Thursday, 22 February 2018

ಎಳೆ ಮುಂಗುರುಳು, ಓರೆ ಬೈತಲೆ, ಕಡುಗಪ್ಪು ಕಾಡಿಗೆ, ಚುಕ್ಕಿ ಬೊಟ್ಟು, ಜೋತುಬಿದ್ದ ಕಿವಿಯೋಲೆ, ಖಾಲಿ ಮೂಗು!!



ಭವ್ಯ ಕನಸೊಂದಕ್ಕೆ ಬುನಾದಿ ಹಾಕಿದ ಘಳಿಗೆ, ಅದೆಷ್ಟೋ ಜನ್ಮಗಳಿಂದ ಬರಡಾಗಿ ಹೋಗಿದ್ದ ಆತ್ಮದಲ್ಲಿ ಪ್ರೀತಿಯ ಒರೆತ. ತೀರಾ ಸನಿಹದಿಂದ ಗುರಾಯಿಸಿದವಳ ವಯಸ್ಸು ನನಗಿಂತ ಕಡಿಮೆ ಎಂದು ತಿಳಿದಾಗ ವರ್ಷದ ಅಷ್ಟೂ ಹಬ್ಬಗಳ ಸಾಮೂಹಿಕ ಆಚರಣೆ!! ಅವಳನ್ನು ಕಂಡ ಮೊದಲ ಕ್ಷಣವಿನ್ನೂ ಹಸಿರಾಗಿದೆ, ಎಳೆ ಮುಂಗುರುಳು, ಓರೆ ಬೈತಲೆ, ಕಡುಗಪ್ಪು ಕಾಡಿಗೆ, ಚುಕ್ಕಿ ಬೊಟ್ಟು, ಜೋತುಬಿದ್ದ ಕಿವಿಯೋಲೆ, ಖಾಲಿ ಮೂಗು!! ತೀರಾ ಮೊದಲ ನೋಟದಲ್ಲೇ ಕಣ್ಣಿಗೆ ಬಿದ್ದ ಸಂಗತಿಗಳೆಲ್ಲಾ ಮನದಲ್ಲಿ ಅಚ್ಚಾಗಿ, ಜೀವನದ ಅಷ್ಟೂ ರಾತ್ರಿಗಳಿಗೆ ಸಾಕಾಗುವಷ್ಟು ಕನಸು ಬಿಡುಗಡೆಯಾಗಲು.. ಮೊದಲ ಪ್ರೇಮ ಮೊಳಕೆಯೊಡೆದಿತ್ತು!!
ಒಮ್ಮುಖದ ಪ್ರೀತಿ ಎಂತಹವರನ್ನೂ ಅಲುಗಾಡಿಸಿಬಿಡುತ್ತದೆ, ಹುಡುಗಿಯನ್ನು ಪರಿಚಯಿಸಿಕೊಳ್ಳುವುದರಿಂದ ಹಿಡಿದು ಪ್ರೇಮ ನಿವೇದನೆ ಮಾಡಿಕೊಳ್ಳುವ ತನಕ ಅಕ್ಷರಶಃ ತ್ರಿಶಂಕು ಸ್ಥಿತಿ!! ಈ ವಿಚಾರದಲ್ಲಿ ನಾನಂತೂ ಹೈರಾಣಾಗಿದ್ದೆ, ಆಕೆಯ ಪೂರ್ವಾಪರಗಳನ್ನೆಲ್ಲಾ ತಿಳಿಯಲು ರಹಸ್ಯ ಕಾರ್ಯಾಚರಣೆಯನ್ನೇ ನಡೆಸಿ, ಅವಳ ದೋಸ್ತಿಯ ಮೂಲಕ ಪರಿಚಯ ಮಾಡಿಕೊಂಡು, ಮೊಬೈಲ್ ನಂಬರ್ ಪಡೆಯುವಷ್ಟರಲ್ಲಿ ಒಂದು ಶತಮಾನವೇ ಉರುಳಿದಂಥಾ ಅನುಭವ! ಕುಂಟುನೆಪವಿಟ್ಟುಕೊಂಡು ಮೊದಲ ಬಾರಿಗೆ ಕರೆ ಮಾಡಿದಾಗ ಅವಳೇ ಕರೆ ಸ್ವೀಕರಿಸಿದ್ದು ನನ್ನ ಪೂರ್ವಜರ ಪುಣ್ಯ! ಆಗಿನ್ನೂ ಸ್ಮಾರ್ಟ್ಫೋನ್ ಕೈಗೆ ಸಿಕ್ಕಿರದ ಕಾರಣ ನೋಕಿಯಾ ಕೀಪ್ಯಾಡ್ ಮೊಬೈಲಿನ ಅಷ್ಟೂ ಬಟನ್ನುಗಳನ್ನು ಪಟಪಟನೆ ಒತ್ತಿ ಮೆಸೇಜು ವಿನಿಮಯ ಮಾಡಿಕೊಳ್ಳುವಷ್ಟರಲ್ಲಿ ಪರಿಚಯ ಸ್ನೇಹವಾಗಿ ಪರಿವರ್ತನೆಯಾಗಿತ್ತು. ಅದೆಷ್ಟೇ ಮಾತನಾಡಿದರೂ ಪ್ರೇಮ ನಿವೇದನೆಯ ಕನಸು ಮಾತ್ರ ನನಸಾಗಿರಲಿಲ್ಲ. ಅದ್ಯಾವ ಜನ್ಮದ ಪುಣ್ಯವೋ? ಏನೋ? ಮನದ ತೊಳಲಾಟಗಳನ್ನೆಲ್ಲಾ ಹೊರಹಾಕಲಾಗದೆ ಒದ್ದಾಡುತ್ತಾ ಕುಳಿತಿದ್ದವನಿಗೆ ಹಾಸ್ಟೆಲಿನ ರೂಮಿನಲ್ಲಿದ್ದ ತುಕ್ಕು ಫ್ಯಾನಿನ ಕೆಳಗೆ ಜ್ಞಾನೋದಯವಾಗಿ ಪ್ರೇಮಪತ್ರವೊಂದು ಮೂಡಿತ್ತು. ಪತ್ರವೇನೋ ಬರೆದುಬಿಟ್ಟೆ ಅವಳಿಗೆ ತಲುಪಿಸುವುದು ಹೇಗೆ ಎಂಬ ಪ್ರಶ್ನೆ ಬಂದಾಗ ಮತ್ತದೇ ಮೌನ! ಬರೋಬ್ಬರಿ ನಾಲ್ಕೈದು ತಿಂಗಳ ಕಾಲ ಕತ್ತಲಲ್ಲೇ ಕುಳಿತ ಪತ್ರ ಕೊನೆಗೆ ಪತ್ರಿಕೆಯೊಂದರಲ್ಲಿ ಪ್ರಕಟವಾದರೂ, ಅಷ್ಟರಲ್ಲಾಗಲೇ ಇದ್ದ ಚೂರುಪಾರು ಧೈರ್ಯವನ್ನೆಲ್ಲಾ ಒಟ್ಟುಹಾಕಿ ಪ್ರೇಮ ನಿವೇದನೆ ಮಾಡಿಕೊಂಡು ಒಪ್ಪಿಗೆಯೂ ಅಲ್ಲ, ತಿರಸ್ಕೃತವೂ ಅಲ್ಲ ಎಂಬ ಅತಂತ್ರ ಸ್ಥಿತಿಗೆ ತಲುಪಿ ಕಂಗಾಲಾಗಿದ್ದೆ. ಪ್ರಕಟವಾದ ಪ್ರೇಮಪತ್ರವನ್ನು ಓದಿ ನಾಚಿದ ಹುಡುಗಿ ಚೆನ್ನಾಗಿದೆ ಎಂಬ ಒಂದು ಪದವನ್ನು ಬಿಟ್ಟು ಮತ್ತೇನೂ ಹೇಳದಿದ್ದಾಗ ಎದೆಯೊಳಗೆ ಮೂರನೇ ಮಹಾಯುದ್ಧ!
ಹಾಗೂ ಹೀಗೂ ಪ್ರೇಮಪತ್ರ ಬರೆಯುವುದೇ ಸಲೀಸೆನ್ನಿಸಿ ಒಂದೆರಡು ಪ್ರೇಮಪತ್ರಗಳು ಪತ್ರಿಕೆಯಲ್ಲಿ ಪ್ರಕಟವಾಗುವಷ್ಟರಲ್ಲಿ ಪಿಯುಸಿ ಮುಗಿದಿತ್ತು, ಗಣಿತದ ಅತ್ಯಂತ ಕಠಿಣವೆನಿಸುವ ಸಮೀಕರಣಗಳನ್ನೆಲ್ಲಾ ಒದ್ದಾಡಿ ಅರ್ಥೈಸಿಕೊಂಡ ನನಗೆ, ಅವಳು ಮಾತ್ರ ಸವಾಲಾಗಿಯೇ ಉಳಿದು, ಹಲವು ಭಗೀರಥ ಪ್ರಯತ್ನಗಳು ನಿರಂತರವಾಗಿ ನಡೆದರೂ ಸಿಕ್ಕಿದ್ದು ಮಾತ್ರ ಭಾರತೀಯರೇ ಕಂಡು ಹಿಡಿದ ಅತೀ ದೊಡ್ಡ ಶೂನ್ಯ! ಅದೇನಾದರೂ ಸೈ ಮೊದಲ ಪ್ರೀತಿಯಲ್ಲೇ ಪಾಸಾಗಬೇಕೆಂಬ ಶಪಥ ತೊಟ್ಟು, ಮತ್ತೆ ಮತ್ತೆ ಪ್ರಯತ್ನ ಮಾಡುವಷ್ಟರಲ್ಲಿ ಈ ಲೇಖನ ಬರೆದು ಮುಗಿಸುತ್ತಿದ್ದೇನೆ…!
ಮೂರೂವರೆ ವರ್ಷಗಳ ಸುದೀರ್ಘಾವಧಿಯಲ್ಲಿ ಅದೇನೇನೋ ಬದಲಾವಣೆಯಾಯಿತು, ಅವಳ ಖಾಲಿ ಮೂಗಿಗೆ ನತ್ತು ಬಂತು, ನನಗೂ ಗಡ್ಡ, ಮೀಸೆ ಬಂತು ಆದರೆ ನನ್ನ ಪ್ರೇಮಕಥೆ ಮಾತ್ರ ಇನ್ನೂ ಸರ್ಕಾರಿ ಕಚೇರಿಯಲ್ಲಿ ಬಿದ್ದಿರುವ ಅರ್ಜಿಯಂತೆ ಅತಂತ್ರವಾಗಿಯೇ ಇದೆ! ಆದರೂ ಅದರಲ್ಲೊಂದು ಖುಷಿಯಿದೆ, ಯಾಕೆಂದರೆ ಅದು ಮೊದಲ ಪ್ರೀತಿ.

