Thursday, 27 April 2017

ನಿನ್ನ ಮುಂಗುರುಳ ತಿರುವು ಅಪಘಾತ ವಲಯ..!!

ಕಣ್ಸೆಳೆತದಲ್ಲೆನ್ನೆದೆಗಡಲಲೆಗಳೇರಿಳಿತಗಳನೇರುಪೇರುಗೊಳಿಸಿದವಳೇ..

     ಲಯ ತಪ್ಪಿದ ಹೃದಯ ಬಡಿತದ ಸಮ್ಮುಖದಲ್ಲೇ ನಿನಗಾಗಿ (ಕೊನೆಯದಾಗಿ?) ಈ ಪತ್ರ ಬರೆಯುತ್ತಿದ್ದೇನೆ.. ಒಪ್ಪಿಸಿಕೋ..

ಸಂವತ್ಸರವೊಂದು ಕಳಚಿ ಬಿದ್ದು ಹೊಸದಕ್ಕೆ ದಾರಿ ಮಾಡಿಕೊಟ್ಟಿದೆ ಅಂತೆಯೇ ಸಂಬಂಧವೂ ಕೂಡ.. ಆದರಿಲ್ಲಿ ಹೊಸದರ ನೆರಳು ಇಣುಕುವ ಸಾಧ್ಯತೆ ಕಡಿಮೆ ಇದೆ ಅದಕ್ಕಾಗಿ ಸದ್ಯದ ಪರಿಸ್ಥಿಯ ಮಟ್ಟಿಗೆ ಇದು ಯುಗಾಂತ್ಯ.
ಇಷ್ಟು ವರ್ಷಗಳವರೆಗೆ ಕಣ್ಣಲ್ಲಿ ಕಾಪಿಟ್ಟುಕೊಂಡು ಬಂದಿದ್ದ ನಿನ್ನ ಬಿಂಬ ಕದಡಿ ಹೋಗಿದೆ, ಎದ್ದಿರುವ ಅಲೆಗಳು ಮೌನವಾಗುವ ಸಂಭವವಂತೂ ಕಾಣುತ್ತಿಲ್ಲ, ಬೊಗಸೆಯಲ್ಲಿ‌ ನಿನ್ನ ಬಿಂಬವ ಬಂಧಿಸಿ ಉಳಿಸಿಕೊಳ್ಳೋಣವೆಂದರೆ ನಡುಗುವ ಕೈಗಳು ಅದಕ್ಕೆ ಸಹಕರಿಸುತ್ತಿಲ್ಲ, ಅಸಹಾಯಕ ಅಮಾಯಕ ನಿರ್ದೋಷಿ ನಿರಪರಾಧಿಗೆ ನೀ ಕೊಟ್ಟ ಜೀವಾವಧಿ ಶಿಕ್ಷೆಯನ್ನು ವಜಾಗೊಳಿಸುವ ಮುನ್ಸೂಚನೆಯಂತೂ ಯಾವ ದಿಕ್ಕಿನಲ್ಲೂ ತೋರುತ್ತಿಲ್ಲ, ಕನಸುಗಳನ್ನೆಲ್ಲ ಕಳೆದುಕೊಂಡು ಬದುಕಿನ ನಡುಬೀದಿಯಲಿ ದಿವಾಳಿಯಾಗಿ ಕುಳಿತಿರುವೆ.‌. ಮುಂದೇನು?

