Friday, 18 December 2015

ಬಾರದ ಹುಡುಗಿಗೆ ಹಂಬಲಿಸಿದೆ ಮನ....

                                                                   

ಓ ದೇವರೇ..
                   ನಿನ್ನನ್ನ ಎಲ್ರೂ ತ್ರಿಕಾಲ ಜ್ಞಾನಿ ಅಂತಾರೆ!!  ನೀ ಯಾವ ಸೀಮೆಯ ಜ್ಞಾನಿಯೋ??  ಇಷ್ಟ್ ದಿನ ಕೈ ಮುಗಿದು ಕಾಪಾಡು ತಂದೆ ಅಂತಿದ್ದ ಹುಡುಗ ಈಗ ಹೀಗ್ಯಾಕೆ ಮಾತಾಡ್ತಿದ್ದಾನೆ ಅನ್ನೋದು ನಿಂಗೆ ಗೊತ್ತಿರ್ಲೇಬೇಕು ಬಿಕಾಸ್ ಯೂ ಆರ್ ಎ ತ್ರಿಕಾಲ ಜ್ಞಾನಿ ನೋ? ಹೋಗೋಗು ಇನ್ಮುಂದೆ ನಾ ನಿನ್ ಮೇಲೆ ಯಾವತ್ತೂ ನಂಬ್ಕೆ ಇಡಲ್ಲ.
                    ಆ ಹುಡ್ಗಿ ನನ್ನನ್ನ ಯಾವತ್ತಿಗೂ ಪ್ರೀತ್ಸೋದಿಲ್ಲ ಅನ್ನೋದು ನಿಂಗೆ ಗೊತ್ತಿರ್ಲಿಲ್ವಾ? ಗೊತ್ತಿಲ್ಲ ಅನ್ಬೇಡಪ್ಪಾ, ನೀನು ತ್ರಿಕಾಲ ಜ್ಞಾನಿ! ಮುಂದೇನಾಗುತ್ತೆ ಅನ್ನೋದು ನಿಂಗೆ ಗೊತ್ತಿಲ್ದೇ ಇರುತ್ತಾ?? ಮೋಸ್ಟ್ಲಿ ನಿನಗೆ ಹುಡುಗರ ಮೇಲೆ ದ್ವೇಷ ಇದೆ ಅನ್ಸುತ್ತೆ ಅದ್ಕೆ ಹೆಚ್ಚಿನ ಹುಡುಗ್ರು ಲೈಫಲ್ಲಿ ಒಂದೊಂದು ಇತಿಹಾಸ ಇಡ್ತೀಯ!! ಅಲ್ಲಯ್ಯಾ ಚಿಕ್ಕಂದಿನಿಂದಲೂ ಅಜ್ಜ ಹೇಳ್ಕೊಟ್ಟ ಶ್ಲೋಕಗಳನ್ನ ಒಂದಿನಾನೂ ತಪ್ಪಿಸ್ದೆ ನಿಂಗೆ ಒಪ್ಸಿದ್ದಕ್ಕೆ ಇಂಥಾ ಕಾಣಿಕೆ ಕೊಡೋದಾ??
                      ಓಯ್ ನನ್ ಮಾತು ಕೇಳ್ಸ್ಕೊತ್ತಿದ್ದೀಯಾ? ಈಗ ನಾ ಕೇಳೋದಕ್ಕೆಲ್ಲಾ ಉತ್ರ ಕೊಡು. ಅವ್ಳನ್ನ ನನ್ ಜೀವ್ನಕ್ಕೆ ಯಾಕೆ ಪರಿಚಯ್ಸಿದ್ದು?? ಅದೂ ಸಾಲದು ಅನ್ನೋ ಹಾಗೆ ಅವ್ಳನ್ನ ತೀರಾ ಹತ್ರ ಮಾಡಿದ್ಯಾಕೆ?? ಊಹುಂ.. ಅದ್ಕೂ ಮೊದ್ಲು ಅವ್ಳ ಮೇಲೆ ನಂಗೆ ಪ್ರೀತಿ ಬೆಳೆಯೋ ಹಾಗೆ ಮಾಡಿದ್ಯಾಕೆ ಅಂತ ಹೇಳು. ಓಹ್.. ಮುಂದೆ ಮದ್ವೆ ಆಗೋ ಹುಡ್ಗೀಗೆ ಹೇಳೋಕೆ ಹಳೆ ಕಥೆ ಒಂದಿರ್ಲಿ ಅಂತಾನಾ? ನಿಂಗಿದು ಹೊಸತೇನಲ್ಲ ಬಿಡು ನನ್ ತರಾನೇ ಎಷ್ಟೋ ಹುಡ್ಗುರಿಗೆ ಹೀಗೆ ಮಾಡಿ ಮಜಾ ತಂಗೊಡಿದ್ದಿ ಅಲ್ವಾ? ನೀ ಮಾತ್ರ ಇಷ್ಟ ಪಟ್ಟೋರನ್ನೇ ಪಟಾಯಿಸಿಕೊಳ್ತೀಯಾ! ಒಂದೊಂದು ಸರಿ ಒಂದೊಂದ್ ಹೆಸ್ರು ಇಟ್ಕೊಂಡು ನಾಲ್ಕೈದು ಮದ್ವೆ ಆಗ್ತೀಯ ಬಟ್ ನಾವು ನಿಯತ್ತಾಗಿ ಒಬ್ರನ್ನೇ ಇಷ್ಟ ಪಟ್ರೂ ನಮ್ಗೆ ಮೋಸ ಮಾಡಿಸ್ತೀಯ. ನಮ್ ಮಠದಲ್ಲಿ ಹೇಗೂ ಸ್ವಾಮಿಗಳಿಲ್ಲ ಸೋ ಆ ಜಾಗಕ್ಕೆ ನನ್ನನ್ನ ಕೂರಿಸ್ಬೇಕು ಅಂತ ಸ್ಕೆಚ್ ಏನಾದ್ರೂ ಹಾಕಿದ್ದೀಯಾ?? ಹಂಗೆಲ್ಲಾ ಮಾಡಿದ್ ಗೊತ್ತಾದ್ರೆ ಸರಿ ಇರಲ್ಲ ನೋಡು. ಅದಿರ್ಲಿ ಯಾವಾಗ್ಲೂ ಹುಡುಗರೇ ಹುಡ್ಗೀರ ಭಾವನೆಗಳಿಗೆ ಬೆಲೆ ಕೊಡ್ಬೇಕಾ?? ನಮ್ಗೆ ಬೆಲೇನೇ ಇಲ್ವಾ? ಒಂದ್ ಕಣ್ಣಿಗೆ ಬೆಣ್ಣೆ ಒಂದ್ ಕಣ್ಣಿಗೆ ಸುಣ್ಣ ಇದೆಂಥಾ ನ್ಯಾಯ ಗುರೂ??
                  ಹೋಗ್ಲಿ ಬಿಡು ಫ್ಲೋ ಅಲ್ಲಿ ಏನೇನೋ ಹೇಳ್ಬಿಟ್ಟೆ ಬೇಜಾರ್ ಮಾಡ್ಕೊಬೇಡ, ಊಫಿ. ದೇವ್ರು.. ನಾಯಿ ಬಾಲಕ್ಕೆ ಏನ್ಮಾಡಿದ್ರೂ ಅದು ಡೊಂಕೇ ಕಣೋ ಅದ್ಕೆ ಹೇಳ್ತಿದೀನಿ ಕೇಳು ಅವ್ಳನ್ನ ಏನಾರ್ ಮಾಡಿ ಒಪ್ಸೋ.. ಪ್ಲೀಸ್ ಪ್ಲೀಸ್ ಪ್ಲೀಸ್… ಎಂಥೆಥಾ ಪವಾಡಗಳನ್ನ ಮಾಡ್ದೋನು ನೀನು ಅಂತಹದ್ದರಲ್ಲಿ ಈ ಕೆಲ್ಸ ಆಗಲ್ವ?? ಯೂ ಕ್ಯಾನ್ ಡು ಇಟ್ ದೇವ!! ಆಗಿದ್ದಾಗ್ಲಿ ನಿನ್ ಪವರ್ ತೋರ್ಸೇ ಬಿಡು. ಅಂದ್ಹಾಗೆ ಇದಕ್ಕೆ ಈಗ್ಲೇ ಉತ್ರ ಕೊಡು - ಬಾರದ ಹುಡುಗಿಗೆ ಹಂಬಲಿಸಿದೆ ಮನ.. ಬರುವಳೇನೋ ಒಂದು ದಿನ.. ಹುಡುಗಿಯು ಅರಿವಳೇನೋ ನನ್ನ ಮನ.