- ಸ್ಕಂದ ಆಗುಂಬೆ

(ಮೂಲಪ್ರತಿ)
ಈ ಲೇಖನ ಕನ್ನಡಪ್ರಭ ದಿನಪತ್ರಿಕೆಯ ಕ್ಯಾಂಪಸ್ ಪುರವಣಿಯಲ್ಲಿ ಪ್ರಕಟವಾಗಿದೆ.

Tuesday, 20 February 2018

ಒಂಚೂರು ಪಥ್ಯ ಕಲಿಸು, ಅವ್ಯಾಹತವಾಗಿ ಪ್ರೀತಿಸುವೆ




ಜೀವದಾಳದಲ್ಲೆದ್ದ ಅಲೆಯೊಂದು ಒಂದೇ ಸಮನೆ ಭೋರ್ಗರೆಯುತ್ತಿದೆ. ತುರ್ತಾಗಿ ತೀರದಲ್ಲೊಮ್ಮೆ ಸುಳಿದಾಡು, ಹೆಜ್ಜೆಗಳಚ್ಚಿಗೆ ಮುತ್ತಿಕ್ಕಿ ತಣ್ಣಗಾಗಲಿ ಉನ್ಮಾದ. ಬಯಕೆಗಳ ಬತ್ತಳಿಕೆ ಹೊತ್ತು ಕೂತಿರುವ ನಿನ್ನ ಹುಡುಗನುಸಿರಲ್ಲಿ ಬೆರೆತಿರುವುದು ಬರೀ ಇಂತಹುದೇ ಗುಟ್ಟುಗಳು, ಅವುಗಳಲ್ಲೊಂದು ಪಾಲನ್ನು ಬಿಟ್ಟುಕೊಡುವೆ, ಹಿಡಿದಿಟ್ಟುಕೋ.

