Thursday, 29 March 2018

ಇವನ ಪ್ರತಾಪಕ್ಕೆ ನಾನು ಹರಕೆ ಕುರಿ



ಬದುಕು ಕಟ್ಟುವ ಕೆಲಸ ಆರಂಭ ಆಗೋದೇ ಪಿಯುಸಿ ಮುಗಿದ ಮೇಲೆ, ಅಲ್ಲಿಯ ತನಕ ನಮ್ಮ ಗುರಿಯ ಬಗ್ಗೆ ಅರಿವಿದ್ದರೂ, ಸಾಗುವ ದಾರಿಯ ಕುರಿತು ಸ್ಪಷ್ಟತೆ ಇರುವುದಿಲ್ಲ. ಆ ಸಮಯದಲ್ಲಿ ನಮ್ಮ ತೊಳಲಾಟಗಳನ್ನ ಆಲಿಸೋಕೆ ಒಂದೊಳ್ಳೇ ಸ್ನೇಹಮಯಿ ಜೀವದ ಅವಶ್ಯಕತೆ ಖಂಡಿತಾ ಇರುತ್ತದೆ. ಅಂತೆಯೇ ನನಗಿರುವ ಕೆಲವೇ ಕೆಲವು ಬೆರಳೆಣಿಕೆಯಷ್ಟು ಬೆಸ್ಟ್ ಫ್ರೆಂಡ್ಸ್ ಎಂಬುವವರಲ್ಲಿ ಇವನೂ ಒಬ್ಬ, ಹೆಸರು ಶಿವಪ್ರಸಾದ. ನನ್ನೆಲ್ಲಾ ಯಡವಟ್ಟುಗಳಿಗೂ ಸಾಕ್ಷ್ಯ ಹೊಂದಿದವ. ನಮ್ಮ ನಡುವೆ ಅರಿಷಡ್ವರ್ಗಗಳಿಂದ ಹಿಡಿದು ಅಂತರಾಷ್ಟ್ರೀಯ ಮಟ್ಟದ ತನಕವೂ ಚರ್ಚೆಗಳಾಗುತ್ತವೆ, ವಯಸ್ಸು ಒಂದೇ ಆಗಿದ್ದರಿಂದ ಹದಿಹರೆಯದ ರಾಮಾಯಣಗಳ ಕುರಿತು ತುಸು ಜಾಸ್ತಿಯೇ ಮಾತನಾಡುತ್ತೇವೆ. ಬೆಳಿಗ್ಗೆ ಸೂರ್ಯ ಏಳುವುದಕ್ಕೆ ಮೊದಲೇ ನನ್ನನ್ನೆಬ್ಬಿಸಿ ನಿದ್ದೆಗಣ್ಣಿನಲ್ಲೇ ಮೊಂಬತ್ತಿಯ ಮುಂದೆ ಕೂರಿಸಿ ಅವನದೇ ಕಲ್ಪನೆಯನ್ನಿಟ್ಟುಕೊಂಡು ಫೋಟೋ‌ ತೆಗೆಯುವ ಇವನ ಹುಚ್ಚಿಗೆ ನಾನು ಹರಕೆಯ ಕುರಿ. ಇವನು ಪ್ರೇಮಪತ್ರ ಬರೆದಾಗ ಅವರಮ್ಮ ಅನುಮಾನಿಸಿದ್ದರಂತೆ, ಆ ಅನುಮಾನ ನಿವಾರಿಸೋಕೆ ನನ್ನ ಅಷ್ಟೂ ಪ್ರೇಮಪತ್ರಗಳನ್ನ ಅವರ ಮುಂದಿಟ್ಟು ತನ್ನನ್ನು ತಾನು ಬಚಾವ್ ಮಾಡಿಕೊಂಡ ಕಿಡಿಗೇಡಿ. ಅತೀ ಮುಗ್ಧನಂತೆ ತನ್ನನ್ನು ತಾನು ಬಿಂಬಿಸಿಕೊಳ್ಳೋ ಇವನೊಳಗಿರುವ ಮಹಾನ್ ಕಿಲಾಡಿಯ ಪರಿಚಯ ನನಗಿರುವುದರಿಂದ ಹೆಚ್ಚಿಗೆ ಹೊಗಳಿ ಆತ್ಮಸಾಕ್ಷಿಗೆ ಮೋಸ ಮಾಡಿಕೊಳ್ಳೋಕೆ ತಯಾರಿಲ್ಲ. ಆದರೆ ಒಂದಂತೂ ಸತ್ಯ ನನಗರಿವಿಲ್ಲದಂತೇ ನನ್ನಲ್ಲಿ ಕೆಲ ಸಣ್ಣಪುಟ್ಟ ಬದಲಾವಣೆ ತರುವಲ್ಲಿ ಇವನದೂ ಕೊಂಚ ಪಾಲಿದೆ.

- ಸ್ಕಂದ ಆಗುಂಬೆ



(ಈ ಬರಹ ಕನ್ನಡಪ್ರಭ ದಿನಪತ್ರಿಕೆಯ ಕ್ಯಾಂಪಸ್ ಪುರವಣಿಯಲ್ಲಿ ಪ್ರಕಟವಾಗಿದೆ)

1 comment:

"ಕಂದ" ಪದ್ಯ

ಎಷ್ಟು ಚಂದ ನಮ್ಮ ಕಂದ ಬಾಯಿ ತೆರೆದು ನಕ್ಕರೆ ಪುಟ್ಟ ಹಲ್ಲು, ಹಾಲುಗಲ್ಲ ನಗುವೆ ಸಿಹಿಯ ಸಕ್ಕರೆ ನಮ್ಮ ಕಂದ ಇನ್ನೂ ಚಂದ ಸಿಟ್ಟು ಮಾಡಿಕೊಂಡರೆ ಕೆಂಪು ಮೂಗು,...