                                     
ಇಂತಿ ನಿನ್ ದೋಸ್ತಿ,
ಕೆ.ಎನ್.ಸ್ಕಂದ ಆಗುಂಬೆ.


  (ಮೂಲಪ್ರತಿ)
 ಈ ಪ್ರೇಮಪತ್ರ ಕನ್ನಡಪ್ರಭ ದಿನಪತ್ರಿಕೆಯ ಕ್ಯಾಂಪಸ್ ಪುಟದಲ್ಲಿ ಪ್ರಕಟವಾಗಿದೆ.
                                                        
                              

Tuesday, 1 December 2015

ನಂಬಲೇನಾ ನಿನ್ನಾ ನಗೆಯನ್ನಾ??




ಹುಡುಗೀ..
             ಎಷ್ಟೋ ದಿನಗಳ ನಂತರ ಮತ್ತೆ ಮನದಲ್ಲಿ ಮುಗುಳ್ನಗೆಯೊಂದು ಮೂಡಿದೆ. ಬರಗಾಲದಿಂದ ಕಾದುಹೋಗಿದ್ದ ಹೃದಯದಂಗಳ ನೆನಪುಗಳ ಮಳೆಗೆ ಮೈಯೊಡ್ಡಿ ನೆನೆಯುತಿದೆ. ನಿನ್ನ ಮಾತು, ನಿನ್ನ ನಗು, ನಿನ್ನ ಕೋಪ ಎಲ್ಲವೂ ಮತ್ತೆ ಮನದ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿವೆ. ಇವಕ್ಕೆಲ್ಲಾ ಕಾರಣ ಆ ನಿನ್ನ ಒಂದೇ ಒಂದು ಕಣ್ಣೋಟ. ಅವತ್ತು ನೀನು ಮತ್ತೆ ನಿನ್ ಫ್ರೆಂಡ್ಗಳು ನಾ ಬರೆದ ಲೆಟರ್ ಗಳನ್ನೆಲ್ಲಾ ಓದುತ್ತಿರಬೇಕಾದರೆ ನಿನ್ ಫ್ರೆಂಡೊಬ್ಬಳು ನನ್ನ ಮುಖ ನೋಡಿ ಅಣ್ಣಾ.. ನಿಮ್ ಹುಡ್ಗಿ ಫೋಟೋ ತೋರ್ಸಿ ಅಂದಕೂಡಲೇ ನೀನು ಛಕ್ಕನೆ ನನ್ನ ಕಡೆ ತಿರುಗಿ ನಿನ್ನ ಮಾಮೂಲೀ ಸ್ಟೈಲ್ ನಲ್ಲಿ ಗುರಾಯಿಸಿಕೊಂಡು ನೋಡಿ, ಒಂಥರಾ ಸ್ಮೈಲ್ ಬಿಸಾಕಿದ್ಯಲ್ಲಾ ಅದ್ರ ಜೊತೆಗೆ ಉರಿಯೋ ಬೆಂಕಿಗೆ ತುಪ್ಪ ಸುರಿಯೋ ಥರದಲ್ಲಿ ಆಮೇಲೆ ನಂಗೆ ಕಾಲ್ ಮಾಡಿ ಮೊದಲಿನ ಥರಾನೇ ಕ್ಯೂಟ್ ಕ್ಯೂಟಾಗಿ ಮಾತಾಡ್ಕೊಂಡು, "ನೀ ಬರೆದ ಲೆಟರ್ ಎಲ್ಲವೂ ಚೆನ್ನಾಗಿದೆ ನಂಗೆ ಇಷ್ಟ ಆಯ್ತು" ಅಂದ್ಯಲ್ಲಾ ಅದೇ ಇಷ್ಟಕ್ಕೆಲ್ಲಾ ಮೂಲ ಕಾರಣ. ಅದ್ಯಾಕೋ ಗೊತ್ತಿಲ್ಲ ನೀ ಹಂಗೆ ನೋಡಿದಾಗಿನಿಂದ ನನ್ನ ಮನಸ್ಸು "ಅವ್ಳು ನಿನ್ನನ್ನ ಲವ್ ಮಾಡ್ತವ್ಳೆ ಕಣೋ" ಅಂತ ಹೇಳೋಕೆ ಶುರು ಮಾಡಿದೆ. ಹೌದೋ? ಇಲ್ವೋ? ಅಂತ ನಿನ್ನನ್ನೇ ಕೇಳೋಣ ಅಂತಂದ್ರೆ ಅದೇ ಮನಸ್ಸು ಅಡ್ಡಗಾಲು ಹಾಕ್ತಾ ಇದೆ. ಸೋ ನಂದೊಂಥರಾ ಒನ್ ಅಂಡ್ ಹಾಫ್ ವೇ ಲವ್ ಆಗೋಗಿದೆ.