ಜೀವನ ಪೂರಾ ಭ್ರಾಂತಿಯಲ್ಲಿದೆ, ಪ್ರೀತಿಯಲ್ಲಿ ಬರೀ ಸಿಹಿಯನ್ನೇ ಸವಿದು ಮಧುಮೇಹಿಯಾಗುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ, ಒಂಚೂರು ಪಥ್ಯ ಕಲಿಸು. ಬದುಕೆಂಬ ಭೂರಿಭೋಜನಕ್ಕೆ ಕೊಂಚ ಮಸಾಲೆ ಬೀಳಲಿ, ಒಗ್ಗರಣೆಯಲ್ಲೊಂದಷ್ಟು ಸಿಡುಕು, ಕೋಪ, ಗುದ್ದಾಟ, ಮುದ್ದಾಟ, ತಮಾಷೆಯಿರಲಿ, ಹದವಾಗಿ ಬೆರೆತ ಪ್ರೀತಿಯ ತುತ್ತು ಹೊಟ್ಟೆ ತುಂಬಿಸಲಿ, ಸಂಕಷ್ಟ ಚತುರ್ಥಿಯಂತೆ ಆಗಾಗ ಉಪವಾಸಕ್ಕೊಂದು ನೆಪ ಸಿಗಲಿ. ನಿನ್ನ ಕೆಂದುಟಿಯ ಮೇಲೆ ಬೆರಳಿಟ್ಟು, ಕಣ್ಣಲ್ಲಿ ಕಣ್ಣಿಟ್ಟು ಪಿಸುಗುಡುವ ನಡುವೆ ಅರಿವಿಲ್ಲದಂತೆ ಮುದ್ದಾಗಿ ತುಟಿಯೊತ್ತಿಬಿಡು, ಸುಖಾಸುಮ್ಮನೆ ಹಠಹಿಡಿದು ಗೋಳಾಡಿಸು, ನನ್ನ ಹುಸಿಮುನಿಸಿಗೊಂದು ನಯವಾದ ಕಾರಣವಿರಲಿ. ಬಯಸಿ ಬಂದಾಗೊಮ್ಮೆ ದೂರತಳ್ಳು, ವಿರಹದ ತಾಪ ಒಂಚೂರು ಸುಡಲಿ. ಚುಂಬಿಸುವ ನೆಪದಲ್ಲಿ ಗಲ್ಲ ಕಚ್ಚುವುದನ್ನು ಮಾತ್ರ ಮರೆಯದಿರು, ನಿನ್ನ ದಾಳಿಂಬೆಯಂಥಾ ಹಲ್ಲುಗಳ ಸಿಹಿ ನನ್ನ ಒರಟು ಕೆನ್ನೆಗೂ ಸೋಕಲಿ. ನನ್ನಷ್ಟೂ ಹಗಲುಗಳಿಗೆ ನೀನೇ ಇಬ್ಬನಿ ಆಗಬೇಕು, ಎಲ್ಲಾ ರಾತ್ರಿಗಳಿಗೂ ನಿನ್ನ ಮಾತೇ ಲಾಲಿಯಾಗಬೇಕು. ಮುದವಾದ ಸಂಚು ರೂಪಿಸಿ ಮತ್ತೆ ಮತ್ತೆ ನನ್ನ ಸೋಲಿಸು, ಸೋಲುವುದೇ ಚಾಳಿಯಾಗಲಿ. ನಿನ್ನ ಮೈ ಹೊಳಪು ಬೆಳದಿಂಗಳೊಂದಿಗೆ ಸ್ಪರ್ಧೆಗಿಳಿಯಲಿ, ಲಂಚ ಕೊಟ್ಟಾದರೂ ನಿನ್ನ ಗೆಲ್ಲಿಸುವೆ. ನೀ ಉಡುವ ಸೀರೆಯಲ್ಲಿ ನನ್ನ ಕನಸು ಅಡಗಲಿ, ಸೆರಗಿನೊಳಗೆ ಭಾವವೊಂದು ಕದ್ದುಮುಚ್ಚಿ ಸೇರಲಿ, ಕಾಣದಂಥಾ ಮಾಯೆಯೊಂದು ಬಿಡದೇ ಕಾಡಲಿ. ನಿನ್ನ ತುಂಬುಗೆನ್ನೆಗೆ ಕಂದಾಯ ಕಟ್ಟುವೆ, ರಶೀದಿಯ ಕೊಡದೆ ಪದೇ ಪದೆ ವಸೂಲಿಗಿಳಿದು ಲೂಟಿ ಮಾಡು, ದಿವಾಳಿಯಾದರೂ ಸೈ ದೂರು ನೀಡದೇ ಸಹಿಸಿಕೊಳ್ಳುವೆ. ಮುದ್ದಾಗಿ ಮೂತಿ ಮುರಿಯುವ ಕಲೆಯನ್ನು ನನಗೂ ಕಲಿಸು, ಸೋಲುವುದಕ್ಕೆ ಮತ್ತೊಂದು ಕಾರಣ ಸಿಕ್ಕಂತಾಗುತ್ತದೆ. ಬೆಳದಿಂಗಳ ಇರುಳು ಮಗ್ಗುಲು ಬದಲಿಸುವಾಗ, ಕಡಲ ತಡಿಯಲ್ಲಿ ಕೂತು ಮಹಾಪರ್ವಕ್ಕೆ ಸಾಕ್ಷಿಯಾಗೋಣ, ಚಂದಿರನೂ ನಾಚುವಂತೆ ಅವ್ಯಾಹತವಾಗಿ ಪ್ರೀತಿಸುವೆ. ವೃದ್ಧಾಪ್ಯ ಆವರಿಸಿದಾಗ ಮತ್ತದೇ ಕಡಲ ಮುಂದೆ ಕೂತು ಗುಬ್ಬಿಗೂಡು ಕಟ್ಟೋಣ, ಸಾಕೆನಿಸಿದಾಗ ಇಂತಹ ಬಾಲಿಶ ಗುಟ್ಟುಗಳನ್ನೆಲ್ಲಾ ಮರಳಡಿಯಲ್ಲಿ ಹೂತು ಹೊರಟುಬಿಡೋಣ. ಅಲ್ಲಿಯ ತನಕ ಈ ಹುಡುಗನನ್ನು ಸಂಭಾಳಿಸುವ ಜವಾಬ್ದಾರಿ ನಿನ್ನದು. ಜೋಪಾನ.

