ರೂಪಸಿ…
ಅಕಾಲಿಕ ಮಳೆಗೆ ನೆಂದ ಬೀದಿದೀಪದಲ್ಲಿ ಹರಳುಗಟ್ಟಿರುವ ಹನಿಗಳೊಳಗೆ ನಿನ್ನ ಛಾಯೆಯಿದೆ, ತೇವಗೊಂಡಿರುವ ಕುಸುಮದ ಎಸಳು ನಿನ್ನ ಅಧರದಂತೆ ಕೆಂಪುಗೊಂಡಿದೆ, ಇಳಿಸಂಜೆಯ ಬಾನಿನಲ್ಲಿ ನಿನ್ನದೇ ಕೆನ್ನೆಯ ರಂಗಿದೆ, ಪ್ರಕೃತಿಯೊಡನೆ ನಿನ್ನದೇನಾದರೂ ಒಪ್ಪಂದ ಏರ್ಪಟ್ಟಿರಬಹುದೆಂಬ ಗುಮಾನಿ ನನಗೆ.
ನೂಪುರದ ಮಣಿಗಳು ನಿನ್ನ ಕಾಲಿಗೆ ಮುತ್ತಿಡುವಾಗಲೆಲ್ಲಾ ಅತೀವ ಹೊಟ್ಟೆಕಿಚ್ಚಾಗುತ್ತದೆ, ಮೂಗುತಿಗೆ ತಾಗುವ ಉಸಿರ ತಾಪ ನನಗೂ ಸೋಕಲಿ ಎಂದು ಹರಕೆ ಹೊತ್ತಿರುವೆ, ನಿಶಾಚರಿ ಕನಸುಗಳನ್ನೆಲ್ಲಾ ಸಂಪೂರ್ಣ ನಿನಗೇ ಮೀಸಲಿಟ್ಟಿರುವೆ ತಡಮಾಡದೇ ಆಕ್ರಮಿಸಿಕೋ. ಎದೆತಳದ ಅಕ್ಷಾಂಶ ರೇಖಾಂಶಗಳೆಲ್ಲಾ ನಿನ್ನ ಪಾದಸ್ಪರ್ಶದಿಂದ ಪಾವನಗೊಂಡು, ಮನದ ಭೂಪಟದಲ್ಲಿ ನಿನ್ನದೊಂದು ಸಾಮ್ರಾಜ್ಯ ಸ್ಥಾಪನೆಯಾಗಲಿ. ಬೈಗಿನಲ್ಲಿ ದರ್ಬಾರು ನಡೆಸು ಬದುಕು ಸಾರ್ಥಕವಾಗಲಿ. ಪೋರಿಯೊಬ್ಬಳು ಈ ಪರಿ ಕಾಡುವ ಕಥೆ ಯಾವ ರಾಜನ ಇತಿಹಾಸದ ಪುಟದಲ್ಲೂ ನಮೂದಾಗಿರಲಿಕ್ಕಿಲ್ಲ ಅಥವಾ ಮೊದಲ ಪ್ರೇಮವನ್ನೇ ಗಟ್ಟಿಯಾಗಿ ಹಿಡಿದಿಟ್ಟುಕೊಂಡು ಕಾಯುವ ಹುಡುಗನೂ ಸಿಗಲಿಕ್ಕಿಲ್ಲ. ಇನ್ನೂ ಎಷ್ಟು ವರ್ಷಗಳ ತನಕ ಮೀರಾ ಮಾಧವರ ಕಥೆಯನ್ನೇ ಎಳೆದಾಡುವುದು? ಸತಾಯಿಸದೆ ಸಮ್ಮತಿಸು ಅತ್ಯುತ್ಕೃಷ್ಟ ಪ್ರೇಮಕಥೆಯೊಂದು ಸೃಷ್ಟಿಯಾಗಲಿ.
ಇಂತಿ,
ಕನಸು ಕಂಗಳ ಹುಡುಗ
ಸ್ಕಂದ ಆಗುಂಬೆ.
(ಮೂಲಪ್ರತಿ)
ಈ ಲೇಖನ ಪ್ರಜಾವಾಣಿ ದಿನಪತ್ರಿಕೆಯ ಮೆಟ್ರೋ (ಮೈಸೂರು ಆವೃತ್ತಿ) ಪುರವಣಿಯಲ್ಲಿ ಪ್ರಕಟವಾಗಿದೆ.

No comments:
Post a Comment