             ಅಂದಹಾಗೆ ನಿನಗೆ ತಲೆ ಒಳಗೆ ಹುಳ ಬಿಡೋ ವಿದ್ಯೆ ಹೇಳಿಕೊಟ್ಟವ್ರು ಯಾರು ಮಾರಾಯ್ತಿ? ನಾನೊಬ್ಬನೇ ಇದ್ದಾಗ ಏಯ್..ಹೋಗೋ, ಬಾರೋ ಅಂತ ಕರ್ಕೊಂಡು. ಯಾರಾದ್ರು ಬಂದ ತಕ್ಷಣ ಅಣ್ಣಾ ಅಂತ ರಾಗ ಎಳೀತೀಯಾ, ಸಾಲದ್ದಕ್ಕೆ ಸಂಜೆ ಹೊತ್ತಲ್ಲಿ ಫೋನ್ ಮಾಡಿ ನಿನ್ ಲೆಟರ್ರು ಚೆನ್ನಾಗಿದೆ. ನಾ ನಿಂಗೆ ಏನೋ ಹೇಳ್ಬೇಕು ಅಂತ ಹೇಳಿ, ನಾ ಏನೇನೋ ಯೋಚ್ನೆ ಮಾಡ್ಕೊಂಡು ಖುಷಿ ಪಡುವಷ್ಟರಲ್ಲಿ ಅಯ್ಯೋ ಈಗ ಮರ್ತೋಯ್ತು ಇನ್ನೊಂದಿನ ಹೇಳ್ತೀನಿ ಅಂತ ಫೋನ್ ಇಡ್ತೀಯಾ. ಹಿಂಗೆಲ್ಲಾ ಮಾಡಿದ್ರೆ ನಾನ್ ಏನ್ ಅನ್ಕೋಬೇಕು?? ನಂಗೂ ಒಂದ್ ಮನಸ್ಸು ಅಂತ ಇದೆ ಕಣೇ.. ಸ್ವಲ್ಪ ಅರ್ಥ ಮಾಡ್ಕೋ. ನೀನ್ ಅವತ್ತು ನಕ್ಕಿದ್ದನ್ನೇ ಗ್ರೀನ್ ಸಿಗ್ನಲ್ ಅನ್ಕೊಂಡು ಫ್ಯೂಚರ್ ಬಗ್ಗೆ ಕನಸು ಕಾಣೋಕೆ ಆಲ್ರೆಡಿ ಶುರು ಮಾಡ್ಕೊಂಡಿದೀನಿ. ಒಂದುವೇಳೆ ನಾನಂದುಕೊಂಡಿರೋದು ಸುಳ್ಳು ಅಂತಾದ್ರೆ ತಡಮಾಡದೆ ಈ ಕೂಡಲೇ ತಿಳಿಸಿಬಿಡು. ಯಾಕಂದ್ರೆ ಕನಸಿನ ಕೋಟೆಯನ್ನ ಕಟ್ಟಿದ ಮೇಲೆ ಕೆಡುಗುವುದು ಅಷ್ಟು ಸುಲಭವಲ್ಲ. ನಿನ್ನ ನಗುವನ್ನೇ ನಂಬಿದ್ದೇನೆ. ನಗಿಸುವೆಯೋ? ಅಳಿಸುವೆಯೋ? ನಿನಗೆ ಬಿಟ್ಟಿದ್ದು.

                                                                                     ಇಂತಿ ನಿನ್ನನ್ನೇ ನಂಬಿರುವ.
ಕೆ.ಎನ್.ಸ್ಕಂದ ಆಗುಂಬೆ.
         
 (ಮೂಲಪ್ರತಿ)
 ಈ ಪ್ರೇಮಪತ್ರ ಕನ್ನಡಪ್ರಭ ದಿನಪತ್ರಿಕೆಯ ಕ್ಯಾಂಪಸ್ ಪುಟದಲ್ಲಿ ಪ್ರಕಟವಾಗಿದೆ.
                                                 

"ಕಂದ" ಪದ್ಯ

ಎಷ್ಟು ಚಂದ ನಮ್ಮ ಕಂದ ಬಾಯಿ ತೆರೆದು ನಕ್ಕರೆ ಪುಟ್ಟ ಹಲ್ಲು, ಹಾಲುಗಲ್ಲ ನಗುವೆ ಸಿಹಿಯ ಸಕ್ಕರೆ ನಮ್ಮ ಕಂದ ಇನ್ನೂ ಚಂದ ಸಿಟ್ಟು ಮಾಡಿಕೊಂಡರೆ ಕೆಂಪು ಮೂಗು,...