆ ಇದ್ದಕ್ಕಿದ್ದಂತೆ ಊರ ದನಗಳೆಲ್ಲಾ ಒಂದೊಂದೇ ನಾಪತ್ತೆಯಾಗಲು ಶುರುವಾಗಿ ಕೊನೆಗೆ ಕೊಟ್ಟಿಗೆಗೆ ನುಗ್ಗಿ ಕರುಗಳನ್ನು ಹೊರುವಷ್ಟರ ಮಟ್ಟಿಗೆ ಹುಲಿಕಾಟ ಶುರುವಾಯ್ತು. ಇದರ ನಡುವೆ ಎರಡು ದಿಕ್ಕಿನಲ್ಲಿ ಹುಲಿ ಕೂಗು ಕೇಳುತ್ತಿದ್ದರಿಂದ ದನಗಳನ್ನು ಹೊರುತ್ತಿರುವುದು ದೇವರ ಹುಲಿ ಕೆಲಸವಲ್ಲವೆಂದೂ ಇದು ಬೇರೆಡೆಯಿಂದ ಬಂದಿರುವ ರಕ್ಕಸನೆಂದೂ ಊರ ಜನರು ತೀರ್ಮಾನಕ್ಕೆ ಬಂದು, ದ್ಯಾವನಾಯ್ಕನ ಬಳಿ ಹೇಗಾದರೂ ಮಾಡಿ ಈ ಉಪಟಳವನ್ನು ನಿಲ್ಲಿಸಬೇಕೆಂದು ಕೋರಿದರು. ಈಗಾಗಲೇ ವಾಚರ್ ತಿಮ್ಮ ಎಚ್ಚರಿಕೆ ಕೊಟ್ಟಿದ್ದರಿಂದ ಹ್ಞೂಂಗುಟ್ಟಲು ಹಿಂಜರಿದನಾದರೂ ಊರವರ ಮಾತಿಗೆ ಇಲ್ಲವೆನ್ನಲಾಗದೆ ಮುಲಾಜಿಗೆ ಒಪ್ಪಿಕೊಂಡ. ಅದಾಗಿ ಮಾರನೇ ದಿನಕ್ಕೇ ಹುಲಿ ಕೂಗುವ ಸದ್ದು ಕೇಳಿ ಮಗನೊಡನೆ ಕಾಡು ಹೊಕ್ಕು ಹುಡುಕಾಡಿ, ಹತ್ತಿರದಲ್ಲೇ ಕೂಗು ಕೇಳಿದಾಗ ಎದೆಯಲ್ಲಿ ನಡುಕ ಹುಟ್ಟಿ ಮಗ ಜೊತೆಗಿದ್ದಾನೆಂಬ ಧೈರ್ಯದಲ್ಲೇ ಬ್ಯಾಟರಿ ಹಾಯಿಸಿದ್ದ, ಬ್ಯಾಟರಿ ಬೆಳಕಿಗೆ ಕಣ್ಣುಕೊಟ್ಟು ನಿಂತ ಹುಲಿಯನ್ನು ಒಮ್ಮೆ ದಿಟ್ಟಿಸಲು, ಅಷ್ಟೇನು ಬಲಾಢ್ಯವಲ್ಲದ ಮುದಿ ಹುಲಿಯಾಗಿದ್ದು ಇದು ದೇವರ ಹುಲಿಯಲ್ಲವೆಂಬುದು ಖಚಿತವಾದ ತಕ್ಷಣ ಬಂದೂಕಿನ ಟ್ರಿಗರ್ ಎಳೆದಿದ್ದ, ಗುರಿ ತಪ್ಪಲಿಲ್ಲ.. ಸೀದಾ ಹಣೆಗೆ ಹೊಕ್ಕ ಗುಂಡಿನ ರಭಸಕ್ಕೆ ವ್ಯಾಘ್ರದ ಪ್ರಾಣಪಕ್ಷಿ ಹಾರಿಹೋಗಿತ್ತು. ಹತ್ತಿರ ಹೋಗಿ ಅದರ ಹಲ್ಲು, ಉಗುರುಗಳನ್ನು ಕಿತ್ತು ಮಗನೊಡನೆ ಸೇರಿ ಒಂದು ಗುಂಡಿ ತೋಡಿ ಮಣ್ಣುಮಾಡಿಯೇ ಬಿಟ್ಟ. ಮಾರನೇ ದಿನ ಊರವರೆಲ್ಲಾ "ರಾತ್ರಿ ಹುಲಿ ಕೂಗಿದ ಸ್ವಲ್ಪ ಹೊತ್ತಿಗೇ ಗುಂಡಿನ ಶಬ್ಧ ಕೇಳಿತಲ್ಲಾ.. ಹುಲಿ ಸಿಕ್ತಾ" ಎಂದರೂ, ಇಲ್ಲಪ್ಪಾ ಕಾನುಕುರಿ ಹೊಡ್ದಿದ್ದು ಅಂತ ಸುಳ್ಳೇ ಹೇಳಿ ವಿಷಯವನ್ನು ಮುಚ್ಚಿಟ್ಟ. ಇದಾಗಿ ಮೂರೇ ತಿಂಗಳಲ್ಲಿ ದ್ಯಾವ ಸತ್ತಿದ್ದು. ಅವತ್ತು ಮಗ ಬರುತ್ತೀನೆಂದರೂ ಬೇಡವೆಂದು ಹೇಳಿ ಒಬ್ಬನೇ ಶಿಕಾರಿಗೆ ಹೋಗಿದ್ದ, ಬೆಳಗ್ಗೆಯಾದರೂ ಅಪ್ಪ ಬರದಿದ್ದನ್ನು ನೋಡಿ ಹೊರಟ ಮಾರನಿಗೆ ಹುಲಿಯಮ್ಮನ ದೇವಸ್ಥಾನದ ಎದುರಿರುವ ಹೆಬ್ಬಲಿಸಿನ ಮರದ ಕೆಳಗೆ ದ್ಯಾವನ ಹರಿದ ದೇಹ ಕಣ್ಣಿಗೆ ಬಿದ್ದಿತ್ತು. ಅಪ್ಪನ ಅವಸ್ಥೆಯನ್ನು ನೋಡಿ ಕಂಗಾಲಾದ ಮಾರ ಬಿಕ್ಕಿ ಬಿಕ್ಕಿ ಅಳಲು ಶುರುಮಾಡಿ ಜೋರಾಗಿ ಕೂಗಿಕೊಂಡಾಗ ಸದ್ದು ಕೇಳಿದ ಊರವರು ಹೋಗಿ ನೋಡಲು ಮಾರ ಕೈಯಲ್ಲಿ ಬಂದೂಕು ಹಿಡಿದು ಹುಲಿಯಮ್ಮನ ಮುಂದೆ ವಿಕಾರವಾಗಿ ಕಿರುಚುತ್ತಾ ಕುಳಿತಿದ್ದ. ಇತ್ತ ಸುಧಾರಿಸಿಕೊಂಡ ಸೀನಯ್ಯನೂ ಸೀದಾ ಹುಲಿಯಮ್ಮನ ಗುಡಿ ಕಡೆಗೆ ಓಡಿದ್ದರು, ಹೋದವರೇ ಮಾರನನ್ನು ಸಂತೈಸಿ ಊರವರ ಬಳಿ ಶವ ಸಂಸ್ಕಾರಕ್ಕೆ ಬೇಕಾದ ಸಿದ್ಧತೆ ಮಾಡಲು ಹೇಳಿ, ಹೆಣವನ್ನು ಮನೆಗೆ ಸಾಗಿಸಿದ್ದರು. ಮನೆ ಮುಂದೆ ಊರ ಹೆಂಗಸರೆಲ್ಲಾ ಸೇರಿಯಾಗಿತ್ತು, ನಾಗಿ ಹಣೆ ಚಚ್ಚಿಕೊಂಡು ಅಳುತ್ತಾ ಅಂಗಳದಲ್ಲಿ ಹೊರಳಾಡುತ್ತಿದ್ದಳು, ಬಳೆ ಒಡೆದು ಕೈಯೆಲ್ಲಾ ರಕ್ತಮಯವಾಗಿತ್ತು. ಸೀನಯ್ಯ ಮುಂದೆ ನಿಂತು ಮಾರನಿಂದ ಶವ ಸಂಸ್ಕಾರ ಮಾಡಿಸಿ, ಶಾಸ್ತ್ರದ ಪ್ರಕಾರ ನಂತರದ ಕ್ರಿಯೆಗಳನ್ನೂ ಪೂರೈಸಿ "ಮಾರ.. ಇಷ್ಟ್ ದಿನ ನಿಮ್ಮಪ್ಪ ಬದುಕಿದಂತೆ ನೀನೂ ನ್ಯಾಯವಾಗಿ ಬದುಕಬೇಕು, ಏನೇ ತೊಂದ್ರೆ ಆದ್ರೂ ನಾನಿದ್ದೀನಿ.. ಹಿಂಜರಿಯದೇ ನಮ್ಮನೆಗೆ ಬಾ" ಎಂದು ಧೈರ್ಯ ತುಂಬಿದ್ದರು.
