ಜೀವನದ ಜಂಜಾಟದಲ್ಲಿ ಭಾವನೆ, ಸಂಬಂಧಗಳಿಗಿಂತ ಮುಖ್ಯವಾಗುವ ಕೆಲಸ, ಅಷ್ಟೋ
ಇಷ್ಟೋ ದುಡ್ಡು ಕೊಟ್ಟು ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸಿ ತಮ್ಮ ಜವಾಬ್ಧಾರಿ ಮುಗಿಯಿತೆಂದು
ಕೈ ತೊಳೆದುಕೊಳ್ಳುವ ಮಕ್ಕಳು, ಮಾನವೀಯತೆಯೇ ಕಾಣೆಯಾಗಿದೆ ಎಂದು ನಿಟ್ಟುಸಿರು ಬಿಡುವ ವೇಳೆಯಲ್ಲಿ ಕಾಣುವ
ನಿಸ್ವಾರ್ಥ ಕೈಗಳು ಇವೆಲ್ಲವೂ ಪ್ರಸ್ತುತ ಸಮಾಜದಲ್ಲಿ ಪ್ರತಿನಿತ್ಯ ನಮಗೆ ಕಾಣಸಿಗುತ್ತವೆ, ಹೀಗೆ ಸಂಬಂಧಗಳು
ಮಹತ್ವ ಕಳೆದುಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಸಂಬಂಧಗಳ ಪ್ರಾಮುಖ್ಯತೆಯನ್ನು ಕಥೆಯ ರೂಪದಲ್ಲಿ ತೆರೆದಿಡುತ್ತಾ
ನೋಡುಗನಿಗೆ ಅದನ್ನು ಮನಮುಟ್ಟುವಂತೆ ನಿರೂಪಿಸುವಲ್ಲಿ "ಗೋಧಿ ಬಣ್ಣ ಸಾಧಾರಣ ಮೈಕಟ್ಟು"
ಚಿತ್ರದ ನಿರ್ದೇಶಕ ಹೇಮಂತ್ ಯಶಸ್ವಿಯಾಗಿದ್ದಾರೆ.
ಮರೆಗುಳಿ (Alzheimers) ಖಾಯಿಲೆಗೆ ತುತ್ತಾಗಿರುವ ಅಪ್ಪ ವೆಂಕೋಬ ರಾವ್,
ಅಪ್ಪನಿಗಿಂತ ಕೆಲಸವೇ ಮುಖ್ಯವೆಂದು ಆ ಖಾಯಿಲೆ ಬಂದಿರುವವರನ್ನು ನೋಡಿಕೊಳ್ಳುವುದಕ್ಕಾಗಿಯೇ ಇರುವ ಒಂದು
ಸಂಸ್ಥೆಗೆ ಅಪ್ಪನನ್ನು ಸೇರಿಸಿ ಹೊರಟು ಹೋಗುವ ಮಗ ಶಿವ, ಆತನಿಗೆ ಅಪ್ಪನ ಮೇಲೆ ಪ್ರೀತಿ - ಕಾಳಜಿ ಇಲ್ಲದಿದ್ದರೂ
ಆಕಸ್ಮಿಕವಾಗಿ ಅಪ್ಪ ಕಳೆದುಹೋದಾಗ ಅವರನ್ನು ಹುಡುಕಲು ಶುರುಮಾಡುತ್ತಾನೆ, ಹುಡುಕಾಟದಲ್ಲಿ ವೆಂಕೋಬರನ್ನು
ನೋಡಿಕೊಳ್ಳುತ್ತಿದ್ದ ಸಂಸ್ಥೆಯ ವೈದ್ಯೆ ಸಹನಾ ಅವನ ಜೊತೆಗೆ ಸೇರಿಕೊಳ್ಳುತ್ತಾರೆ, ಹುಡುಕಾಟದ ಸಂದರ್ಭದಲ್ಲಿ
ಬಿಚ್ಚಿಕೊಳ್ಳುವ ಹೊಸ ಹೊಸ ಕಥೆಗಳು ಅವನಿಗೇ ತಿಳಿಯದಂತೆ ಅಪ್ಪನ ಮೇಲೆ ಪ್ರೀತಿಯನ್ನು ಮೂಡಿಸುತ್ತದೆ.