ಇಂತಿ…
           ಭ್ರಾಂತಿಗೊಳಗಾದವ
         - ಸ್ಕಂದ ಆಗುಂಬೆ

(ಮೂಲಪ್ರತಿ)

ಈ ಲೇಖನ ಉದಯವಾಣಿ ದಿನಪತ್ರಿಕೆಯ ಜೋಶ್ ಪುರವಣಿಯಲ್ಲಿ ಪ್ರಕಟವಾಗಿದೆ.

Tuesday, 13 February 2018

ಅತ್ಯುತ್ಕೃಷ್ಟ ಪ್ರೇಮಕಥೆಯೊಂದು ಸೃಷ್ಟಿಯಾಗಲಿ



ರೂಪಸಿ…
                ಅಕಾಲಿಕ ಮಳೆಗೆ ನೆಂದ ಬೀದಿದೀಪದಲ್ಲಿ ಹರಳುಗಟ್ಟಿರುವ ಹನಿಗಳೊಳಗೆ ನಿನ್ನ ಛಾಯೆಯಿದೆ, ತೇವಗೊಂಡಿರುವ ಕುಸುಮದ ಎಸಳು ನಿನ್ನ ಅಧರದಂತೆ ಕೆಂಪುಗೊಂಡಿದೆ, ಇಳಿಸಂಜೆಯ ಬಾನಿನಲ್ಲಿ ನಿನ್ನದೇ ಕೆನ್ನೆಯ ರಂಗಿದೆ, ಪ್ರಕೃತಿಯೊಡನೆ ನಿನ್ನದೇನಾದರೂ ಒಪ್ಪಂದ ಏರ್ಪಟ್ಟಿರಬಹುದೆಂಬ ಗುಮಾನಿ ನನಗೆ.
ನೂಪುರದ ಮಣಿಗಳು ನಿನ್ನ ಕಾಲಿಗೆ ಮುತ್ತಿಡುವಾಗಲೆಲ್ಲಾ ಅತೀವ ಹೊಟ್ಟೆಕಿಚ್ಚಾಗುತ್ತದೆ, ಮೂಗುತಿಗೆ ತಾಗುವ ಉಸಿರ ತಾಪ ನನಗೂ ಸೋಕಲಿ ಎಂದು ಹರಕೆ ಹೊತ್ತಿರುವೆ, ನಿಶಾಚರಿ ಕನಸುಗಳನ್ನೆಲ್ಲಾ ಸಂಪೂರ್ಣ ನಿನಗೇ ಮೀಸಲಿಟ್ಟಿರುವೆ ತಡಮಾಡದೇ ಆಕ್ರಮಿಸಿಕೋ. ಎದೆತಳದ ಅಕ್ಷಾಂಶ ರೇಖಾಂಶಗಳೆಲ್ಲಾ ನಿನ್ನ ಪಾದಸ್ಪರ್ಶದಿಂದ ಪಾವನಗೊಂಡು, ಮನದ ಭೂಪಟದಲ್ಲಿ ನಿನ್ನದೊಂದು ಸಾಮ್ರಾಜ್ಯ ಸ್ಥಾಪನೆಯಾಗಲಿ. ಬೈಗಿನಲ್ಲಿ ದರ್ಬಾರು ನಡೆಸು ಬದುಕು ಸಾರ್ಥಕವಾಗಲಿ. ಪೋರಿಯೊಬ್ಬಳು ಈ ಪರಿ ಕಾಡುವ ಕಥೆ ಯಾವ ರಾಜನ ಇತಿಹಾಸದ ಪುಟದಲ್ಲೂ ನಮೂದಾಗಿರಲಿಕ್ಕಿಲ್ಲ ಅಥವಾ ಮೊದಲ ಪ್ರೇಮವನ್ನೇ ಗಟ್ಟಿಯಾಗಿ ಹಿಡಿದಿಟ್ಟುಕೊಂಡು ಕಾಯುವ ಹುಡುಗನೂ ಸಿಗಲಿಕ್ಕಿಲ್ಲ. ಇನ್ನೂ ಎಷ್ಟು ವರ್ಷಗಳ ತನಕ ಮೀರಾ ಮಾಧವರ ಕಥೆಯನ್ನೇ ಎಳೆದಾಡುವುದು? ಸತಾಯಿಸದೆ ಸಮ್ಮತಿಸು ಅತ್ಯುತ್ಕೃಷ್ಟ ಪ್ರೇಮಕಥೆಯೊಂದು ಸೃಷ್ಟಿಯಾಗಲಿ.

ಇಂತಿ,
         ಕನಸು ಕಂಗಳ ಹುಡುಗ
         ಸ್ಕಂದ ಆಗುಂಬೆ.

(ಮೂಲಪ್ರತಿ)

ಈ ಲೇಖನ ಪ್ರಜಾವಾಣಿ ದಿನಪತ್ರಿಕೆಯ ಮೆಟ್ರೋ (ಮೈಸೂರು ಆವೃತ್ತಿ) ಪುರವಣಿಯಲ್ಲಿ ಪ್ರಕಟವಾಗಿದೆ.


"ಕಂದ" ಪದ್ಯ

ಎಷ್ಟು ಚಂದ ನಮ್ಮ ಕಂದ ಬಾಯಿ ತೆರೆದು ನಕ್ಕರೆ ಪುಟ್ಟ ಹಲ್ಲು, ಹಾಲುಗಲ್ಲ ನಗುವೆ ಸಿಹಿಯ ಸಕ್ಕರೆ ನಮ್ಮ ಕಂದ ಇನ್ನೂ ಚಂದ ಸಿಟ್ಟು ಮಾಡಿಕೊಂಡರೆ ಕೆಂಪು ಮೂಗು,...