       
         ದ್ಯಾವ ಇಲ್ಲದ ಸಮಯದಲ್ಲಿ ಮನೆಗೆ ಬರುತ್ತಿದ್ದ ಶಂಕ್ರ ಒಂದೆರಡು ಬಾರಿ ಮಾರನ ಕಣ್ಣಿಗೆ ಬಿದ್ದಿದ್ದ, ಅದರ ಬಗ್ಗೆ ಹೆಚ್ಚೇನು ತಲೆ ಕೆಡಿಸಿಕೊಂಡಿರದಿದ್ದ ಮಾರನಿಗೆ ಅಪ್ಪ ಸತ್ತ ಮೇಲೆ ಶಂಕ್ರ ಪದೇ ಪದೇ ಬರುತ್ತಿದುದನ್ನು ನೋಡಿ ಅನುಮಾನ ಶುರುವಾಗಿತ್ತು. ದ್ಯಾವ ಸತ್ತ ಇಪ್ಪತ್ನಾಲ್ಕನೇ ದಿನಕ್ಕೆ ನಾಗಿ ಮತ್ತು ಮಾರನ ನಡುವೆ ದೊಡ್ಡ ವಾಗ್ವಾದವೇ ನಡೆದು ಮಾತಿಗೆ ಮಾತು ಬೆಳೆಯುತ್ತಿರಲು ಗಲಾಟೆಯ ಸದ್ದು ಕೇಳಿದ ಸೀನಯ್ಯ ಸೀದಾ ಅವರ ಮನೆ ಕಡೆ ಓಡಿದ್ದರು. ಕೈಯಲ್ಲಿ ಬಂದೂಕು ಹಿಡಿದಿದ್ದ ಮಾರ ಅಪ್ಪನನ್ನು ಕೊಂದ ದೇವರ ಹುಲಿಯನ್ನು ಸುಟ್ಟು ಹಾಕುತ್ತೇನೆ ಎಂದು ಬೊಬ್ಬೆ ಹೊಡೆಯುತ್ತಿದ್ದರೆ, ನಾಗಿ ಮಾತ್ರ "ಹಂಗ್ ಮಾಡ್ಬೇಡ ಮಾರಾಯ, ನಂಗ್ ಮಕ್ಳಿಲ್ಲ ಅಂದಾಗ ನಿನ್ನನ್ನ ಕೊಟ್ಟ ದೇವ್ರದು, ಹುಲಿಯಮ್ಮನ ಹುಲಿ ಹಂಗೆಲ್ಲಾ ಯಾರನ್ನೂ ಹಿಡ್ಯಲ್ಲ, ಬೇರೆ ಯಾವ್ದೋ ಹುಲಿ ಇವ್ರನ್ ಕೊಂದಿರ್ಬೇಕು.. ನಿಂಗ್ ದಮ್ಮಯ್ಯ ಅಂತೀನಿ ದೇವ್ರ್ ಹುಲಿ ತಂಟೆಗೆ ಹೋಗ್ಬೇಡ" ಎಂದು ಗೋಗರೆಯುತ್ತಿರಲು, ಆಕೆಯ ನಾಟಕೀಯ ವರ್ತನೆ ಕಂಡ ಮಾರ, "ಹಾಗಾದ್ರೆ ಬೇರೆ ಹುಲಿಯನ್ನೇ ಕೊಂದು ಬರ್ತೀನಿ ಬಿಡು" ಎಂದು ವ್ಯಂಗ್ಯವಾಗಿ ನಕ್ಕಿದ್ದ. ಅಲ್ಲಿಗೆ ಹೋದ ಸೀನಯ್ಯ ಕೂಡ ದೇವ್ರ್ ಹುಲಿ ಯಾರಿಗೂ ತೊಂದ್ರೆ ಮಾಡಲ್ಲ ದುಡುಕಿ ಅನಾಹುತ ಮಾಡ್ಬೇಡ ಎನ್ನಲು, "ಅಯ್ಯಾ.. ನನ್ ಅಪ್ಪನ್ನ ಕೊಂದ ಪೀಡೆ ಸಾಯ್ಲೇಬೇಕು" ಎಂದು ಬಂದೂಕು ಹಿಡಿದು ಹೊರಟೇ ಬಿಟ್ಟ. ಗಾಬರಿಯಾದ ಸೀನಯ್ಯ "ಏನೇ ನಾಗಿ ಇವ್ನ್ ಹುಟ್ಟಿದಾಗ ಹರಕೆ ತೀರಿಸಿದ್ದು ಬಿಟ್ರೆ ಮತ್ತೆ ಆ ಕಡೆ ಪೂಜೆ ಮಾಡೋಕೂ ಹೋಗಿರ್ಲಿಲ್ವಂತೆ ನಿನ್ ಗಂಡ, ಹೌದಾ?" ಎನ್ನಲು. "ಅಯ್ಯಾ.. ಬಿಡ್ತು ಅನ್ನಿ, ಒಂದ್ ವರ್ಷನೂ ತಪ್ಪಿಸ್ದೇ ಹರಕೆ ತೀರ್ಸಿದಾರೆ, ಆದ್ರೂ ಹಿಂಗಾಯ್ತು ನೋಡಿ" ಎನ್ನುವಷ್ಟರಲ್ಲೇ ಬಂದೂಕಿನಿಂದ ಒಂದರ ಹಿಂದೊಂದರಂತೆ ಮೂರು ಗುಂಡುಗಳು ಸಿಡಿದ ಸದ್ದು ಕೇಳಿ, ಸೀನಯ್ಯ ಮತ್ತು ನಾಗಿ ಫಟ್ಟನೆ ಹುಲಿಯಮ್ಮನ ದೇವಸ್ಥಾನದ ಕಡೆಗೆ ಓಡಿದ್ದರು. ಹುಲಿಮಾರ ಸತ್ತ ಹುಲಿಯ ಹೆಣದ ಮೇಲೆ ಕಾಲಿಟ್ಟು ಗಹಗಹಿಸಿ ನಗುತ್ತಿದ್ದ. ಅವನ ರೌದ್ರಾವತಾರವನ್ನು ಕಂಡ ನಾಗಿ ಅಕ್ಷರಶಃ ನಡುಗಿ ಕುಸಿದು ಕೂತಿದ್ದಳು, "ಏನ್ ಕೆಲ್ಸ ಮಾಡ್ಬಿಟ್ಯೋ ಮಾರ.." ಎಂದು ಓಡಿ ಹೋದ ಸೀನಯ್ಯ ರಕ್ತಸಿಕ್ತವಾಗಿ ಬಿದ್ದಿದ್ದ ಹುಲಿಗೆ ಕೈ ಮುಗಿದು ಅದನ್ನು ದಿಟ್ಟಿಸಿ "ಅಬ್ಬಾ!! ಊರ್ ಉಳೀತು, ಸದ್ಯ ಇದು ದೇವರ ಹುಲಿಯಲ್ಲ" ಎಂದು ನಿಟ್ಟುಸಿರಿಟ್ಟಾಗ, "ಹ್ಞೂಂ.. ದೇವರ ಹುಲಿಯಲ್ಲವಾ? ಇಲ್ಲಿರೋ ಹುಲಿಗಳೆಲ್ಲವೂ ದೇವರ ಹುಲಿಗಳೇ, ನಾನು ಕೊಂದಿದ್ದೂ ದೇವರ ಹುಲಿಯನ್ನೇ, ನನ್ನನ್ನು ಹುಟ್ಟಿಸಿದ ದೇವರ ಹುಲಿಯನ್ನೇ" ಎಂದು ವ್ಯಂಗ್ಯವಾಗಿ ನಕ್ಕ ಹುಲಿಮಾರನ ಕಣ್ಣು ದೂರದ ಪೊದೆಯಲ್ಲಿ ಬಿದ್ದಿದ್ದ ಶಂಕ್ರನ ದೇಹವನ್ನೇ ದಿಟ್ಟಿಸುತ್ತಿತ್ತು. ಸೀನಯ್ಯನ ಅನುಮಾನದ ಕಣ್ಣು ನಾಗಿಯನ್ನೂ, ನಾಗಿಯ ಕಣ್ಣು ಮಾರನನ್ನೂ ಅವಕ್ಕಾಗಿ ನೋಡುತ್ತಿದ್ದವು.

- ಸ್ಕಂದ ಆಗುಂಬೆ


ಈ ಕಥೆ ಕನ್ನಡಪ್ರಭ ದಿನಪತ್ರಿಕೆಯ "ಭಾನುಪ್ರಭ" ಪುರವಣಿಯಲ್ಲಿ ಪ್ರಕಟವಾಗಿದೆ.

1 comment:

"ಕಂದ" ಪದ್ಯ

ಎಷ್ಟು ಚಂದ ನಮ್ಮ ಕಂದ ಬಾಯಿ ತೆರೆದು ನಕ್ಕರೆ ಪುಟ್ಟ ಹಲ್ಲು, ಹಾಲುಗಲ್ಲ ನಗುವೆ ಸಿಹಿಯ ಸಕ್ಕರೆ ನಮ್ಮ ಕಂದ ಇನ್ನೂ ಚಂದ ಸಿಟ್ಟು ಮಾಡಿಕೊಂಡರೆ ಕೆಂಪು ಮೂಗು,...