ಅದ್ಯಾಕೆ ಅಷ್ಟೊಂದು ಕಟುವಾಗಿ ಹೋದೆ? ಚಿಕ್ಕ ಪುಟ್ಟ ವಿಷಯಗಳಿಗೂ ತಲೆ ಕೆಡಿಸಿಕೊಳ್ಳುತ್ತಿದ್ದವಳು, ನಾ ಪರಿಪರಿಯಾಗಿ ಬೇಡಿಕೊಂಡರೂ ನಿರ್ಲಕ್ಷಿಸಿ ಬಿಟ್ಟೆಯಲ್ಲಾ? ಹೊರಟು ಹೋಗು ಅಂತ ಒಲ್ಲದ ಮನಸ್ಸಿನಿಂದಲೇ ಹೇಳಿ ಕಳಿಸಿಬಿಟ್ಟೆಯಲ್ಲಾ? ನಿನ್ನಿಷ್ಟವನ್ನೆಲ್ಲಾ ಒತ್ತೆಯಿಟ್ಟು ಏನನ್ನ ಸಾಧಿಸೋಕೆ ಹೊರಟಿದ್ದಿ? ನನ್ನ ನಿಷ್ಕಲ್ಮಶ ಭಾವವೀಗ ಜೀವವಿಲ್ಲದೆ ತಣ್ಣಗೆ ಬಿದ್ದಿದೆ.

ನೀ ಹೋಗಿದ್ದೋ? ನಾನೇ ಕಳಿಸಿದ್ದೋ? ಗೊಂದಲವಿನ್ನೂ ಸತ್ತಿಲ್ಲ. ನೀ ಉಳಿಯುತ್ತೇನೆಂದರೂ ಉಳಿಸಿಕೊಳ್ಳುವ ಶಕ್ತಿ ನನಗಿರಲಿಲ್ಲವಾ? ಅಥವಾ ನೀ ಬಯಸಿದಂತೆ ನನಗಿರಲು ಸಾಧ್ಯವಾಗುವುದಿಲ್ಲವೆಂಬುದೇ ಎಲ್ಲದಕ್ಕೂ ಮೂಲವಾ? ಸಂಬಂಧಕ್ಕೆ ನಾಂದಿ ಹಾಡುವ ಮುನ್ನ ಮೂಡುತ್ತಿದ್ದ ಹತ್ತಾರು ಕಾರಣಗಳು, ನಿಷ್ಕಾರಣವಾಗಿ ಚೂರಾಗಿವೆ. ನನ್ನ ಜೀವನದಲ್ಲಿ ರಕ್ತಸಂಬಂಧಗಳಾಚೆಗೆ ಬಹುವಾಗಿ ಪ್ರೀತಿಸಿದ್ದು ನಿನ್ನನ್ನು ಮಾತ್ರ.. ಅಂತಹ ನೀನೇ ಕಾರಣ ನೀಡದೆ ಹೊರಟುಬಿಟ್ಟರೆ ಏನೆಂದುಕೊಳ್ಳಲಿ? ಸಂಪೂರ್ಣ ಕಾರಣ ತಿಳಿದುಕೊಳ್ಳಲೂ ಯೋಗ್ಯತೆ ಇಲ್ಲದವನಾಗಿ ಹೋದೆನಾ?

ಜೊತೆಗಿದ್ದ ಜೀವವೊಂದು ಕನಸಾಗಿ ಪರಿವರ್ತನೆ ಹೊಂದುವ ವೇಳೆಯಲ್ಲಿ ಅಸಹಾಯಕನಾಗಿ ನಿಂತು ನೋಡುವಾಗ ಎದೆಯಲ್ಲಾಗೋ ಸಂಕಟವಿದೆಯಲ್ಲಾ ಅದಕ್ಕೆ ಸಾಟಿಯಿಲ್ಲ.
ತುಟಿಯಂಚಲ್ಲಿ ಮೂಡುವ ಕಿರುನಗೆಗೆ ಇನ್ನೆಂದೂ ನೀ ಕಾರಣವಾಗುವುದಿಲ್ಲ ಎಂದು ನೆನೆದರೇ ಮನಸ್ಸು ಬಿಕ್ಕಳಿಸುತ್ತದೆ.

ನಿನ್ನ ಮುಂಗುರುಳ ತಿರುವಲ್ಲಿ "ಅಪಘಾತ ವಲಯ.. ಎಚ್ಚರಿಕೆ!!" ಎಂಬ ಸೂಚನಾ ಫಲಕ ಹಾಕಿಸಿಬಿಡು, ಇನ್ಯಾವುದೋ ಬಡಪಾಯಿಯ ಕನಸು ನುಚ್ಚುನೂರಾಗುವ ಮುನ್ನ.
ನನಗಾದಂಥ ಅನುಭವ ನಿನಗಾಗದಿರಲಿ, ನಿನ್ನಿಷ್ಟಗಳೆಲ್ಲಾ ನಿನಗೆ ದಕ್ಕಲಿ, ನಿನ್ನ ಕನಸುಗಳೆಲ್ಲಾ ಈಡೇರಲಿ, ನಿನ್ನ ಜೀವನ ತುಂಬಾ ಎತ್ತರಕ್ಕೇರಿ ಉಜ್ವಲವಾಗಿ ಬೆಳಗಲಿ ಆದರೆ ಆ ಬೆಳಕು ಅಪ್ಪಿಪತಪ್ಪಿಯೂ ನನ್ನ ಕಣ್ಣಿಗೆ ಬೀಳದಿರಲಿ..
ಗುಂಡಗಿರೋ ಭೂಮಿಯಲ್ಲಿ ಎಷ್ಟೇ ನಡೆದರೂ ನಾವಿಬ್ಬರೂ ಮತ್ತೆ ಸಂಧಿಸದಿರಲಿ.. ಮುಖ ನೋಡಿಯೂ ನೋಡದಂತೆ ನಟಿಸಿ ನೋವುಣ್ಣುವ ದೌರ್ಭಾಗ್ಯ ನನಗೆ ಬರದಿರಲಿ, ನಿನ್ನ ದುಪ್ಪಟ್ಟಾದಿಂದ ಹೊರಬೀಳುವ ಘಮ ನನ್ನ ಮೂಗಿಗೆ ಬಡಿಯದಿರಲಿ.. ಹೊರಟುಹೋಗುತ್ತಿರುವ ಶುಭ ಸಂದರ್ಭದಲ್ಲಿ ನಿನ್ನ ಹೆಜ್ಜೆ ಗುರುತುಗಳನ್ನೂ ಅಳಿಸಿ ಹೊರಟು ಬಿಡು, ಇಲ್ಲವಾದಲ್ಲಿ ಅದರೊಳಗೆ ಕಾಲಿಟ್ಟು ನಾ ಎಡವುವ ಸಾಧ್ಯತೆ ಇದೆ.

ಕೊನೆಯದಾಗಿ.. ನಿನ್ನ ಕಾಲಿಗೆ ಗೆಜ್ಜೆ ಕಟ್ಟುವ ಆಸೆಯೊಂದು ಹಾಗೇ ಉಳಿದುಹೋಗಿದೆ ಮರೆಯೋಕಂತೂ ಆಗೋದಿಲ್ಲ ಕಡೇಪಕ್ಷ ಮುಂದೆ ಯಾವುದಾದರೂ ಗೆಜ್ಜೆ ಸದ್ದು ಕೇಳಿದಾಗ ಬಂದು ಕಾಡದಿರು..

ವಿಶ್ ಮಿ ಗುಡ್ ಲಕ್

ಇಂತಿ..
ಕನಸಿನ ಗೋರಿಯ ಕಾವಲುಗಾರ
ಸ್ಕಂದ ಆಗುಂಬೆ

ಈ ಲೇಖನ ಕನ್ನಡಪ್ರಭ ದಿನಪತ್ರಿಕೆಯ ಕ್ಯಾಂಪಸ್ ಪುಟದಲ್ಲಿ ಪ್ರಕಟವಾಗಿದೆ...

                       (ಮೂಲಪ್ರತಿ)

"ಕಂದ" ಪದ್ಯ

ಎಷ್ಟು ಚಂದ ನಮ್ಮ ಕಂದ ಬಾಯಿ ತೆರೆದು ನಕ್ಕರೆ ಪುಟ್ಟ ಹಲ್ಲು, ಹಾಲುಗಲ್ಲ ನಗುವೆ ಸಿಹಿಯ ಸಕ್ಕರೆ ನಮ್ಮ ಕಂದ ಇನ್ನೂ ಚಂದ ಸಿಟ್ಟು ಮಾಡಿಕೊಂಡರೆ ಕೆಂಪು ಮೂಗು,...