ಇತ್ತ ದಾರಿ ತಪ್ಪಿಸಿಕೊಂಡು ಅಲೆದಾಡುವ ತಂದೆ ಯಾವುದೋ ಕೊಲೆಗಾರನೊಬ್ಬನ ಗಾಡಿ ಹತ್ತಿ ಕೂರುತ್ತಾನೆ,
ಆ ಸಂದರ್ಭದಲ್ಲಿ ನಡೆಯುವ ರಸ್ತೆ ಅಪಘಾತ, ಅಲ್ಲಿಗೆ ಬರುವ ಮೂರನೆ ವ್ಯಕ್ತಿ, ನಂತರ ಅವನ ಮನೆ ಸೇರುವ
ಕೊಲೆಗಾರರು ಮತ್ತು ವೆಂಕೋಬ ರಾವ್ ಹೀಗೆ ಕಥೆ ಎಳೆ ಎಳೆಯಾಗಿ ತೆರೆದುಕೊಳುತ್ತಾ ಹೋಗುತ್ತದೆ. ಮರೆಗುಳಿ
ವ್ಯಕ್ತಿಯ ಪಾತ್ರದಲ್ಲಿ ಅನಂತ್ ನಾಗ್ ಮಿಂಚಿದ್ದಾರೆ, ಸತ್ತು ಹೋದ ಹೆಂಡತಿಯ ಬಗ್ಗೆ ಪದೇ ಪದೇ ಕೇಳುತ್ತಾ,
ಮುಗ್ಧ ಮಗುವಿನಂತೆ ಪ್ರತಿಯೊಂದನ್ನೂ ಕುತೂಹಲದಿಂದ ನೋಡುತ್ತಾ ಪ್ರೇಕ್ಷಕರನ್ನು ಕಾಡುತ್ತಾರೆ. ಮೊದಮೊದಲು
ಬೇಜವಾಬ್ದಾರಿಯುತ ಮಗನಾಗಿ ಕಾಣಿಸಿಕೊಳ್ಳುವ ರಕ್ಷಿತ್ ಶೆಟ್ಟಿ ನಂತರ ತಂದೆಗಾಗಿ ಹಪಹಪಿಸುವ ಮಗನಾಗಿ
ನೋಡುಗರ ಮನ ಗೆಲ್ಲುತ್ತಾರೆ. ಭಾವನೆಗಳಿಗೆ ಬೆಲೆ ಕೊಡುವ ಹೆಣ್ಣಾಗಿ, ಜವಾಬ್ದಾರಿಯುತ ವೈದ್ಯೆಯಾಗಿ ಕಾಣಿಸಿಕೊಂಡಿರುವ ಶೃತಿ ಹರಿಹರನ್ ಇಷ್ಟವಾಗುತ್ತಾರೆ. ಹೆತ್ತವರ ಮಹತ್ವವನ್ನು ತಮ್ಮದೇ ಧಾಟಿಯಲ್ಲಿ
ಹೇಳುವ ದತ್ತಣ್ಣ, ದಾರಿ ತಪ್ಪಿಸಿಕೊಂಡು ಕೊಲೆಗಾರರ ಜೊತೆ ಬಂದು ಮನೆ ಸೇರುವ ವೆಂಕೋಬರನ್ನು ತಮ್ಮದೇ
ಮನೆಯ ಸದಸ್ಯನಂತೆ ನೋಡಿಕೊಳ್ಳುವ ಅಚ್ಯುತ್ ಪ್ರೇಕ್ಷಕನ ಮನದಲ್ಲಿ ಅಚ್ಚೊತ್ತುತ್ತಾರೆ. ಮನುಷ್ಯ ಎಷ್ಟೇ
ಕ್ರೂರಿಯಾದರೂ ಅವನೊಳಗೊಬ್ಬ ಸಾತ್ವಿಕ ವ್ಯಕ್ತಿ ಇದ್ದೇ ಇರುತ್ತಾನೆ, ಅನಿವಾರ್ಯತೆ ಅವನನ್ನು ಕೆಟ್ಟವನನ್ನಾಗಿಸುತ್ತದೆ
ಎಂದು ತೋರಿಸುವ ಕೊಲೆಗಾರನ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಸಿಷ್ಟ ಸಿಂಹ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಇನ್ನುಳಿದಂತೆ ಸಂಭಾಷಣೆ ಕೇಳಲು ಹಿತವಾಗಿದೆ, ಹಿನ್ನೆಲೆ ಸಂಗೀತವೂ ಅತ್ಯದ್ಭುತವಾಗಿ ಮೂಡಿ ಬಂದಿದೆ,
ದ್ವಿತೀಯಾರ್ಧದಲ್ಲಿ ಕೆಲ ನಿಮಿಷಗಳ ಕಾಲ ಕಥೆ ತೆವಳಿಕೊಂಡು ಹೋಗುವಂತೆ ಭಾಸವಾಗುತ್ತದೆ ಹಾಗೂ ಛಾಯಾಗ್ರಹಣ
ಇನ್ನಷ್ಟು ಸುಂದರವಾಗಿ ಮೂಡಿ ಬಂದಿದ್ದರೆ ಸೊಗಸಾಗಿತ್ತು ಎನಿಸುತ್ತದೆ, ಇವೆರಡು ಅಂಶಗಳನ್ನು ಬದಿಗಿಟ್ಟರೆ
ಗೋಧಿ ಬಣ್ಣ ಸಾಧಾರಣ ಮೈಕಟ್ಟು ಅತ್ಯದ್ಭುತ ಚಲನಚಿತ್ರ ಎಂಬುದರಲ್ಲಿ ಸಂದೇಹವಿಲ್ಲ, ಒಟ್ಟಿನಲ್ಲಿ ಕನ್ನಡ
ಚಿತ್ರರಂಗಕ್ಕೆ ಕಟ್ಟುಮಸ್ತಾದ ಚಿತ್ರವೊಂದು ಎಂಟ್ರಿ ಕೊಟ್ಟಿದೆ.
